ಲೋಕಸಭೆ ಫಲಿತಾಂಶ ನಿಷ್ಕರ್ಷೆಗೆ ಜು.10ಕ್ಕೆ ಎಐಸಿಸಿ ಸಮಿತಿ ಆಗಮನ

ಸಾರಾಂಶ

ಲೋಕಸಭೆ ಚುನಾವಣೆ ಫಲಿತಾಂಶದ ಕುರಿತ ಪರಾಮರ್ಶೆಗಾಗಿ ಮಧುಸೂಧನ್‌ ಮಿಸ್ತ್ರಿ ಅಧ್ಯಕ್ಷತೆಯ ಎಐಸಿಸಿ ಸತ್ಯ ಶೋಧನಾ ಸಮಿತಿಯು ಜು.10ರಂದು ರಾಜ್ಯಕ್ಕೆ ಆಗಮಿಸಲಿದ್ದು, ಮೂರು ದಿನಗಳ ಕಾಲ ವಿವಿಧ ಕ್ಷೇತ್ರಗಳಲ್ಲಿನ ಫಲಿತಾಂಶದ ಬಗ್ಗೆ ಸತ್ಯಶೋಧನೆ ನಡೆಸಲಿದೆ.

ಬೆಂಗಳೂರು :  ಲೋಕಸಭೆ ಚುನಾವಣೆ ಫಲಿತಾಂಶದ ಕುರಿತ ಪರಾಮರ್ಶೆಗಾಗಿ ಮಧುಸೂಧನ್‌ ಮಿಸ್ತ್ರಿ ಅಧ್ಯಕ್ಷತೆಯ ಎಐಸಿಸಿ ಸತ್ಯ ಶೋಧನಾ ಸಮಿತಿಯು ಜು.10ರಂದು ರಾಜ್ಯಕ್ಕೆ ಆಗಮಿಸಲಿದ್ದು, ಮೂರು ದಿನಗಳ ಕಾಲ ವಿವಿಧ ಕ್ಷೇತ್ರಗಳಲ್ಲಿನ ಫಲಿತಾಂಶದ ಬಗ್ಗೆ ಸತ್ಯಶೋಧನೆ ನಡೆಸಲಿದೆ.

ಈ ವೇಳೆಗೆ ಕೇಂದ್ರದ ಸಮಿತಿಗೆ ಕೆಪಿಸಿಸಿಯಿಂದ ಪೂರಕ ವರದಿ ನೀಡಬೇಕಿರುವ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲಿ ಕೆಪಿಸಿಸಿ ಮಟ್ಟದ ಸತ್ಯಶೋಧನಾ ಸಮಿತಿ ರಚನೆ ಮಾಡುವ ಸಾಧ್ಯತೆಯಿದೆ.

ವಿವಿಧ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯಲ್ಲಿನ ಕಾಂಗ್ರೆಸ್ ಪಕ್ಷದ ಸೋಲು-ಗೆಲುವುಗಳ ಬಗ್ಗೆ ಪರಾಮರ್ಶೆ ನಡೆಸಿ ಸೋತಿರುವ ಕ್ಷೇತ್ರಗಳಲ್ಲಿ ಕಾರಣಗಳನ್ನು ಪಟ್ಟಿ ಮಾಡಿ ಎಐಸಿಸಿಗೆ ವರದಿ ನೀಡಲು ಮಧುಸೂಧನ್‌ ಮಿಸ್ತ್ರಿ ಅಧ್ಯಕ್ಷತೆಯಲ್ಲಿ ಎಐಸಿಸಿ ಸತ್ಯ ಶೋಧನಾ ಸಮಿತಿ ರಚನೆ ಮಾಡಲಾಗಿದೆ.

ಸಮಿತಿಯು ಜು.10 ರಂದು ರಾಜ್ಯಕ್ಕೆ ಆಗಮಿಸಲಿದ್ದು, ಎಲ್ಲಾ ಜಿಲ್ಲೆಗಳ ನಾಯಕರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ಚರ್ಚಿಸಲಿದೆಯೇ ಅಥವಾ ರಾಜ್ಯಾದ್ಯಂತ ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಲಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಮೂಡಿಲ್ಲ.

ಒಂದು ಮೂಲದ ಪ್ರಕಾರ ಸಮಿತಿಯು ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರತ್ಯಕ್ಷ ಕಾರಣ ತಿಳಿದು ಎಐಸಿಸಿಗೆ ವರದಿ ನೀಡಲಿದೆ. ಪ್ರತಿ ಕ್ಷೇತ್ರದಲ್ಲೂ ತಳಮಟ್ಟದಲ್ಲಿ ಅಧ್ಯಯನ ನಡೆಸಲು ಸಾಧ್ಯವಾಗದ ಕಾರಣ ರಾಜ್ಯಮಟ್ಟದ ಸತ್ಯ ಶೋಧನಾ ಸಮಿತಿಯ ವರದಿಯನ್ನೂ ಪರಿಶೀಲಿಸಲಿದೆ. ಹೀಗಾಗಿ ಎರಡು ದಿನದಲ್ಲಿ ರಾಜ್ಯಮಟ್ಟದ ಸಮಿತಿ ರಚನೆ ಮಾಡಿ ಜು.10ರ ಒಳಗಾಗಿ ವರದಿ ಸಿದ್ಧಪಡಿಸಲು ಕೆಪಿಸಿಸಿ ಮುಂದಾಗಿದೆ.

Share this article