ಟ್ಯಾಂಕರ್‌ ಪಲ್ಟಿ: ಎಣ್ಣೆ ತುಂಬಿಕೊಳ್ಳಲು ಮುಗಿಬಿದ್ದ ಜನ

KannadaprabhaNewsNetwork | Published : Oct 16, 2023 1:45 AM

ಸಾರಾಂಶ

ಸೋರಿಕೆಯಾಗಿದ್ದ ಎಣ್ಣೆ ಹೊತ್ತೊಯ್ಯಲು ಸ್ಥಳೀಯರು ಮುಗಿಬಿದ್ದಿದ್ದ ದೃಶ್ಯ ಕಂಡುಬಂತು.

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಹರಳೆಣ್ಣೆ ತುಂಬಿದ್ದ ಟ್ಯಾಂಕರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಉರುಳಿ ಬಿದ್ದಿದ್ದರಿಂದ ಹರಳೆಣ್ಣೆ ನೆಲದ ಪಾಲಾಗಿರುವ ಘಟನೆ ಭಾನುವಾರ ರಾಷ್ಟ್ರೀಯ ಹೆದ್ದಾರಿ 50ರ ಬಣವಿಕಲ್ಲು ಬಳಿ ಜರುಗಿದೆ. ಸೋರಿಕೆಯಾಗಿದ್ದ ಎಣ್ಣೆ ಹೊತ್ತೊಯ್ಯಲು ಸ್ಥಳೀಯರು ಮುಗಿಬಿದ್ದಿದ್ದ ದೃಶ್ಯ ಕಂಡುಬಂತು.

ಹರಳೆಣ್ಣೆ ತುಂಬಿದ್ದ ಟ್ಯಾಂಕರ್‌ ತಮಿಳುನಾಡಿನಿಂದ ರಾಷ್ಟ್ರೀಯ ಹೆದ್ದಾರಿ 50ರ ಮಾರ್ಗವಾಗಿ ಗುಜರಾತ್‌ಗೆ ಹೊರಟಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್‌ ಪಲ್ಟಿಯಾಗಿದ್ದರಿಂದ ಎಣ್ಣೆ ಟ್ಯಾಂಕರ್‌ನಿಂದ ಸೋರಿಕೆಯಾಗುತ್ತಿತ್ತು. ಸುದ್ದಿ ತಿಳಿದ ಕೂಡಲೆ ಬಣವಿಕಲ್ಲು ಗ್ರಾಮಸ್ಥರು ಸ್ಥಳಕ್ಕೆ ನಾ ಮುಂದು, ತಾ ಮುಂದು ಎಂಬಂತೆ ಪಾತ್ರೆ, ಕೊಡ ಹಿಡಿದು ಎಣ್ಣೆಯನ್ನು ತುಂಬಿಕೊಳ್ಳಲು ಮುಗಿಬಿದ್ದಿದ್ದರು. ಆನಂತರ ನೆಲದಲ್ಲಿ ಸೋರಿಕೆಯಾಗಿದ್ದ ಎಣ್ಣೆಯನ್ನು ಮುಗಿಬಿದ್ದು ತುಂಬಲು ಮುಂದಾದರು. ಈ ವೇಳೆಗೆ ಕಾನಹೊಸಹಳ್ಳಿ ಪಿಎಸ್ಐ ಎರಿಯಪ್ಪ ಅಂಗಡಿ ಮತ್ತು ಸಿಬ್ಬಂದಿ ಅಗಮಿಸಿ ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Share this article