ಈ ಇಳಿ ವಯಸ್ಸಿನಲ್ಲೂ ವರ್ಷಕ್ಕೆ ಒಂದೆರಡು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿರುವ ರಜನಿಕಾಂತ್.
ಆರ್. ಕೇಶವಮೂರ್ತಿ
ಮೇಕಪ್ ತೆಗೆದಿಟ್ಟರೆ ಇನ್ನೊಬ್ಬರ ಸಹಾಯ ಇಲ್ಲದೆ ನಡೆಯಲು ಸಾಧ್ಯನಾ ಎಂದು ಅನುಮಾನ ಮೂಡಿಸುವ ರಜನಿಕಾಂತ್ ಅವರ 73ರ ವಯಸ್ಸು, ಕ್ಯಾಮೆರಾ ಮುಂದೆ ನಿಂತಾಗ ಹದಿನಾರರ ಯುವಕನಂತಾಗುತ್ತದೆ. ಅದೇ ಜೋಷ್, ಅದೇ ಸ್ಟೈಲ್, ಅದೇ ಮಾಸ್ ಎಂಟ್ರಿ. ಇಂಥ ಚಿರ ಯುವಕ ರಜನಿಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾ ಬಿಡುಗಡೆ ಆಗಿದೆ. ಅಲ್ಲಿಗೆ ಭಾರತೀಯ ಚಿತ್ರರಂಗದ ಬಹುದೊಡ್ಡ ಸ್ಟಾರ್ ನಟನ ಎರಡು ಚಿತ್ರಗಳು ಒಂದೇ ವರ್ಷದಲ್ಲಿ ಬಿಡುಗಡೆ ಆಗಿರುವುದು ಈ ವರ್ಷದ ವಿಶೇಷ. ಹಾಗೆ ನೋಡಿದರೆ 2000ರ ನಂತರ ವರ್ಷಕ್ಕೆ ಒಂದು ಅಥವಾ ಎರಡು ರಜನಿಕಾಂತ್ ಸಿನಿಮಾಗಳು ಬರುತ್ತಲೇ ಇವೆ. ಆದರೆ, ‘ರೋಬೋ’, ‘ಕೊಚ್ಚಾಡಿಯನ್’ ಚಿತ್ರಗಳು ಸೋಲಿನ ನಂತರ ಸೂಪರ್ ಸ್ಟಾರ್ ಯುಗ ಮುಗಿಯಿತು, ಸೂಪರ್ ಮ್ಯಾನ್ ರೀತಿಯ ಚಿತ್ರಗಳನ್ನೇ ಎಷ್ಟು ವರ್ಷ ಅಂತ ಮಾಡುತ್ತಾರೆ ಹೇಳಿ ಎಂದು ವ್ಯಂಗ್ಯ ಮಾಡಿದವರೇ ಹೆಚ್ಚು. ಅದೇ ವರ್ಷ ಬಂದ ‘ಲಾಲ್ ಸಲಾಂ’ ಚಿತ್ರ ಸೋಲು ಕಂಡಾಗ ‘ಈ ವಯಸ್ಸಿನಲ್ಲಿ ರಜನಿಕಾಂತ್ಗೆ ಈ ಸಿನಿಮಾ ಬೇಕಿತ್ತಾ’ ಎಂದು ರಾಗ ಎಳೆದವರಿಗೂ ಕಮ್ಮಿ ಇಲ್ಲ.ಹೀಗೆ ಪ್ರತಿ ಚಿತ್ರದ ಸೋಲು, ರಜನಿಕಾಂತ್ ಅವರ ಯುಗ ಮುಗಿದೇ ಹೋಯಿತು ಎಂದು ಮಾತನಾಡಿಕೊಳ್ಳುವಂತೆ ಮಾಡಿತು. ಅಲ್ಲದೆ ರಜನಿಕಾಂತ್ ಎಂದರೆ ‘ರೋಬೋ’, ‘2.0’ ನಂತಹ ಯಂತ್ರ-ತಂತ್ರ ಸೂಪರ್ ಗಿಮಿಕ್ಸ್ ಸಿನಿಮಾಗಳೇ ಎಂದುಕೊಂಡಿದ್ದರು. ನಿರ್ದೇಶಕ ಶಂಕರ್ ಅವರು ರಜನಿಕಾಂತ್ ಅವರನ್ನು ಆಕಾಶಕ್ಕೇರಿಸಿದ್ದರು. ಹೀಗಾಗಿ ‘ಮುತ್ತು’, ‘ಪಡೆಯಪ್ಪ’, ‘ಅರುಣಾಚಲಂ’ ಚಿತ್ರಗಳ ನಟ ಕಳೆದು ಹೋಗಿದ್ದಾರೆ ಎಂದುಕೊಂಡರು. ಆಕಾಶದ ತಾರೆಯಾಗಿ ಕಳೆದು ಹೋಗಿದ್ದ ಸೂಪರ್ ಸ್ಟಾರ್ ಮತ್ತೆ ಕಾಣಿಸಿಕೊಂಡಿದ್ದು 67ನೇ ವಯಸ್ಸಿನ ನಂತರ. ಅಂದರೆ 2016ರಿಂದ ಶುರುವಾದ ರಜನಿಕಾಂತ್ ಅವರ ಈ ಹೊಸ ಬದಲಾವಣೆ, ಈಗ ತೆರೆಗೆ ಬಂದಿರುವ ‘ವೆಟ್ಟೈಯಾನ್’ ಸಿನಿಮಾ ವರೆಗೂ ಸಾಗಿ ಬಂದಿದೆ. ಈ ಇಳಿ ವಯಸ್ಸಿನಲ್ಲೂ ಪಾ ರಂಜಿತ್, ನೆಲ್ಸನ್, ಲೋಕೇಶ್ ಕನಗರಾಜ್, ಕಾರ್ತಿಕ್ ಸುಬ್ಬರಾಜ್... ಹೀಗೆ ಸಾಲು ಸಾಲು ಹೊಸ ನಿರ್ದೇಶಕರ ಚಿತ್ರಗಳಿಗೆ ಹೀರೋ ಆಗುತ್ತಿದ್ದಾರೆ.