ವಿವಾಹಿತ ಮಹಿಳೆಯರ ವರದಕ್ಷಿಣೆ ಕಿರುಕುಳ ಪ್ರಕರಣಗಳ ದುರ್ಬಳಕೆ : ಸುಪ್ರೀಂ ಕೋರ್ಟ್‌ ಕಳವಳ

KannadaprabhaNewsNetwork |  
Published : Dec 12, 2024, 12:31 AM ISTUpdated : Dec 12, 2024, 04:50 AM IST
ವರದಕ್ಷಿಣೆ ಕಿರುಕುಳ | Kannada Prabha

ಸಾರಾಂಶ

‘ವಿವಾಹಿತ ಮಹಿಳೆಯರು ಸ್ವಾರ್ಥಕ್ಕಾಗಿ ತಮ್ಮ ಪತಿ ಮತ್ತು ಅತ್ತೆ-ಮಾವಂದಿರಿಗೆ ಕಿರುಕುಳ ನೀಡಲು ವರದಕ್ಷಿಣೆ ಕಿರುಕುಳ ತಡೆ ಕಾಯ್ದೆಯಂಥ ಕಾನೂನುಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ನ್ಯಾಯಾಲಯಗಳು ಇಂಥ ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಇತ್ಯರ್ಥಪಡಿಸಬೇಕು’ ಎಂದು ಸುಪ್ರೀಂ ಕೋರ್ಟ್ ಕಳವಳ 

ನವದೆಹಲಿ: ‘ವಿವಾಹಿತ ಮಹಿಳೆಯರು ಸ್ವಾರ್ಥಕ್ಕಾಗಿ ತಮ್ಮ ಪತಿ ಮತ್ತು ಅತ್ತೆ-ಮಾವಂದಿರಿಗೆ ಕಿರುಕುಳ ನೀಡಲು ವರದಕ್ಷಿಣೆ ಕಿರುಕುಳ ತಡೆ ಕಾಯ್ದೆಯಂಥ ಕಾನೂನುಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. 

ನ್ಯಾಯಾಲಯಗಳು ಇಂಥ ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಇತ್ಯರ್ಥಪಡಿಸಬೇಕು’ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. 34 ವರ್ಷದ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್‌, ತನ್ನ ವಿರುದ್ಧ ಪತ್ನಿಯು ಕಿರುಕುಳದ ಸುಳ್ಳು ಪ್ರಕರಣ ದಾಖಲಿಸಿದ್ದಳು ಎಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರ ನಡುವೆಯೇ ತೆಲಂಗಾಣದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಈ ಕಳವಳ ವ್ಯಕ್ತಪಡಿಸಿದೆ.

ಏನಿದು ಪ್ರಕರಣ?:ಪತ್ನಿಯು ತನ್ನ ಗಂಡ, ಆತನ ಪೋಷಕರು ಮತ್ತು ಇತರ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಳು. ಇದನ್ನು ವಜಾಗೊಳಿಸಲು ತೆಲಂಗಾಣ ಹೈಕೋರ್ಟು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪತಿಯ ಕಡೆಯವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ। ಬಿ.ವಿ. ನಾಗರತ್ನ ನ್ಯಾ। ಎನ್‌. ಕೋಟೀಶ್ವರ ಸಿಂಗ್‌ ಅವರ ಪೀಠ, ತೆಲಂಗಾಣ ಹೈಕೋರ್ಟ್‌ ಆದೇಶವನ್ನು ರದ್ದು ಮಾಡಿದೆ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣಗಳ ದುರ್ಬಳಕೆ ಬಗ್ಗೆ ಕಳವಳ ವ್ಯಕ್ತಪಡಿದೆ.

ನ್ಯಾ। ನಾಗರತ್ನ ಹೇಳಿದ್ದೇನು?:‘ಪತ್ನಿಯು ವೈಯಕ್ತಿಕ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಪ್ರಕರಣಗಳನ್ನು ದಾಖಲಿಸಿದ್ದಾಳೆ ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳುವ ಉದ್ದೇಶಿಸಿರುವ ಕಾನೂನು ನಿಬಂಧನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾಳೆ. ಹಣ ವಸೂಲಿ ಮಾಡಲು ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾಳೆ. 

ಪತಿ ಮತ್ತು ಅವರ ಕುಟುಂಬದ ವಿರುದ್ಧ ವೈಯಕ್ತಿಕ ದ್ವೇಷವನ್ನು ಬಿಚ್ಚಿಡಲು ಮಹಿಳೆಯರು ನಿಬಂಧನೆಯನ್ನು ಸಾಧನವಾಗಿ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ’ ಎಂದು ಕಿಡಿಕಾರಿತು.‘ಇತ್ತೀಚಿನ ವರ್ಷಗಳಲ್ಲಿ, ದೇಶಾದ್ಯಂತ ವೈವಾಹಿಕ ವಿವಾದಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಇದರ ಜತೆ ಜತೆಗೇ, ಹೆಂಡತಿಯಿಂದ ಪತಿ ಮತ್ತು ಅವನ ಕುಟುಂಬದ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸಲು ಐಪಿಸಿಯ ಸೆಕ್ಷನ್ 498ಎ ನಂತಹ (ಕೌಟುಂಬಿಕ ಕಿರುಕುಳ ಕಾಯ್ದೆ ಸೆಕ್ಷನ್) ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. 

ಸುಖಾಸುಮ್ಮನೇ ಮಾವನ ಮನೆಯವರ ಮೇಲೆ ಸೊಸೆಯಂದಿರು ಆರೋಪ ಮಾಡುವ ನಿದರ್ಶನಗಳೂ ಇವೆ. ಇಂಥ ಆರೋಪಗಳನ್ನು ನ್ಯಾಯಾಲಯಗಳು ಕೂಲಂಕಷವಾಗಿ ಪರಿಶೀಲಿಸದೇ ಹೋದರೆ ಕಾನೂನು ಪ್ರಕ್ರಿಯೆಗಳ ದುರುಪಯೋಗಕ್ಕೆ ಕಾರಣವಾಗುತ್ತದೆ. ಹೆಂಡತಿ ಅಥವಾ ಆಕೆಯ ಕುಟುಂಬಗಳು ದ್ವೇಷ ಸಾಧಿಸುವ ಅಥವಾ ಸೇಡು ತೀರಿಸಿಕೊಳ್ಳುವ ಪ್ರವೃತ್ತಿಗೆ ಉತ್ತೇಜನ ನೀಡುತ್ತದೆ’ ಎಂದು ನ್ಯಾ। ನಾಗರತ್ನ ಅವರ ಪೀಠ ಹೇಳಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸಲ್ಲ: ದೋವಲ್‌
ಅಮೆರಿಕ ನಿಗೂಢ ಅಸ್ತ್ರದಿಂದ ವೆನಿಜುವೆಲನ್ನರಿಗೆ ರಕ್ತ ವಾಂತಿ!