;Resize=(412,232))
‘ಪ್ರಜ್ವಲ್ ದೇವರಾಜ್ ಅವರ ಬಾಕಿ ಇದ್ದ ಸಂಭಾವನೆ ಕೊಟ್ಟಿದ್ದೇವೆ. ಟ್ರೇಲರ್ ರಿಲೀಸ್ ದಿನ ದಾಂಧಲೆ ಎಬ್ಬಿಸಿದವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ’ ಎಂದು ಕರಾವಳಿ ಸಿನಿಮಾದ ನಿರ್ದೇಶಕ, ನಿರ್ಮಾಪಕ ಗುರುದತ್ ಗಾಣಿಗ ಹೇಳಿದ್ದಾರೆ.
ಈ ಬಗ್ಗೆ ವಿವರ ನೀಡಿದ ಅವರು, ‘ಕರಾವಳಿ ಚಿತ್ರದಲ್ಲಿ ಪ್ರಜ್ವಲ್ಗೆ ಸಿಕ್ಸ್ಪ್ಯಾಕ್ ಮಾಡಲು ಹೇಳಿದ್ದೆವು. ಅದಕ್ಕಾಗಿ 6 ತಿಂಗಳು ಚಿತ್ರೀಕರಣ ಮುಂದೂಡಿದ್ದೆವು. ಅವರ ಡಯಟ್ ಇತ್ಯಾದಿಗಳಿಗೆ ಸಾಕಷ್ಟು ಖರ್ಚು ಮಾಡಿದ್ದೆವು. ಆದರೆ ಅವರಿಂದ ಸಿಕ್ಸ್ಪ್ಯಾಕ್ ಮಾಡಲು ಸಾಧ್ಯವಾಗಿರಲಿಲ್ಲ. ಆ ಹಂತದಲ್ಲಿ ನಾವು ಬೇರೊಬ್ಬ ನಟನನ್ನು ಹಾಕಿಕೊಳ್ಳುವಂತೆಯೂ ಇರಲಿಲ್ಲ.
ಆದರೆ ಕಥೆಗೆ ಅಂಥಾ ದೇಹದಾರ್ಢ್ಯದ ಅಗತ್ಯವಿತ್ತು. ನಟನಿಂದ ಅದು ಸಾಧ್ಯವಾಗದ ಕಾರಣ ಸ್ವಲ್ಪ ಹಣವನ್ನು ಬಾಕಿ ಉಳಿಸಿಕೊಂಡಿದ್ದೆವು. ಸಿನಿಮಾದಲ್ಲಿ ಕ್ರಿಯೇಟಿವ್ ನಿರ್ಧಾರ ತೆಗೆದುಕೊಳ್ಳುವ ಹಕ್ಕು ನಿರ್ದೇಶಕ, ನಿರ್ಮಾಪಕರಿಗೆ ಇರುತ್ತದೆ. ಪ್ರಜ್ವಲ್ ಅವರಿಗೆ ಡಬ್ಬಿಂಗ್ ಮಾಡುವಂತೆ ತಿಳಿಸಿ ಅವರಿಗಾಗಿ 2 ತಿಂಗಳು ಡಬ್ಬಿಂಗ್ ಸ್ಟುಡಿಯೋವನ್ನೂ ಬುಕ್ ಮಾಡಲಾಗಿತ್ತು. ಆದರೆ ಅವರು ಬರಲಿಲ್ಲ. ಚಿತ್ರರಂಗದ ಪ್ರಮುಖರಿಂದ ಹೇಳಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಅನಿವಾರ್ಯವಾಗಿ ಬೇರೆಯವರಿಂದ ಡಬ್ಬಿಂಗ್ ಮಾಡಿಸಬೇಕಾಯ್ತು’ ಎಂದರು.
ಸದ್ಯ ಕರಾವಳಿ ಚಿತ್ರಕ್ಕೆ ಕಾರ್ತಿಕ್ ಸಾಮಗ ಅವರಿಂದ ಡಬ್ಬಿಂಗ್ ಮಾಡಿಸಲಾಗಿದೆ. ಚಿತ್ರಕ್ಕೆ ಸೆನ್ಸಾರ್ನಿಂದ ಯು/ಎ ಸರ್ಟಿಫಿಕೆಟ್ ದೊರೆತಿದ್ದು, ಸಿನಿಮಾ ಜುಲೈ 24ರಂದು ತೆರೆಗೆ ಬರಲಿದೆ. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಧ್ವನಿ ಇರುವುದಿಲ್ಲ.