ಯಶಸ್ಸು ಕೊಟ್ಟ ಹೊಸ ಮತ್ತು ಪ್ರತಿಭಾವಂತ ನಿರ್ದೇಶಕರ ಕಡೆ ತಿರುಗಿಯೂ ನೋಡದ ಹೀರೋಗಳ ನಡುವೆ ರಜನಿಕಾಂತ್, ‘ಜೈ ಭೀಮ್’ ಸಿನಿಮಾ ಮಾಡಿದ ಮೇಲೆ ಟಿ ಜೆ ಜ್ಞಾನವೇಲು ಅವರನ್ನು ಸ್ವತಃ ರಜನಿಕಾಂತ್ ಅವರೇ ಕರೆದು ನನಗೊಂದು ಕತೆ ಮಾಡಿ ಎನ್ನುತ್ತಾರೆ. ಪ್ಯಾನ್ ಇಂಡಿಯಾ ಮೆನಿಯಾದಲ್ಲಿ ಒಂದು ಸಿನಿಮಾ ಮಾಡಲು ಎರಡು, ಮೂರು, ನಾಲ್ಕು ವರ್ಷಗಳನ್ನು ತೆಗೆದುಕೊಳ್ಳುವ ಹೀರೋಗಳನ್ನೇ ನಾಚಿಸುವಂತೆ ವರ್ಷಕ್ಕೆ ಒಂದು ಸಿನಿಮಾ ಬಿಡುಗಡೆ ಮಾಡಿ, ಮತ್ತೊಂದು ಚಿತ್ರದ ಶೂಟಿಂಗ್ನಲ್ಲಿ ತೊಡಗಿಸಿಕೊಳ್ಳುವ ಮೂಲಕ ‘ನನ್ನ ದಾರಿ ಹೊಸ ದಾರಿ’ ಎನ್ನುತ್ತಿದ್ದಾರೆ ಸೂಪರ್ ಸ್ಟಾರ್. ಹಾಗೆ ನೋಡಿದರೆ ರಜನಿಕಾಂತ್ ರಜನಿಕಾಂತ್ ಅವರ ಚಿತ್ರಗಳು ವನ್ ಮ್ಯಾನ್ ಶೋ ಅಂತೂ ಇಲ್ಲ. ಈಗ ತೆರೆಗೆ ಬಂದಿರುವ ‘ವೆಟ್ಟೈಯಾನ್’ ಚಿತ್ರವನ್ನೇ ನೋಡಿ. ಇಲ್ಲಿ ರಜನಿಕಾಂತ್ ಅವರಷ್ಟೇ ಫಹಾದ್ ಫಾಸಿಲ್ ಸ್ಕೋರ್ ಮಾಡುತ್ತಾರೆ. ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಸೇರಿದಂತೆ ಸೈಡ್ ಕ್ಯಾರೆಕ್ಟರ್ ಗಳಿಗೂ ಸ್ಕೋಪ್ ಸಿಗುತ್ತದೆ. ಪ್ರತಿಭೆ ಇದ್ದರೆ ಯಾವ ಸೂಪರ್ ಸ್ಟಾರ್ ಮುಂದೆ ಬೇಕಾದರೂ ಮೆರೆಯಬಹುದು ಎಂಬುದನ್ನು ರಜನಿಕಾಂತ್ ಸಿನಿಮಾಗಳೇ ಸಾಬೀತು ಮಾಡುತ್ತಿವೆ. ಭಾಷೆಯ ಬೇಲಿ ಅಲ್ಲದೆ ಎಲ್ಲಾ ಭಾಷೆಯ ಕಲಾವಿದರೂ ರಜನಿಕಾಂತ್ ಸುತ್ತಾ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಕತೆಗಳ ವಿಚಾರಕ್ಕೆ ಬಂದರೆ ಸ್ಲಂ ಜನರ ನಾಯಕ, ಕುಟುಂಬವನ್ನು ಕಾಪಾಡಿಕೊಳ್ಳುವ ನಿವೃತ್ತ ಪೊಲೀಸ್, ಹಾಸ್ಟಲ್ ವಾರ್ಡನ್, ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸುವ ವ್ಯಕ್ತಿ... ಹೀಗೆ ಜನ ಸಾಮಾನ್ಯರ ಕತೆಗಳಲ್ಲಿ ರಜನಿಕಾಂತ್ ಹೀರೋ ಆಗುತ್ತಿದ್ದಾರೆ. ‘ವೆಟ್ಟೈಯಾನ್’ ಕೂಡ ಹೀಗೆ ಎಲ್ಲರ ಕತೆಯೂ ಹೌದು. ಮುಂದೆ ಬರಲಿರುವ ‘ಕೂಲಿ’ ಸಿನಿಮಾ ಕೂಡ.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.