- ಅರ್ಚನಾ ಉಡುಪ
ನನ್ನ ಅಪರ್ಣಾ ಗೆಳೆತನ ಮೊದಲಾದದ್ದು ಎಲ್ಲಿ ಎಂದೇ ನೆನಪಿಲ್ಲ. ಅಷ್ಟು ಹಳೆಯ ಸ್ನೇಹ ನಮ್ಮದು. ಸದಾ ನಮ್ಮೊಳಗೆ ಗುಪ್ತಗಾಮಿನಿಯಂತೆ ಬಾಂಧವ್ಯ ಹರಿಯುತ್ತಲೇ ಇತ್ತು. ಒಂದೋ ಅವರ ಮನೆಯಲ್ಲಿ ಭೇಟಿ, ಇಲ್ಲವಾದರೆ ಗೇಟ್ ಬಳಿ ಕಾಡು ಹರಟೆ. ನಾನು ಅವರ ಮನೆಯ ದಾರಿಯಾಗಿಯೇ ವಾಕಿಂಗ್ ಹೋಗುತ್ತೀನಿ. ಅವರ ಮನೆಯೆದುರು ನಿಂತು ಕಾಲ್ ಮಾಡಿ ಗೇಟ್ ಪಕ್ಕ ಒಂದಿಷ್ಟು ಹೊತ್ತು ಹರಟಿ ಮತ್ತೆ ನಾನು ಮನೆ ದಾರಿ ಹಿಡಿಯುವ ರೂಢಿ.ಆದರೆ ಕಳೆದ ಕೆಲವು ದಿನಗಳಿಂದ ಇದು ಸಾಧ್ಯವಾಗಲಿಲ್ಲ. ಆ ಬಗ್ಗೆ ನನ್ನಲ್ಲಿನ್ನೂ ಗಿಲ್ಟ್ ಇದೆ. ಆದರೆ ಅವರ ಕೊನೇ ಕ್ಷಣದಲ್ಲಿ ಜೊತೆಗಿದ್ದೆ. ಅವರಿಷ್ಟದ ಹಾಗೆ ಪಿಂಕ್ ಸೀರೆ, ಮ್ಯಾಚಿಂಗ್ ಜ್ಯುವೆಲ್ಲರಿ ಹಾಕಿಸಿ ಅವರನ್ನು ಬೀಳ್ಕೊಟ್ಟೆವು. ಕೊನೆಯಲ್ಲೂ ಅವರ ಮುಖದಲ್ಲಿ ನೋವು, ದುಗುಡದ ಲವಲೇಶವೂ ಇರಲಿಲ್ಲ. ನಿದ್ದೆಹೋದ ಮಗುವಿನ ಹಾಗೆ ಮಲಗಿದ್ದರು. ಆಗ ನೆನಪಾಗಿದ್ದು ಪುತಿನ ಅವರ ‘ಲಘುವಾಗೆಲೆ ಮನ’ ಎಂಬ ಸಾಲು. ಇವರಿಗೆ ಅದನ್ನು ‘ಮಗುವಾಗೆಲೆ ಮನ’ ಎಂದು ಹೇಳಬಹುದು.
ಕೆಲ ಸಮಯದ ಹಿಂದೆ ಅವರ ಮನೆಯಲ್ಲಿ ಇಡೀ ದಿನ ಹರಟೆ ಹೊಡೆದಿದ್ದೆವು. ಅದಕ್ಕೂ ಮೊದಲು, ‘ಹೊರಗೆಲ್ಲಾದ್ರೂ ಕರ್ಕೊಂಡು ಹೋಗು’ ಅಂದರು. ಸಾತ್ವಿಕ ಆಹಾರ ಸಿಗುವ ಹೊಟೇಲಿಗೆ ಕರೆದುಕೊಂಡು ಹೋದೆ. ಬಹಳ ಖುಷಿಯಿಂದ ತಿಂಡಿಯನ್ನು ಎನ್ಜಾಯ್ ಮಾಡುತ್ತಾ ತಿಂದರು.
