ನಮ್ಮೂರಲ್ಲಿ ನಮ್ಮ ಸಿನಿಮಾ ಬಿಡುಗಡೆ ಮಾಡಕ್ಕೆ ನಾವ್ಯಾಕೆ ಹೆದರಬೇಕು: ದರ್ಶನ್‌

KannadaprabhaNewsNetwork |  
Published : Dec 16, 2023, 02:00 AM ISTUpdated : Dec 16, 2023, 02:22 PM IST
Darshan

ಸಾರಾಂಶ

ಬೇರೆ ಸಿನಿಮಾಗಳೂ ಬರುತ್ತಿವೆ ಎಂದು ನಾವು ಯಾಕೆ ಹೆದರಬೇಕು? ಹುಬ್ಬಳ್ಳಿ ನಮ್ಮೂರು. ನಾವು ಮಾಡಿರೋದು ಕನ್ನಡ ಸಿನಿಮಾ. ಹೀಗಾಗಿ ನಮ್ಮೂರಿನ ಸಿನಿಮಾವನ್ನು ನಮ್ಮ ನೆಲದಲ್ಲಿ ಬಿಡುಗಡೆ ಮಾಡಲು ನಾವು ಯಾರಿಗೆ, ಯಾಕೆ ಹೆದರಬೇಕು? 

ಕನ್ನಡಪ್ರಭ ಸಿನಿವಾರ್ತೆ

‘ಬೇರೆ ಸಿನಿಮಾಗಳೂ ಬರುತ್ತಿವೆ ಎಂದು ನಾವು ಯಾಕೆ ಹೆದರಬೇಕು? ಇದು ನಮ್ಮೂರು. ನಾವು ಮಾಡಿರೋದು ಕನ್ನಡ ಸಿನಿಮಾ. ಹೀಗಾಗಿ ನಮ್ಮೂರಿನ ಸಿನಿಮಾವನ್ನು ನಮ್ಮ ನೆಲದಲ್ಲಿ ಬಿಡುಗಡೆ ಮಾಡಲು ನಾವು ಯಾರಿಗೆ, ಯಾಕೆ ಹೆದರಬೇಕು? ನಿಜ ಹೇಳಬೇಕು ಅಂದರೆ ಬೇರೆಯವರು ನಮ್ಮೂರಿನಲ್ಲಿ ಅವರ ಸಿನಿಮಾ ಬಿಡುಗಡೆ ಮಾಡಕ್ಕೆ ಹೆದರಬೇಕು’.

- ಹೀಗೆ ಹೇಳಿದ್ದು ದರ್ಶನ್. ‘ಕಾಟೇರ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾತು ಹೇಳಿದರು. ‘ಕಾಟೇರ’ ಡಿ.29ರಂದು ಬಿಡುಗಡೆಯಾಗುತ್ತಿದೆ. ಇಂದು (ಡಿ.16) ಹುಬ್ಬಳ್ಳಿಯಲ್ಲಿ ಟ್ರೇಲರ್‌ ಬಿಡುಗಡೆ ಆಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ದರ್ಶನ್, ‘ನಿರ್ದೇಶಕ ತರುಣ್‌ ನನಗೆ ಕತೆ ಹೇಳಿದ್ದು ಒಂದೇ ಸಲ. ಮೊದಲ ಸಲ ಕೇಳಿದಾಗಲೇ ಒಂದೇ ಒಂದು ಪ್ರಶ್ನೆ, ಅನುಮಾನ, ತಿದ್ದುಪಡಿ ಇಲ್ಲದೆ ಈ ಕತೆ ಒಪ್ಪಿಕೊಂಡೆ. ಇಲ್ಲಿ ಕುಮಾರ್‌ ಗೋವಿಂದು ನನ್ನ ಬಾವನ ಪಾತ್ರದಲ್ಲಿ, ನಟಿ ಶ್ರುತಿ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಬಿರಾದರ್ ಮಾಡಿರುವ ಪಾತ್ರ ನೋಡಿ ಅಯ್ಯೋ ನನಗೆ ಈ ರೀತಿಯ ಪಾತ್ರ ಸಿಗಲಿಲ್ಲವೇ ಅಂದುಕೊಂಡಿದ್ದೂ ಇದೆ. ಇದು ನಮ್ಮ ನೆಲದ ಕತೆ. ನಮ್ಮೆಲ್ಲರ ಕತೆ. ರೈತರ ಬದುಕು, ಹಕ್ಕುಗಳ ಸುತ್ತ ಸಾಗುವ ಸಿನಿಮಾ ಇದು. ನಮ್ಮ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ನಟ ಮಾ.ರೋಹಿತ್‌ ನಟಿಸಿದ್ದಾನೆ. ನನಗೆ ರಾಜ್ಯ ಪ್ರಶಸ್ತಿ ಮಾತ್ರ ಬಂದಿರೋದು. ಹೀಗಾಗಿ ರಾಷ್ಟ್ರ ಪ್ರಶಸ್ತಿ ಹೇಗಿರುತ್ತದೋ ಎಂದು ಮಾ.ರೋಹಿತ್‌ಗೆ ಬಂದಿರುವ ಪ್ರಶಸ್ತಿಯನ್ನು ತರಿಸಿಕೊಂಡು ನೋಡಿ ಖುಷಿಪಟ್ಟೆ’ ಎಂದು ಹೇಳಿದರು.

