ಟಾಕ್ಸಿಕ್‌ ಸಿನಿಮಾದ ಬಗ್ಗೆ ಖಾಸಗಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಹತ್ವದ ಅಪ್‌ಡೇಟ್ ಕೊಟ್ಟ ನಟ ಯಶ್

KannadaprabhaNewsNetwork | Updated : Oct 24 2024, 05:02 AM IST

ಸಾರಾಂಶ

ಟಾಕ್ಸಿಕ್‌ ಸಿನಿಮಾ ಏ.10ಕ್ಕೆ ಬಿಡುಗಡೆಯಾಗಲ್ಲ ಅಂತ ಯಶ್ ಹೇಳಿದ್ದಾರೆ.

 ಸಿನಿವಾರ್ತೆ‘

ಟಾಕ್ಸಿಕ್‌ ಸಿನಿಮಾದಲ್ಲಿ ಜಗತ್ತಿನಾದ್ಯಂತದ ಅದ್ಭುತ ಕಲಾವಿದರಿದ್ದಾರೆ. ಅವರೆಲ್ಲರ ಡೇಟ್ಸ್‌ ಹೊಂದಿಸಿ ಸಿನಿಮಾ ಶೂಟಿಂಗ್‌ ಆರಂಭಿಸುವಾಗ ವಿಳಂಬವಾಗಿದೆ. ಹೀಗಾಗಿ ಈ ಹಿಂದೆ ಘೋಷಿಸಿದಂತೆ ಏ.10ಕ್ಕೆ ಸಿನಿಮಾ ಬಿಡುಗಡೆ ಸಾಧ್ಯವಾಗುತ್ತಿಲ್ಲ’ ಎಂದು ಯಶ್ ಹೇಳಿದ್ದಾರೆ.

ಖಾಸಗಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಯಶ್‌, ‘ಪ್ಯಾನ್‌ ವರ್ಲ್ಡ್‌ ಸಿನಿಮಾ ‘ರಾಮಾಯಣ’ದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಒಬ್ಬ ಕಲಾವಿದನಾಗಿ ನನಗಿದು ಬಹಳ ಎಗ್ಸೈಟಿಂಗ್‌ ಅನಿಸಿದೆ’ ಎಂದಿದ್ದಾರೆ.

‘ರಾಮಾಯಣ ಸಿನಿಮಾಕ್ಕೆ ನಾನು ಬಂದದ್ದು ಆಕಸ್ಮಿಕವಾಗಿ. ಟಾಕ್ಸಿಕ್‌ ಸಿನಿಮಾದ ವಿಎಫ್‌ಎಕ್ಸ್‌ ಕೆಲಸಕ್ಕಾಗಿ ಲಾಸ್‌ ಏಂಜಲೀಸ್‌ನಲ್ಲಿ ಡಿಎನ್‌ಇಜಿ ಮತ್ತು ಪ್ರೈಮ್‌ ಫೋಕಸ್‌ನ ನಮಿತ್ ಮಲ್ಹೋತ್ರಾ ಅವರನ್ನು ಭೇಟಿಯಾಗಿದ್ದೆ. ಈ ವೇಳೆ ನಮಿತ್‌ ನನ್ನ ಜೊತೆಗೆ ‘ರಾಮಾಯಣ’ ಸಿನಿಮಾದ ವಿಚಾರ ಹಂಚಿಕೊಂಡರು. ಒಂದು ಹಂತದಲ್ಲಿ ನಮ್ಮಿಬ್ಬರ ಯೋಚನೆಗಳು, ವಿಷನ್‌ ಒಂದೇ ಅನಿಸಿತು. ಭಾರತೀಯತೆಯನ್ನು ಜಗತ್ತಿಗೆ ಪರಿಚಯಿಸುವ ಗುರಿ ನಮ್ಮಿಬ್ಬರದೂ ಆಗಿತ್ತು. ಈ ಕಾರಣಕ್ಕೆ ನಾನು ಈ ಸಿನಿಮಾದ ಸಹ ನಿರ್ಮಾಪಕನಾಗಲು ಒಪ್ಪಿಕೊಂಡೆ. ಈ ವೇಳೆ ಅವರು ಹಿಂಜರಿಕೆಯಲ್ಲೇ, ರಾವಣ ಪಾತ್ರ ಮಾಡಬಹುದಾ ಅಂತ ಕೇಳಿದರು. ಮಾಡುತ್ತೇನೆ ಎಂದೆ. ನನಗೆ ನನ್ನ ಸ್ಟಾರ್‌ಡಮ್‌ಗಿಂತಲೂ ರಾಮಾಯಣದಂಥಾ ಸಿನಿಮಾವನ್ನು ಜಗತ್ತಿಗೆ ತೋರಿಸುವುದು ಮುಖ್ಯವಾಗಿತ್ತು. ಕಲಾವಿದನಾಗಿಯೂ ರಾವಣನ ಪಾತ್ರ ಬಹಳ ಎಗ್ಸೈಟಿಂಗ್‌. ಆ ಪಾತ್ರಕ್ಕೆ ಜೀವ ತುಂಬಲು ಉತ್ಸುಕನಾಗಿದ್ದೇನೆ’ ಎಂದೂ ಯಶ್‌ ಹೇಳಿದ್ದಾರೆ.

