ಜ. 15 ರಿಂದ 5ನೇ ಗ್ಯಾರಂಟಿ ಯುವನಿಧಿ ಜಾರಿ

KannadaprabhaNewsNetwork | Published : Dec 23, 2023 1:45 AM

ಸಾರಾಂಶ

ಜ. 15 ರಿಂದ 5ನೇ ಗ್ಯಾರಂಟಿ ಯುವನಿಧಿ ಜಾರಿ, ನಂಜನಗೂಡು- ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಭರವಸೆ- ಯುವಕರಿಗೆ 3 ಸಾವಿರ ನೀಡಲಾಗುವುದು

- ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಭರವಸೆ- ಯುವಕರಿಗೆ 3 ಸಾವಿರ ನೀಡಲಾಗುವುದು---

ಕನ್ನಡಪ್ರಭ ವಾರ್ತೆ ನಂಜನಗೂಡು

ಮುಂದಿನ ಜನವರಿ 15 ರಿಂದ 5ನೇ ಗ್ಯಾರಂಟಿಯಾದ ಯುವನಿಧಿಯನ್ನು ಜಾರಿಗೊಳಿಸಿ ನಿರುದ್ಯೋಗಿ ಯುವಕರಿಗೆ 3 ಸಾವಿರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ದೊಡ್ಡಕೌಲಂದೆ ಗ್ರಾಮದಲ್ಲಿ 93 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೊಲೀಸ್ ಠಾಣೆ, ಅಂತರಸಂತೆ ಮತ್ತು ಜಯಪುರ ಪೊಲೀಸ್ ಠಾಣೆ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ 4 ಗ್ಯಾರಂಟಿಗಳನ್ನು ಜಾರಿಗೊಳಿಸಿರುವುದರಿಂದ ಸುಮಾರು ಒಂದು ಕೋಟಿ 16 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ. ಗ್ಯಾರಂಟಿಗಳಿಗೆ ನಾವೇನು ನಮ್ಮನೆ ದುಡ್ಡು ಕೊಡ್ತಾಯಿಲ್ಲ, ಜನರ ತೆರಿಗೆ ಹಣವನ್ನು ಕೊಡ್ತಾಯಿದೀವಿ, ಆ ಮೂಲಕ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಲ್ಲ ಸಮುದಾಯಗಳಿಗೂ ಅನುಕೂಲ ಮಾಡಿಕೊಡುತ್ತಿದ್ದೇವೆ. ಆದರೆ ಪ್ರಧಾನಿ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ, ಆದರೆ ಗಡ್ಡದವರನ್ನು (ಮುಸ್ಲಿಂ) ಹತ್ತಿರ ಬರಬೇಡಿ ಎನ್ನುತ್ತಾರೆ. ಎಲ್ಲಿ ಬಂತು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ವ್ಯಂಗ್ಯವಾಡಿದರು.