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ‘ಕಾಟೇರ ಚಿತ್ರವನ್ನು ನಾನು ಪೂರ್ತಿ ನೋಡಿದ್ದೇನೆ. ಕುರುಕ್ಷೇತ್ರದ ನಂತರ ನಾನು ಮೆಚ್ಚಿಕೊಂಡ ದರ್ಶನ್‌ ಅವರ ಸಿನಿಮಾ ಇದು. ತರುಣ್‌-ದರ್ಶನ್‌ ಜೋಡಿ ಸೇರಿದರೆ ಎಂಥ ಸಿನಿಮಾ ಮಾಡುತ್ತಾರೆ ಎಂಬುದಕ್ಕೆ ಕಾಟೇರ ಸಾಕ್ಷಿ. ನಿರ್ಮಾಪಕನಾಗಿ ನಾನು ಹೆಮ್ಮೆ ಪಡುವಂತಹ ಸಿನಿಮಾ’ ಎಂದರು. ನಿರ್ದೇಶಕ ತರುಣ್‌ ಸುಧೀರ್‌, ‘ಡಿ.16ರಂದು ಸಂಜೆ ಹುಬ್ಬಳ್ಳಿಯ ರೈಲ್ವೇ ಕ್ರೀಡಾ ಮೈದಾನದಲ್ಲಿ ‘ಕಾಟೇರ’ ಟ್ರೇಲರ್ ಬಿಡುಗಡೆ ಆಗುತ್ತಿದೆ. ಇದುವರೆಗೂ ನಾವು ಹೇಳದೆ ಇರುವ ಸರ್ಪ್ರೈಸ್ ಎಲಿಮೆಂಟ್ ಟ್ರೇಲರ್‌ನಲ್ಲಿ ನೀವು ನೋಡುತ್ತೀರಿ. ಎಮೋಷನ್‌ ಈ ಚಿತ್ರದ ಮತ್ತೊಂದು ಹೈಲೈಟ್‌. ಪಕ್ಕಾ ಸ್ವಮೇಕ್‌ ಸಿನಿಮಾ. ನನಗೇ ಹೆಮ್ಮೆ ಮೂಡಿಸಿದ ಚಿತ್ರವಿದು’ ಎಂದರು.

ಸಹ ಬರಹಗಾರ ಜಡೇಶ್‌ ಕುಮಾರ್‌ ಹಂಪಿ, ಸಂಭಾಷಣೆಕಾರ ಮಾಸ್ತಿ, ನಟಿ ಆರಾಧನಾ, ಬಿರಾದಾರ್‌, ಶ್ರುತಿ, ಪದ್ಮವಾಸಂತಿ, ಕುಮಾರ್‌ ಗೋವಿಂದು, ರವಿ ಚೇತನ್‌ ಇದ್ದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಟಾಕ್ಸಿಕ್ ಚಿತ್ರದ ಕಾರ್‌ ಸೀನ್‌ನಲ್ಲಿರೋ ನಟೇಲಿ ಬರ್ನ್‌ ಯಾರು?
ರಾಕಿಂಗ್‌ ಸ್ಟಾರ್‌ ಮುಂದಿನ ನಿರ್ದೇಶಕರಿಗೆ ಗೀತು ಮೋಹನ್‌ದಾಸ್‌ ಕಿವಿಮಾತು