ಬೇರೆ ಸಿನಿಮಾಗಳೂ ಬರುತ್ತಿವೆ ಎಂದು ನಾವು ಯಾಕೆ ಹೆದರಬೇಕು? ಹುಬ್ಬಳ್ಳಿ ನಮ್ಮೂರು. ನಾವು ಮಾಡಿರೋದು ಕನ್ನಡ ಸಿನಿಮಾ. ಹೀಗಾಗಿ ನಮ್ಮೂರಿನ ಸಿನಿಮಾವನ್ನು ನಮ್ಮ ನೆಲದಲ್ಲಿ ಬಿಡುಗಡೆ ಮಾಡಲು ನಾವು ಯಾರಿಗೆ, ಯಾಕೆ ಹೆದರಬೇಕು?
ಕನ್ನಡಪ್ರಭ ಸಿನಿವಾರ್ತೆ
‘ಬೇರೆ ಸಿನಿಮಾಗಳೂ ಬರುತ್ತಿವೆ ಎಂದು ನಾವು ಯಾಕೆ ಹೆದರಬೇಕು? ಇದು ನಮ್ಮೂರು. ನಾವು ಮಾಡಿರೋದು ಕನ್ನಡ ಸಿನಿಮಾ. ಹೀಗಾಗಿ ನಮ್ಮೂರಿನ ಸಿನಿಮಾವನ್ನು ನಮ್ಮ ನೆಲದಲ್ಲಿ ಬಿಡುಗಡೆ ಮಾಡಲು ನಾವು ಯಾರಿಗೆ, ಯಾಕೆ ಹೆದರಬೇಕು? ನಿಜ ಹೇಳಬೇಕು ಅಂದರೆ ಬೇರೆಯವರು ನಮ್ಮೂರಿನಲ್ಲಿ ಅವರ ಸಿನಿಮಾ ಬಿಡುಗಡೆ ಮಾಡಕ್ಕೆ ಹೆದರಬೇಕು’.- ಹೀಗೆ ಹೇಳಿದ್ದು ದರ್ಶನ್. ‘ಕಾಟೇರ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾತು ಹೇಳಿದರು. ‘ಕಾಟೇರ’ ಡಿ.29ರಂದು ಬಿಡುಗಡೆಯಾಗುತ್ತಿದೆ. ಇಂದು (ಡಿ.16) ಹುಬ್ಬಳ್ಳಿಯಲ್ಲಿ ಟ್ರೇಲರ್ ಬಿಡುಗಡೆ ಆಗುತ್ತಿದೆ.
ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ‘ಕಾಟೇರ ಚಿತ್ರವನ್ನು ನಾನು ಪೂರ್ತಿ ನೋಡಿದ್ದೇನೆ. ಕುರುಕ್ಷೇತ್ರದ ನಂತರ ನಾನು ಮೆಚ್ಚಿಕೊಂಡ ದರ್ಶನ್ ಅವರ ಸಿನಿಮಾ ಇದು. ತರುಣ್-ದರ್ಶನ್ ಜೋಡಿ ಸೇರಿದರೆ ಎಂಥ ಸಿನಿಮಾ ಮಾಡುತ್ತಾರೆ ಎಂಬುದಕ್ಕೆ ಕಾಟೇರ ಸಾಕ್ಷಿ. ನಿರ್ಮಾಪಕನಾಗಿ ನಾನು ಹೆಮ್ಮೆ ಪಡುವಂತಹ ಸಿನಿಮಾ’ ಎಂದರು. ನಿರ್ದೇಶಕ ತರುಣ್ ಸುಧೀರ್, ‘ಡಿ.16ರಂದು ಸಂಜೆ ಹುಬ್ಬಳ್ಳಿಯ ರೈಲ್ವೇ ಕ್ರೀಡಾ ಮೈದಾನದಲ್ಲಿ ‘ಕಾಟೇರ’ ಟ್ರೇಲರ್ ಬಿಡುಗಡೆ ಆಗುತ್ತಿದೆ. ಇದುವರೆಗೂ ನಾವು ಹೇಳದೆ ಇರುವ ಸರ್ಪ್ರೈಸ್ ಎಲಿಮೆಂಟ್ ಟ್ರೇಲರ್ನಲ್ಲಿ ನೀವು ನೋಡುತ್ತೀರಿ. ಎಮೋಷನ್ ಈ ಚಿತ್ರದ ಮತ್ತೊಂದು ಹೈಲೈಟ್. ಪಕ್ಕಾ ಸ್ವಮೇಕ್ ಸಿನಿಮಾ. ನನಗೇ ಹೆಮ್ಮೆ ಮೂಡಿಸಿದ ಚಿತ್ರವಿದು’ ಎಂದರು.
ಸಹ ಬರಹಗಾರ ಜಡೇಶ್ ಕುಮಾರ್ ಹಂಪಿ, ಸಂಭಾಷಣೆಕಾರ ಮಾಸ್ತಿ, ನಟಿ ಆರಾಧನಾ, ಬಿರಾದಾರ್, ಶ್ರುತಿ, ಪದ್ಮವಾಸಂತಿ, ಕುಮಾರ್ ಗೋವಿಂದು, ರವಿ ಚೇತನ್ ಇದ್ದರು.