ಕನ್ನಡಪ್ರಭ ಸಿನಿವಾರ್ತೆ‘ಕಾಮಿಡಿ ಕಿಲಾಡಿಗಳು ಸೀಸನ್ 2’ ವಿಜೇತ ಮನು ಮಡೆನೂರ್ ನಟನೆಯ ಹೊಸ ಸಿನಿಮಾ ‘ಕುಲದಲ್ಲಿ ಕೀಳ್ಯಾವುದೋ’. ಯೋಗರಾಜ್ ಭಟ್ಟರ ಶಿಷ್ಯ ಶ್ರೇಯಸ್ ರಾಜ್ ಶೆಟ್ಟಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿದ್ಯಾ ಹಾಗೂ ಸಂತೋಷ್ ಕುಮಾರ್ ಜೊತೆಗೆ ಯೋಗರಾಜ ಭಟ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.
ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದ್ದು, ಹಿರಿಯ ನಟ ಜಗ್ಗೇಶ್ ಶೀರ್ಷಿಕೆ ಹಾಗೂ ಪೋಸ್ಟರ್ ಅನಾವರಣ ಮಾಡಿದರು. ಈ ವೇಳೆ ಮಾತನಾಡಿದ ಯೋಗರಾಜ ಭಟ್, ‘ಸಿನಿಮಾ ಕಥೆ ಮಲೆನಾಡು ಭಾಗದಲ್ಲಿ ನಡೆಯುತ್ತದೆ. 1970ರಿಂದ 1990ರ ಕಾಲಘಟ್ಟದ ಕಥೆ ಇದೆ. ಈ ಶೀರ್ಷಿಕೆ ನಾಲ್ಕು ವರ್ಷಗಳಿಂದ ನನ್ನ ಹತ್ತಿರವಿತ್ತು. ಈ ಚಿತ್ರದ ಕಥೆ ಕೇಳಿದಾಗ ಈ ಶೀರ್ಷಿಕೆ ಇಡಲು ಹೇಳಿದೆ, ಅವರು ಒಪ್ಪಿದರು’ ಎಂದರು.ನಿರ್ದೇಶಕ ಶ್ರೇಯಸ್ ರಾಜ್ ಶೆಟ್ಟಿ, ‘ಪಂಚರಂಗಿ ಸಿನಿಮಾ ಕಾಲದಿಂದಲೂ ಯೋಗರಾಜ ಭಟ್ಟರ ಜೊತೆ ಕೆಲಸ ಮಾಡುತ್ತಿದ್ದೇನೆ. ನಿರ್ದೇಶನ ಮಾಡುವ ಕನಸಿತ್ತು. ಈ ಸಿನಿಮಾಕ್ಕೆ ಕಥೆ ಬರೆದ ಯೋಗಿ ಹಾಗೂ ತಂಡ ಒಮ್ಮೆ ಮಧ್ಯರಾತ್ರಿ 2 ಗಂಟೆಗೆ ಕರೆಸಿ ಸಿನಿಮಾ ನಿರ್ದೇಶನ ಮಾಡು ಅಂದರು. ಶುರುವಿಗೆ ನಂಬಿಕೆಯೇ ಬರಲಿಲ್ಲ. ಸದಾ ಸಪೋರ್ಟಿಗೆ ನಿಲ್ಲುವ ಭಟ್ಟರೇ ಸಿನಿಮಾ ಕ್ಲೈಮ್ಯಾಕ್ಸ್ ಭಾಗವನ್ನೂ ನೀಡಿದ್ದಾರೆ. ಇಡೀ ತಂಡಕ್ಕೆ ಕೃತಜ್ಞ’ ಎಂದು ಹೇಳಿದರು.ಯೋಗಿ ಗೌಡ, ನಾಯಕಿ ಸೋನಲ್ ಮೊಂತೆರೋ, ಅತಿಥಿ ಪಾತ್ರದಲ್ಲಿ ನಟಿಸುತ್ತಿರುವ ದಿಗಂತ್ ಮಂಚಾಲೆ, ಕಲಾವಿದರಾದ ಮೌನಾ ಗುಡ್ಡೆಮನೆ, ರಂಗಾಯಣ ರಘು, ಶರತ್ ಲೋಹಿತಾಶ್ವ, ನಿರ್ಮಾಪಕರಾದ ಸಂತೋಷ್, ವಿದ್ಯಾ, ನಿರ್ಮಾಣ ಸಾರಥ್ಯ ಹೊತ್ತಿರುವ ರೇಣುಕಾ ಭಟ್ ಇದ್ದರು.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.