ಪೊಲೀಸ್ ಠಾಣೆಯನ್ನು ಜನಸ್ನೇಹಿಯಾಗಿಸಿ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದಲ್ಲಿ ರಾಜ್ಯ ಅಭಿವೃದ್ದಿಯಾಗಲು ಸಾಧ್ಯ. ಸಮಾಜದಲ್ಲಿ ಇನ್ನೂ ಕೂಡ ದೌರ್ಜನ್ಯಗಳು, ತಲೆ ತಗ್ಗಿಸುವ ಕೆಲಸಗಳು ನಡೆಯುತ್ತಿವೆ. ಬಲಾಡ್ಯರು ಕಾನೂನನ್ನು ಕೊಂಡುಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿದ್ದು ದೌರ್ಜನ್ಯವೆಸಗುತ್ತಿದ್ದಾರೆ, ಹಣವಿದ್ದವರಿಗೆ ಎಂದೂ ಸಹ ಪೊಲೀಸರು ಬಲಿಯಾಗಬಾರದು, ಎಲ್ಲಿ ಯಾವ ಗ್ರಾಮದಲ್ಲಿ ಯಾವ ಜಾಗದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತವೆ, ಗಾಂಜಾ, ಅಫೀಮು ದಂಧೆ ಎಲ್ಲಿ ನಡೆಯುತ್ತಿದೆ ಎಂಬುದು ಪೊಲೀಸರಿಗೆ ತಿಳಿದಿದೆ. ಆದರೂ ಸಹ ಪೊಲೀಸರ ಕಣ್ತಪ್ಪಿನಿಂದ ಅಪರಾಧ ನಡೆಯುತ್ತಿದೆ. ಸಾರ್ವಜನಿಕರ ಸರಿಯಾಗಿ ಜವಾಬ್ದಾರಿ ನಿರ್ವಹಿಸದ ಕಾರಣ, ಸಾಕ್ಷಿ ಹೇಳಲು ಹಿಂದೇಟು ಹಾಕುವ ಕಾರಣ ನಕಲಿ ಸಾಕ್ಷಿ ಸೃಷ್ಠಿಸುತ್ತಾರೆ. ಕೆಲ ಪೊಲೀಸರು ಕೆಲ ಪೊಲೀಸರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಸ್ಥಳಕ್ಕೆ ಹೋಗಲ್ಲ ಠಾಣೆಯಲ್ಲಿಯೇ ಕುಳಿತು ವರದಿ ತಯಾರಿಸುತ್ತಾರೆ.

ನಾನು ವಕೀಲನಾಗಿದ್ದಾಗ ಪೊಲೀಸ್ ಠಾಣೆಯಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದೆ ಆಗ ನಾನು ಕಣ್ಣಾರೆ ವೀಕ್ಷಿಸುತ್ತಿದ್ದೆ ಕೆಲ ಪ್ರಕರಣಗಳಲ್ಲಿ ವಕೀಲರು ಬುದ್ದಿವಂತಿಕೆಯಿಂದ ಶೇ. 25 ರಷ್ಟು, ಸಾಕ್ಷಾಧಾರ ಕೊರತೆಯಿಂದ ಶೇ. 25 ರಷ್ಟು ಪ್ರಕರಣಗಳು ಮುಚ್ಚಿಹೋದರೆ ಪೊಲೀಸರು ಸರಿಯಾಗಿ ತನಿಖೆ ನಡೆಸದ ಕಾರಣ ಶೇ. 50 ರಷ್ಟು ಪ್ರಕರಣ ಮುಚ್ಚಿಹೋಗುತ್ತದೆ ಎಂದು ನಮ್ಮ ಪೊಲೀಸರು ಘಟನೆ ನಡೆದ ನಂತರ ಕ್ರಮವಹಿಸುತ್ತಾರೆ. ಆದರೆ ಘಟನೆ ನಡೆಯದಂತೆ ಕ್ರಮವಹಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಶೋಷಿತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪೊಲೀಸರು ಕೆಲಸ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.

ಜನರೇ ನಮ್ಮ ಮಾಲೀಕರು, ರಾಜಕಾರಣಿಗಳು, ಅಧಿಕಾರಿಗಳು ಸರ್ಕಾರಿ ಸೇವಕರು, ಜನರ ತೆರಿಗೆ ಹಣದಿಂದಲೇ ನಾವೆಲ್ಲ ಸಂಬಳ ತೆಗೆದುಕೊಳ್ಳುತ್ತಿರುವುದು ಎಂಬ ಕನಿಷ್ಠ ಮೂಲಭೂತ ಪ್ರಜ್ಞೆ ಪ್ರತಿಯೊಬ್ಬ ಅಧಿಕಾರಿಯಲ್ಲೂ ಮೂಡಬೇಕು, ಠಾಣೆಗೆ ಬರುವ ನಾಗರೀಕರನ್ನು ಗೌರವದಿಂದ ಕುಳ್ಳಿರಿಸಿಕೊಂಡು ಅವರ ಕಷ್ಟ ಸುಖ ಆಲಿಸಿ, ನಿಮ್ಮ ಭಾಷೆ ಬಳಸುವುದನ್ನು ಕಲಿಯಿರಿ ಆಗ ನಿಮ್ಮ ಮೇಲೆ ನಂಬಿಕೆ ವಿಶ್ವಾಸ ಜನರಲ್ಲಿ ಮೂಡುತ್ತದೆ. ಆ ಮೂಲಕ ದುರ್ಬಲರಿಗೆ ನ್ಯಾಯ ಒದಗಿಸಿ ಎಂದರು.

