ಭಿನ್ನ ಕಂಟೆಂಟ್‌ ಆರಿಸಿಕೊಳ್ಳಲು ಕಾರಣ ಅಪ್ಪು ಚಿಕ್ಕಪ್ಪ: ವಿನಯ್‌ ರಾಜ್‌ಕುಮಾರ್‌

Published : Jul 03, 2026, 01:46 PM IST
Vinay Rajkumar Gramayana

ಸಾರಾಂಶ

ದೇವನೂರು ಚಂದ್ರು ನಿರ್ದೇಶನದ, ಲಹರಿ ಫಿಲಂಸ್ ನಿರ್ಮಾಣದ ‘ಗ್ರಾಮಾಯಣ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ವಿನಯ್ ರಾಜ್‌ಕುಮಾರ್‌, ಮೇಘಾ ಶೆಟ್ಟಿ ನಟನೆಯ ಈ ಸಿನಿಮಾ ಕುರಿತು ವಿನಯ್‌ ರಾಜ್‌ಕುಮಾರ್‌ ಸಂದರ್ಶನ.

ಗ್ರಾಮಾಯಣ ನಾಯಕನ ಸಂದರ್ಶನ

ದೇವನೂರು ಚಂದ್ರು ನಿರ್ದೇಶನದ, ಲಹರಿ ಫಿಲಂಸ್ ನಿರ್ಮಾಣದ ‘ಗ್ರಾಮಾಯಣ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ವಿನಯ್ ರಾಜ್‌ಕುಮಾರ್‌, ಮೇಘಾ ಶೆಟ್ಟಿ ನಟನೆಯ ಈ ಸಿನಿಮಾ ಕುರಿತು ವಿನಯ್‌ ರಾಜ್‌ಕುಮಾರ್‌ ಸಂದರ್ಶನ.

- ರಾಜೇಶ್ ಶೆಟ್ಟಿ

ಈ ಸಿನಿಮಾ ಒಪ್ಪಿಕೊಳ್ಳಲು ಏನು ಕಾರಣ?ಈ ಸಿನಿಮಾದ ನಿರ್ದೇಶಕ ದೇವನೂರು ಚಂದ್ರು ಅವರು ಈ ಕತೆ ಹೇಳಲು ಬಂದಾಗಲೇ ಬೌಂಡ್‌ ಸ್ಕ್ರಿಪ್ಟ್‌ ಹಿಡಿದುಕೊಂಡು ಬಂದಿದ್ದರು. ಲೊಕೇಷನ್ ಫೋಟೋಗಳಿದ್ದವು. ಎಲ್ಲಾ ಪಾತ್ರಗಳ ಕಾಸ್ಟ್ಯೂಮ್‌ ಮೆಟೀರಿಯಲ್‌ ತಂದಿದ್ದರು. ಸಿನಿಮಾದ ಪೋಸ್ಟರ್‌ ಹೇಗಿರುತ್ತದೆ ಎಂದು ಪೇಂಟ್‌ ಮಾಡಿಸಿಕೊಂಡು ಬಂದಿದ್ದರು. ಅವರ ತಯಾರಿ ನೋಡಿಯೇ ನಾನು ಇಂಪ್ರೆಸ್‌ ಆದೆ. ಜೊತೆ ಆ ಸಂದರ್ಭದಲ್ಲಿ ನಾನು ಗ್ರಾಮೀಣ ಭಾಗದ, ಬೇರು ಮಟ್ಟದ ಕತೆಯ ಸಿನಿಮಾ ಮಾಡಿರಲಿಲ್ಲ. ಕತೆ ಮತ್ತು ನಿರ್ದೇಶಕರ ಪ್ರಯತ್ನ ಎರಡೂ ಉತ್ತಮ ಅನ್ನಿಸಿದ್ದರಿಂದ ಒಪ್ಪಿಕೊಂಡೆ.

ತಯಾರಿ ಹೇಗಿತ್ತು?

ದೇವನೂರಿಗೆ ಹೋಗಿ ಅಲ್ಲಿ ಸ್ವಲ್ಪ ಸಮಯ ಕಾಲ ಕಳೆದೆ. ಆ ಊರಿನ ಭಾಷೆಯ ಸ್ಲ್ಯಾಂಗ್‌ ಬೇರೆ ಥರ ಇದೆ. ಅದನ್ನು ಪ್ರಾಕ್ಟೀಸ್‌ ಮಾಡಿದೆ. ಜೊತೆಗೆ ನನ್ನ ಪಾತ್ರ ಸ್ವಲ್ಪ ಫ್ರೀ ಇರುವ ಪಾತ್ರ. ಜಾಸ್ತಿ ಯೋಚನೆ ಮಾಡದೆ ಪ್ರತಿಕ್ರಿಯಿಸುವ ಪಾತ್ರ. ತಕ್ಷಣ ರಿಯಾಕ್ಟ್‌ ಮಾಡುವ ಪಾತ್ರ. ಅದಕ್ಕಾಗಿ ಮಾನಸಿಕವಾಗಿ ತಯಾರಾಗುತ್ತಾ ಹೋದೆ. ಈ ತಯಾರಿಯ, ಸಿದ್ಧತೆಯನ್ನು ಈ ಸಿನಿಮಾದಲ್ಲಿಯೇ ಕಾಣಬಹುದು.

ಈ ಸಿನಿಮಾದ ವಿಶೇಷತೆ ಏನು?

