2023ರಲ್ಲಿ ಶೇ.77ರಷ್ಟು ಜನ ಬ್ಯಾಂಕ್, 21%ರಷ್ಟು ಜನ ಚಿನ್ನದ ಮೂಲಕ ಉಳಿತಾಯ ಮಾಡಿದ್ದು, ಬೆಂಗಳೂರು ಮತ್ತು ತಿರುವನಂತಪುರ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಅಲಂಕರಿಸಿವೆ. ಜೊತೆಗೆ ದೇಶದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಕುಟುಂಬಗಳು ಶೇ.3ರಿಂದ 5ಕ್ಕೇರಿಕೆಯಾಗಿದೆ ಎಂದು ಮನಿ9 ಸಮೀಕ್ಷಾ ವರದಿ ತಿಳಿಸಿದೆ.
ನವದೆಹಲಿ: ದೇಶದಲ್ಲಿ 2023ರಲ್ಲಿ ಶೇ.77ರಷ್ಟು ಜನರು ತಮ್ಮ ಹಣವನ್ನು ಬ್ಯಾಂಕ್ನಲ್ಲಿ ಠೇವಣಿ ಮಾಡುವ ಮೂಲಕ ಉಳಿತಾಯ ಮಾಡಲು ಮುಂದಾಗಿದ್ದರೆ, ಶೇ.21ರಷ್ಟು ಜನರು ಚಿನ್ನದ ಮೇಲೆ ಹೂಡಿಕೆ ಮಾಡುವ ಮೂಲಕ ಗಳಿಕೆಯ ಉಳಿತಾಯ ಮಾಡಲು ಒಲವು ತೋರಿದ್ದಾರೆ. ಈ ಪೈಕಿ ಕರ್ನಾಟಕದ ಬೆಂಗಳೂರಿನಲ್ಲಿ ಚಿನ್ನದ ಮೇಲಿನ ಹೂಡಿಕೆ ಪ್ರಮಾಣ ಶೇ.69ರಷ್ಟಿದ್ದು, ಇದು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಉಳಿದಂತೆ ತಿರುವನಂತಪುರಂ ಶೇ.66ರೊಂದಿಗೆ 2ನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.
ಮನಿ9 ನಡೆಸಿದ ವಾರ್ಷಿಕ ವೈಯಕ್ತಿಕ ಹಣಕಾಸು ಸಮೀಕ್ಷೆಯಲ್ಲಿ ಈ ಮಾಹಿತಿ ತಿಳಿದು ಬಂದಿದ್ದು ಈ ಪೈಕಿ ಭಾರತದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಕುಟುಂಬಗಳ ಪ್ರಮಾಣವು 2022ರಲ್ಲಿನ ಶೇ.3ರಿಂದ 2023ರಲ್ಲಿ ಶೇ.5ಕ್ಕೆ ಏರಿಕೆಯಾಗಿದೆ. ಅಲ್ಲದೇ 2023ರಲ್ಲಿ ದೇಶದಲ್ಲಿ ಶೇ.27ರಷ್ಟು ಕುಟುಂಬಗಳು ಜೀವ ವಿಮೆ ಪಾಲಿಸಿಗಳನ್ನು ಹೊಂದಿವೆ. ಇದು 2019ರ ಶೇ.19ರಷ್ಟಕ್ಕೆ ಹೋಲಿಸಿದರೆ ಅಧಿಕವಾಗಿದೆ.ಸಮೀಕ್ಷೆಯ ಪ್ರಕಾರ ಶೇ.53ರಷ್ಟು ಕುಟುಂಬಗಳು ಯಾವುದೇ ಆರೋಗ್ಯ ವಿಮೆ ಹೊಂದಿಲ್ಲ, ಷೇರು ಮಾರುಕಟ್ಟೆ ಹೂಡಿಕೆದಾರರ ಪ್ರಮಾಣ ಶೇ.9ಕ್ಕೆ ಏರಿದೆ, ಶೇ.10ರಷ್ಟು ಭಾರತೀಯ ಕುಟುಂಗಳು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದ್ದಾರೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.