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, ರಾಜ್ಯದಲ್ಲಿ ಅನೇಕ ಗೊಂದಲಗಳ ನಡುವೆ ಕಾಂಗ್ರೇಸ್ ಸರ್ಕಾರ ರಾಜ್ಯವನ್ನು ಶಾಂತಿಯ ತೋಟವನ್ನಾಗಿಸಿದೆ. ಮುಖ್ಯಮಂತ್ರಿಗಳು ಕಾನೂನು ಸುವ್ಯವಸ್ಥೆಗೆ ಪ್ರಾಮುಖ್ಯತೆ ನೀಡಿದ್ದಾರೆ. ಬಡವರಿಗೆ ಶೋಷಿತರಿಗೆ ಅನ್ಯಾಯವಾದರೆ ಅವರು ಸಹಿಸುವುದಿಲ್ಲ, ಅಲ್ಲದೆ ಪೊಲೀಸ್ ಇಲಾಖೆಯಲ್ಲೂ ಬದಲಾವಣೆ ತರಲು ಸಾಕಷ್ಟು ಅನುದಾನ ನೀಡಿದ್ದಾರೆ ಇತಿಹಾಸಲದಲ್ಲೇ ಪೊಲೀಸ್ ಇಲಾಖೆಗೆ ಸಿದ್ದರಾಮಯ್ಯರಷ್ಟು ಅನುದಾನ ಯಾರೂ ನೀಡಿಲ್ಲ ಎಂದ ಅವರು ಅಪರಾಧ ನಡೆದ 48 ಗಂಟೆಗಳಲ್ಲೇ ಅಪರಾಧಿಗಳನ್ನು ಪತ್ತೆ ಹಚ್ಚಿ ಬಂಧಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಪೊಲೀಸರು ಮಾಡುತ್ತಿದ್ದಾರೆ. ಬಿಜೆಪಿ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ಕರ್ನಾಟಕ ಪೊಲೀಸರು ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿರುವ ಕಾರಣದಿಂದಲೇ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಎಂಬುದನ್ನು ಹೆಮ್ಮೆಯಿಂದ ಹೇಳುತ್ತಿದ್ದೇನೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಪೊಲೀಸ್ ಮಹಾಅಧೀಕ್ಷಕ ಡಾ.ಕೆ. ರಾಮಚಂದ್ರರಾವ್ , ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಶಾಸಕರಾದ ರವಿಶಂಕರ್, ಅನಿಲ್ ಚಿಕ್ಕಮಾದು, ಎ.ಆರ್. ಕೃಷ್ಣಮೂರ್ತಿ, ಡಾ. ತಿಮ್ಮಯ್ಯ, ಮಾಜಿ ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಕಳಲೆ ಕೇಶವಮೂರ್ತಿ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಕಾಂಗ್ರೆಸ್ ಮುಖಂಡ ಸುನೀಲ್ ಬೋಸ್, ಗ್ರಾಪಂ ಅಧ್ಯಕ್ಷೆ ಜ್ಯೋತಿ, ಐಜಿಪಿ ಬೋರಲಿಂಗಯ್ಯ, ಎಸ್ಪಿ ಸೀಮಾ ಲಾಟ್ಕರ್, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಡಿವೈಎಸ್ಪಿ ಗೋವಿಂದರಾಜು, ಪಿಎಸೈ ಕೃಷ್ಣಕಾಂತ ಕೋಳಿ, ಚೇತನ್, ಮುಖಂಡರಾದ ಕೆ. ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಸಿ.ಎಂ. ಶಂಕರ್, ಶ್ರೀಕಂಠನಾಯಕ ಇದ್ದರು.

Share this article