ಒಂದು ಕೋಟಿ ರು. ಕೊಟ್ಟರೆ 5 ಕೋಟಿ ರು. ಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ವಂಚಿಸಿದ ಮಹಿಳೆ ಸೇರಿ ಮೂವರು ಬಂಧನ

KannadaprabhaNewsNetwork |  
Published : Jan 28, 2025, 01:47 AM ISTUpdated : Jan 28, 2025, 04:13 AM IST
Fraud couple arrested

ಸಾರಾಂಶ

ಬೇರೊಬ್ಬರು ತನ್ನ ಬ್ಯಾಂಕ್‌ ಖಾತೆಗೆ ಹಾಕಿರುವ ಹಣ ಡ್ರಾ ಮಾಡುವುದಕ್ಕಾಗಿ ತೆರಿಗೆ ಕಟ್ಟಲು ಒಂದು ಕೋಟಿ ರು. ಕೊಟ್ಟರೆ 5 ಕೋಟಿ ರು. ಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ₹5.75 ಕೋಟಿ ಪಡೆದು ವಂಚಿಸಿದ ಆರೋಪದಡಿ ಮಹಿಳೆ ಸೇರಿ 3 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು : ಬೇರೊಬ್ಬರು ತನ್ನ ಬ್ಯಾಂಕ್‌ ಖಾತೆಗೆ ಹಾಕಿರುವ ಹಣ ಡ್ರಾ ಮಾಡುವುದಕ್ಕಾಗಿ ತೆರಿಗೆ ಕಟ್ಟಲು ಒಂದು ಕೋಟಿ ರು. ಕೊಟ್ಟರೆ 5 ಕೋಟಿ ರು. ಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ₹5.75 ಕೋಟಿ ಪಡೆದು ವಂಚಿಸಿದ ಆರೋಪದಡಿ ಮಹಿಳೆ ಸೇರಿ 3 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರೇಖಾ, ಆಕೆಯ ಪತಿ ಮಂಜುನಾಥಚಾರಿ ಮತ್ತು ಚೇತನ್‌ ಬಂಧಿತರು. ಉದ್ಯಮಿ ನಿಸಾರ್‌ ಅಹಮ್ಮದ್‌ ಎಂಬುವವರು ನೀಡಿದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಖಾಸಗಿ ಬ್ಯಾಂಕ್‌ ಹಾಗೂ ಫೈನಾನ್ಸ್‌ಗಳಲ್ಲಿ ರೇಖಾ ಸಾಲ ಕೊಡಿಸುತ್ತಿದ್ದಳು. ಈ ಬಗ್ಗೆ ತಿಳಿದುಕೊಂಡಿದ್ದ ಉದ್ಯಮಿ ನಿಸಾರ್ ಈಕೆಯನ್ನು ಸಂಪರ್ಕಿಸಿ ಸಾಲ ಕೊಡಿಸುವಂತೆ ಕೇಳಿದ್ದರು. ಆಗ ರೇಖಾ ಮತ್ತು ಸಹಚರರು ನಿಸಾರ್‌ ಅವರನ್ನು ವಂಚಿಸಲು ಸಂಚು ರೂಪಿಸಿದ್ದು, ನಗರದಲ್ಲಿ 2010ರಲ್ಲಿ ನಡೆದ ಕಾರ್ಲಟನ್‌ ಟವರ್‌ ಅಗ್ನಿ ದುರಂತ ಪ್ರಕರಣದಲ್ಲಿ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದಾನೆ. ನಾನು ಸಾಕ್ಷಿ ಹೇಳದಂತೆ ಕಾರ್ಲಟನ್‌ ಟವರ್‌ ಮಾಲೀಕರು ನನ್ನ ಖಾಸಗಿ ಅಕೌಂಟ್‌ಗೆ 25 ಕೋಟಿ ರು. ಹಣ ಹಾಕಿದ್ದಾರೆ. ಈ ಹಣ ಡ್ರಾ ಮಾಡಲು ನಾನು ತೆರಿಗೆ ಪಾವತಿಸಬೇಕು. ಹೀಗಾಗಿ ನೀವು 1 ಕೋಟಿ ರು. ಕೊಟ್ಟರೆ ನಾನು 5 ಕೋಟಿ ರು. ಕೊಡುವುದಾಗಿ ಅಮಿಷವೊಡ್ಡಿದ್ದಳು. ಇದನ್ನು ನಂಬಿದ ನಿಸಾರ್‌, ವಿವಿಧ ಹಂತಗಳಲ್ಲಿ ಆರೋಪಿಗಳಿಗೆ 5.75 ಕೋಟಿ ರು. ಹಣ ನೀಡಿದ್ದಾರೆ. ಬಳಿಕ ಯಾವುದೇ ಹಣ ನೀಡದೆ ರೇಖಾ ಮತ್ತು ಸಹಚರರು ವಂಚಿಸಿದಾಗ ನಿಸಾರ್‌ ಸಿಸಿಬಿಗೆ ದೂರು ನೀಡಿದ್ದರು.

ಮಾಜಿ ಸಚಿವಗೆ ವಂಚಿಸಿದ ರೇಖಾ ವಿರುದ್ಧ 80 ಕೇಸ್‌: ಆರೋಪಿ ರೇಖಾ ಮಹಾನ್ ವಂಚಕಿಯಾಗಿದ್ದು, ಈಕೆಯ ವಿರುದ್ಧ ಈ ಹಿಂದೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 80ಕ್ಕೂ ಅಧಿಕ ವಂಚನೆ ಪ್ರಕರಣಗಳು ದಾಖಲಾಗಿವೆ. 3 ವರ್ಷದ ಹಿಂದೆ ಮಾಜಿ ಸಚಿವ ರಾಜೂ ಗೌಡ ಹೆಸರು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ಕೆಲವರಿಂದ ಲಕ್ಷಾಂತರ ರು. ಪಡೆದು ವಂಚಿಸಿದ್ದಳು. ಈ ಸಂಬಂಧ ಮಾಜಿ ಸಚಿವರು ನೀಡಿದ ದೂರಿನ ಮೇರೆಗೆ ಸುರಪುರ ಠಾಣೆ ಪೊಲೀಸರು ರೇಖಾಳನ್ನು ಬಂಧಿಸಿ ಜೈಲಿಗಟ್ಟಿದ್ದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬೆಂಗಳೂರಲ್ಲಿ ಮೊಬೈಲ್ ಕದಿಯಲು ದೆಹಲಿಯಿಂದ ವಿಮಾನದಲ್ಲಿ ಬರುತ್ತಿದ್ದ ಚಾಲಾಕಿಗಳ ಬಂಧನ
ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