ಟಾಕ್ಸಿಕ್‌ ಬಗ್ಗೆ ಮಾತನಾಡಿದ ಯಶ್‌, ‘ಆಧುನಿಕ ಜಗತ್ತಿನ ಪ್ರತಿಯೊಬ್ಬರೂ ಒಂದಲ್ಲ ಒಂದು ಬಗೆಯಲ್ಲಿ ಟಾಕ್ಸಿಕ್ ಸನ್ನಿವೇಶ ಎದುರಿಸಿಯೇ ಎದುರಿಸಿರುತ್ತಾರೆ. ಅವರು ಎದುರಿಸಿರುವ ಪ್ರಸಂಗ ಬೇರೆ ಇರಬಹುದು, ಆದರೆ ಸಮಸ್ಯೆ ತಿರುಳಲ್ಲಿ ಸಾಮ್ಯತೆ ಇದೆ. ಹೀಗಾಗಿ ಇದು ಎಲ್ಲರಿಗೂ ಕನೆಕ್ಟ್‌ ಆಗುವ ಸಿನಿಮಾ. ನಿರ್ದೇಶಕಿ ಗೀತು ಮೋಹನ್‌ದಾಸ್‌, ಛಾಯಾಗ್ರಾಹಕ ರಾಜೀವ್‌ ರವಿ ಹಾಗೂ ನನಗೆ ಜನರಿಗೆ ಹೇಗೆ ಮನರಂಜನೆ ನೀಡಬೇಕು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇದೆ. ಮೂವರ ವಿಷನ್‌ ಒಂದೇ ಆಗಿರುವುದರಿಂದ ಸಿನಿಮಾ ಅದ್ಭುತವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದೂ ಹೇಳಿದ್ದಾರೆ.

ಬಾಕ್ಸ್ಕ್ರಿಕೆಟಿಗ ಶುಭ್‌ಮನ್‌ ಗಿಲ್‌ ಅವರು ಯಶ್‌, ಕೆಜಿಎಫ್‌ ಅಭಿಮಾನಿ ಕ್ರಿಕೆಟಿಗ ಶುಭಮನ್‌ ಗಿಲ್‌ ಅವರು ಯಶ್‌ ಮತ್ತು ಕೆಜಿಎಫ್‌ ಅಭಿಮಾನಿಯಂತೆ. ಅವರು ‘ಕೆಜಿಎಫ್‌ 3 ಸಿನಿಮಾ ಬರುತ್ತಾ?’ ಎಂದು ಕೇಳಿದ ಪ್ರಶ್ನೆಯನ್ನೂ ಸಂದರ್ಶನದಲ್ಲಿ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಯಶ್‌, ‘ಹೌದು. ಕೆಜಿಎಫ್‌ನ ರಾಕಿಭಾಯ್‌ನನ್ನು ನೀವೆಲ್ಲ ಬಹಳ ಇಷ್ಟಪಟ್ಟಿದ್ದೀರಿ. ನಿಮ್ಮ ನಂಬಿಕೆ ಹುಸಿಯಾಗದಂತೆ ‘ಕೆಜಿಎಫ್‌ 3’ ಕಥೆ ಇರುತ್ತದೆ. ಸದ್ಯ ಕೈಯಲ್ಲಿರುವ ಪ್ರಾಜೆಕ್ಟ್‌ ಮುಗಿದ ಮೇಲೆ ಆ ಬಗ್ಗೆ ಅಪ್‌ಡೇಟ್‌ ನೀಡುತ್ತೇನೆ’ ಎಂದರು. ಬಾಕ್ಸ್‌

ರಾಧಿಕಾ ಸಂಭಾವನೆ ಬಗ್ಗೆ ಕೇಳಲ್ಲ, ಟೈಮ್‌ ಕೇಳ್ತಾಳೆ

‘ಬಾಳ ಸಂಗಾತಿ ರಾಧಿಕಾ ಹಾಗೂ ನಾನು ಇಂಡಸ್ಟ್ರಿಯಲ್ಲಿ ಜೊತೆಯಾಗಿ ಬಂದು ಒಟ್ಟಿಗೆ ಬೆಳೆದವರು. ಆಕೆ ನನ್ನ ಸ್ಟ್ರೆಂಥ್‌. ಪತ್ನಿಗಿಂತ ಮೊದಲು ಗೆಳತಿ. ಹೀಗಾಗಿ ನನ್ನ ಬಗ್ಗೆ ಅವಳಿಗೆ, ಅವಳ ಬಗ್ಗೆ ನನಗೆ ಎಲ್ಲ ವಿಚಾರ ಗೊತ್ತು. ಇಲ್ಲವಾದರೆ ನನ್ನಂಥಾ ವರ್ಕೋಹಾಲಿಕ್‌, ಕ್ರೇಜಿ ವ್ಯಕ್ತಿಯ ಜೊತೆ ಬದುಕೋದು ಬಹಳ ಕಷ್ಟ. ನಾನೊಂದು ಸಿನಿಮಾ ಒಪ್ಪಿಕೊಂಡರೆ ಆಕೆ ಈ ಸಿನಿಮಾ ಎಷ್ಟು ದುಡ್ಡು ಮಾಡಬಹುದು ಅಂತೆಲ್ಲ ಕೇಳಲ್ಲ, ಬದಲಿಗೆ ನೀನು ಖುಷಿಯಾಗಿದ್ದೀಯಾ ಅಂತಷ್ಟೇ ಕೇಳ್ತಾಳೆ. ಅವಳು ಕೇಳೋದು ನನ್ನ ಗಮನ ಮತ್ತು ಸಮಯ. ಅದನ್ನೂ ಅವಳಿಗೆ ನೀಡೋದು ಕಷ್ಟವಾಗುತ್ತಿದೆ’ ಎಂದು ಯಶ್‌ ಹೇಳಿದ್ದಾರೆ.

Share this article