ಕನ್ನಡದ ಕತೆ. ಅಪ್ಪಟ ಗ್ರಾಮೀಣ ಭಾಗದ ಕತೆ. ಬಹಳ ಸೊಗಸಾದ ಹಾಡುಗಳಿವೆ. ಜೊತೆಗೆ ಅತ್ಯುತ್ತಮ ಕಲಾವಿದರಿದ್ದಾರೆ. ಅಪರ್ಣಾ, ಗೋಪಾಲಕೃಷ್ಣ ದೇಶಪಾಂಡೆ, ಮೇಘಾ ಶೆಟ್ಟಿ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಿರ್ದೇಶಕ ದೇವನೂರು ಚಂದ್ರು ಅವರು ಒಂದೊಳ್ಳೆ ಕತೆ ಬರೆದಿದ್ದಾರೆ. ಅದನ್ನು ಅಷ್ಟೇ ಚೆನ್ನಾಗಿ ತೆರೆ ಮೇಲೆ ಮೂಡುವ ಹಾಗೆ ಮಾಡಿದ್ದಾರೆ. ಈ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಒಂದೊಳ್ಳೆ ಅನುಭವ ಸಿಗುತ್ತದೆ.

ಈ ಸಿನಿಮಾದ ಪಯಣ ಬಹಳ ದೀರ್ಘವಾಗಿತ್ತು. ರಿಲೀಸ್‌ವರೆಗೂ ಬರುವಾಗ ನಿಮ್ಮ ಮನಸ್ಥಿತಿ ಹೇಗಿತ್ತು?

ಈ ಪಯಣ ಶುರುವಾಗಿದ್ದು 8 ವರ್ಷಗಳ ಹಿಂದೆ. ಆದರೆ 2 ವರ್ಷದ ಹಿಂದೆ ಮತ್ತೆ ಹೊಸತಾಗಿ ಶೂಟ್ ಮಾಡಿದೆವು. ಈ ಜರ್ನಿ ಶುರುವಾಗಿದ್ದು 8 ವರ್ಷ ಹಿಂದೆಯೇ ಆಗಿದ್ದರೂ ಹೊಸತಾಗಿ ರೂಪುಗೊಂಡಿದ್ದು ಇತ್ತೀಚೆಗೆ. ಹಾಗಾಗಿ ಇದು ಹೊಸ ಸಿನಿಮಾ. ಕತೆ, ಸಿನಿಮಾ ಚೆನ್ನಾಗಿದ್ದಾಗ ಈ ಸಿನಿಮಾ ಬಿಡುಗಡೆಯಾಗಬೇಕು, ಪ್ರೇಕ್ಷಕರು ನೋಡಬೇಕು ಎಂಬ ಆಸೆ ನಮಗೂ ಇರುತ್ತದೆ. ಈ ಸಿನಿಮಾ ಬಿಡುಗಡೆಗಾಗಿ ನಾನೂ ಕಾಯುತ್ತಿದ್ದೆ. ಇದು ಈ ಸಿನಿಮಾ ಬಿಡುಗಡೆ ಮಾತ್ರವಲ್ಲ, ನನ್ನ ಆ ಪಾತ್ರಕ್ಕೂ ಬಿಡುಗಡೆ.

ನೀವು ವಿಭಿನ್ನ ಕತೆಗಳನ್ನೇ ಆರಿಸಿಕೊಳ್ಳುತ್ತೀರಿ. ಈ ಪ್ರಕ್ರಿಯೆ ಹೇಗಿರುತ್ತದೆ?

ನಾನು ಚಿಕ್ಕಂದಿನಿಂದಲೂ ಸಿನಿಮಾ ನೋಡಿಕೊಂಡು ಬೆಳೆದವನು. ನಮ್ಮ ಕನ್ನಡದ ಸಿನಿಮಾಗಳ ಜೊತೆ ಅಂತಾರಾಷ್ಟ್ರೀಯ ಸಿನಿಮಾಗಳನ್ನು ಕೂಡ ನೋಡಬೇಕು ಎಂದು ಹೇಳಿಕೊಟ್ಟಿದ್ದು ಚಿಕ್ಕಪ್ಪ ಪುನೀತ್‌ ರಾಜ್‌ಕುಮಾರ್‌ ಅವರು. ಹಾಗಾಗಿ ನನಗೆ ಬೇರೆ ರೀತಿಯ ಕಂಟೆಂಟ್‌ಗಳ ಮೇಲೆ ಆಸಕ್ತಿ ಜಾಸ್ತಿ.

ಈ ಸಿನಿಮಾ ಯಾಕೆ ನೋಡಬೇಕು?

ಒಂದೊಳ್ಳೆ ಕತೆ ಇದೆ. ಒಂದೊಳ್ಳೆ ಸಂದೇಶ ಇದೆ. ಎಂಟರ್‌ಟೇನಿಂಗ್‌ ಆಗಿ ಸಿನಿಮಾ ರೂಪುಗೊಂಡಿದೆ.

 

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ನಾಡಿದ್ದಿನಿಂದ 2000 ಕಿ.ಮಿ. ಫುಟ್ಪಾತ್‌ಸುರಕ್ಷತಾ ಅಭಿಯಾನ : ಕೃಷ್ಣ ಬೈರೇಗೌಡ
ಕನ್ನಡಿಗರಿಗೆ ಅರೆಬೆಂದ ಸಿನಿಮಾ ಕೊಡೋದಕ್ಕೆ ಇಷ್ಟ ಇಲ್ಲ : ನಭಾ ನಟೇಶ್‌