ಮರಾಠಿ ಮಾತಾಡದ ವ್ಯಾಪಾರಿಗಳ ಕಚೇರಿಗೆ ಕರೆದು ಹಲ್ಲೆ ನಡೆಸಿದ ಶಿವಸೇನಾ

KannadaprabhaNewsNetwork |  
Published : Jul 03, 2025, 11:51 PM ISTUpdated : Jul 04, 2025, 04:38 AM IST
ಮರಾಠಿ | Kannada Prabha

ಸಾರಾಂಶ

ಮರಾಠಿ ಮಾತಾಡದ ಆಹಾರ ಮಳಿಗೆ ವ್ಯಾಪಾರಿ ಮೇಲೆ ಎಂಎನ್‌ಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಬೆನ್ನಲ್ಲೆ, ಮರಾಠಿಯೇತರ ವ್ಯಾಪಾರಸ್ಥರನ್ನು ಕಚೇರಿಗೆ ಕರೆಸಿ ಶಿವಸೇನಾ (ಯುಬಿಟಿ) ನಾಯಕನೊಬ್ಬ ಥಳಿಸಿ, ನಿಂದಿಸಿದ ಆಘಾತಕಾರಿ ಘಟನೆ ನಡೆದಿದೆ. 

ಮುಂಬೈ: ಮರಾಠಿ ಮಾತಾಡದ ಆಹಾರ ಮಳಿಗೆ ವ್ಯಾಪಾರಿ ಮೇಲೆ ಎಂಎನ್‌ಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಬೆನ್ನಲ್ಲೆ, ಮರಾಠಿಯೇತರ ವ್ಯಾಪಾರಸ್ಥರನ್ನು ಕಚೇರಿಗೆ ಕರೆಸಿ ಶಿವಸೇನಾ (ಯುಬಿಟಿ) ನಾಯಕನೊಬ್ಬ ಥಳಿಸಿ, ನಿಂದಿಸಿದ ಆಘಾತಕಾರಿ ಘಟನೆ ನಡೆದಿದೆ. ಇದು ರಾಜ್ಯದಲ್ಲಿ ಮರಾಠಿಯೇತರ ವ್ಯಾಪಾರಸ್ಥರ ಸುರಕ್ಷತೆ ಕುರಿತು ಕಳವಳ ಹುಟ್ಟುಹಾಕಿದೆ.

ಶಿವಸೇನಾ (ಯುಬಿಟಿ) ಮಾಜಿ ಸಂಸದ ರಾಜನ್ ವಿಚಾರೆ ಪರಭಾಷಿಕ ವ್ಯಾಪಾರಿಗಳನ್ನು ಕಚೇರಿಗೆ ಕರೆಸಿ, ಹಿಂದಿ ಮಾತಾಡದಂತೆ ಬೆದರಿಕೆ ಹಾಕಿದ್ದಾರೆ. ಬಳಿಕ ತಮ್ಮ ಕಾರ್ಯಕರ್ತನ ಕಾಲಿಗೆ ಬಿದ್ದು, ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದಾರೆ. ಇಬ್ಬರು ವ್ಯಾಪಾರಿಗಳು ವಿಚಾರೆ ಬೆಂಬಲಿಗನ ಬಳಿ ಬಂದು, ಕಿವಿ ಹಿಡಿದು ಕ್ಷಮೆ ಕೋರಿದ್ದಾರೆ. ಆತನ ಕಾಲಿಗೂ ಬಿದ್ದಿದ್ದಾರೆ. ಬಳಿಕ ಕಾರ್ಯಕರ್ತ ವ್ಯಾಪಾರಸ್ಥನ ಕಪಾಳಕ್ಕೆ ಹೊಡೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ. 

ಮಹಾರಾಷ್ಟ್ರದಲ್ಲಿ ಮರಾಠಿಗೆ ಅಗೌರವ ತೋರಿದರೆ ಕ್ರಮ: ಸಚಿವ 

ಮುಂಬೈ: ‘ಮಹಾರಾಷ್ಟ್ರದಲ್ಲಿ ಮರಾಠಿಯನ್ನೇ ಮಾತಾಡಬೇಕು. ಯಾರಾದರೂ ಮರಾಠಿಗೆ ಅಗೌರವ ತೋರಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮಹಾರಾಷ್ಟ್ರದ ಗೃಹ ಖಾತೆ ರಾಜ್ಯ ಸಚಿವ ಯೋಗೇಶ್ ಕದಂ ತಿಳಿಸಿದ್ದಾರೆ.ಮರಾಠಿಯಲ್ಲಿ ಮಾತನಾಡಿಲ್ಲ ಎನ್ನುವ ಕಾರಣಕ್ಕೆ ಆಹಾರ ಮಳಿಗೆಯ ವ್ಯಾಪಾರಿಗೆ ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ ಪಕ್ಷದ ಕಾರ್ಯಕರ್ತರು ಥಳಿಸಿದ ಬೆನ್ನಲ್ಲೆ ಸಚಿವರಿಂದ ಈ ಹೇಳಿಕೆ ಬಂದಿದೆ.

‘ಮಹಾರಾಷ್ಟ್ರದಲ್ಲಿ ಮರಾಠಿಯಲ್ಲೇ ಮಾತಾಡಬೇಕು. ಮರಾಠಿ ಬರದಿದ್ದರೆ, ಏನೇ ಆದರೂ ನಾವು ಮರಾಠಿಯಲ್ಲಿ ಮಾತಾಡುವುದಿಲ್ಲ ಎಂಬ ಅಹಂಕಾರ ತೋರಬಾರದು. ಇದನ್ನು ನಾವು ಸಹಿಸಲ್ಲ. ಬದಲಾಗಿ, ನಾವು ಮರಾಠಿಯಲ್ಲಿ ಮಾತಾಡಲು ಯತ್ನಿಸುತ್ತೇವೆ ಎಂದು ಹೇಳಬೇಕು. ಯಾರಾದರೂ ಮರಾಠಿಗೆ ಅಗೌರವ ತೋರಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

ಎಂಎನ್‌ಎಸ್ ಕಾರ್ಯಕರ್ತರು ವ್ಯಾಪಾರಿಗೆ ಥಳಿಸಿದ ಕುರಿತು ಮಾತನಾಡಿದ ಅವರು, ‘ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ದೂರು ನೀಡಬೇಕು. ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದರು. ಆದರೆ ಥಳಿಸಿದವರನ್ನು ಶಿಕ್ಷಿಸುವ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಲಿಲ್ಲ.

PREV
Read more Articles on

Recommended Stories

ಗುಂಡಿ ಬಿದ್ದ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಇಲ್ಲ: ಸುಪ್ರೀಂ ತೀರ್ಪು
ಆರೋಗ್ಯ, ಜೀವ ವಿಮೆಗೆ ಶೂನ್ಯ ಜಿಎಸ್‌ಟಿಗೆ ಸರ್ಕಾರದ ಒಲವು