ಅವರ ತಲೆಯಲ್ಲಿ ನೂರಾರು ಕಾನ್ಸೆಪ್ಟ್ಗಳಿದ್ದವು. ಕೇಳುಗರಲ್ಲಿ ಒಂದೊಳ್ಳೆ ಅಭಿರುಚಿ ಬೆಳೆಸಬೇಕು ಎಂಬ ಆಸೆ ಇತ್ತು. ಮಾಡಬೇಕಾದ ಕೆಲಸಗಳ ದೊಡ್ಡ ಲಿಸ್ಟೇ ಇತ್ತು.ನನಗಿನ್ನೂ ನೆನಪಿದೆ. ವರ್ಷಗಳ ಕೆಳಗೆ ಅವರು ಕ್ಯಾನ್ಸರ್ ಟೆಸ್ಟ್ಗೆ ಸ್ಯಾಂಪಲ್ ಕಳಿಸಿದ ವಿಚಾರ ಹೇಳಿದಾಗ ನನಗೆ ಎದೆ ಧಸಕ್ಕೆಂದಿತ್ತು. ಆದರೂ ‘ನಿಮ್ಮಂಥಾ ಕಲ್ಮಶವೇ ಇಲ್ಲದವರಿಗೆ ದೇವರು ಖಂಡಿತಾ ಇಂಥದ್ದನ್ನೆಲ್ಲ ಬರೋ ಹಾಗೆ ಮಾಡಲ್ಲ’ ಅಂತ ಆತ್ಮವಿಶ್ವಾಸದಿಂದಲೇ ಹೇಳಿದ್ದೆ. ಆದರೆ ದೇವರು ನಮ್ಮ ಲೆಕ್ಕಾಚಾರ ತಲೆ ಕೆಳಗೆ ಮಾಡಿದ.
‘ಇನ್ನೊಂದು ಎರಡು ಮೂರು ತಿಂಗಳಷ್ಟೇ. ಆಮೇಲೆ ನೋಡು ಅಚ್ಚು, ಇದನ್ನೆಲ್ಲ ದಾಟಿ ಹೆಂಗೆ ಕುಣ್ಕೊಂಡು ಬರ್ತೀನಿ ಅಂತ!’ ತನಗೆ ಕ್ಯಾನ್ಸರ್ ಇದೆ ಅಂತ ಡಾಕ್ಟರ್ ಕನ್ಫರ್ಮ್ ಮಾಡಿದಾಗ ಅಪರ್ಣಾ ಹೇಳಿದ ಮಾತಿದು. ಅವರ ಜೀವನೋತ್ಸಾಹಕ್ಕೆ ಇನ್ನೇನು ಹೇಳಲು ಸಾಧ್ಯ!ಅವರನ್ನು ನಮ್ಮ ಊರಿಗೂ ಕರೆದುಕೊಂಡು ಹೋಗಿದ್ದೆ. ದಾರಿಯುದ್ದಕ್ಕೂ ಹಾಡುಗಳ ಮಳೆ. ಹಾಡಿನ ಒಂದು ಲೈನ್ ಹೇಳಿದರೆ ಸಾಕು, ಅದರ ಇತಿಹಾಸವನ್ನೇ ಹೇಳಿಬಿಡುತ್ತಿದ್ದರು. ನಾನವರಿಗೆ ‘ವಿಶ್ವಕೋಶ’ ಎನ್ನುತ್ತಿದ್ದೆ. ಊರಲ್ಲಿ ನಮ್ಮದೊಂದು ರೆಸಾರ್ಟ್ ಇದೆ. ಅಲ್ಲಿ ಬೋಟಿಂಗ್ ಮಾಡುವಾಗ ಅಕ್ಷರಶಃ ಮಗುವಿನ ಹಾಗೆ ಕುಣಿದಾಡಿಬಿಟ್ಟರು. ಆ ಹಸಿರನ್ನು, ಅಲ್ಲಿನ ಶಾಂತ ಪರಿಸರವನ್ನು ಬಹಳ ಆನಂದಿಸಿದರು. ವಾಪಾಸ್ ಬಂದಮೇಲೆ ‘ಇನ್ನೊಮ್ಮೆ ಕರ್ಕೊಂಡು ಹೋಗೇ.. ಪ್ಲೀಸ್’ ಅಂದಿದ್ದರು. ‘ನೀವು ಡೇಟ್ ಹೇಳಿ. ಕಾರ್ ತಗೊಂಡು ಬರ್ತೀನಿ’ ಅಂದಿದ್ದೆ. ನಮ್ಮ ದುರಾದೃಷ್ಟಕ್ಕೆ ಆ ಡೇಟ್ ಬರಲೇ ಇಲ್ಲ!