ಆಗ್ರಾ : ದೇಶದ ಜನತೆಗೆ ಸಂದೇಶವೊಂದನ್ನು ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ನಾವು (ಭಾರತೀಯರು) ಒಗ್ಗಟ್ಟಾಗಿರಬೇಕು. ಇಲ್ಲದಿದ್ದರೆ ನಮ್ಮನ್ನು ಕತ್ತರಿಸಲಾಗುತ್ತದೆ’ ಎಂದು ಹೇಳಿದ್ದಾರೆ.
ಸಮಾರಂಭವೊಂದರಲ್ಲಿ ಸೋಮವಾರ ಮಾತನಾಡಿದ ಅವರು, ‘ರಾಷ್ಟ್ರಕ್ಕಿಂತ ದೊಡ್ಡದು ಯಾವುದೂ ಇರಲು ಸಾಧ್ಯವಿಲ್ಲ, ನಾವು ಒಗ್ಗಟ್ಟಾಗಿದ್ದರೆ ರಾಷ್ಟ್ರವು ಬಲಿಷ್ಠವಾಗುತ್ತದೆ. ದೇಶ ಸಮೃದ್ಧಿಯ ಉತ್ತುಂಗವನ್ನು ತಲುಪಲು ಜನತೆ ಒಗ್ಗಟ್ಟಿನಿಂದ ಇರಬೇಕು. ಬಾಂಗ್ಲಾದೇಶದಲ್ಲಿ ಆದ ತಪ್ಪುಗಳು ಭಾರತದಲ್ಲಿ ಆಗಬಾರದು. ಆದರೆ ನಮ್ಮಲ್ಲೇ ಒಡಕು ಸೃಷ್ಟಿಯಾದರೆ ನಮ್ಮನ್ನು ಕತ್ತರಿಸಲಾಗುತ್ತದೆ (ಬಾಟೇಂಗೇ ತೋ ಕಾಟೇಂಗೆ)’ ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಇತ್ತೀಚೆಗಷ್ಟೇ ಬೃಹತ್ ಸರ್ಕಾರ ವಿರೋಧಿ ಪ್ರತಿಭಟನೆಗಳು ನಡೆದಿದ್ದು, ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಲಾಗಿತ್ತು. ನಂತರ ಅಲ್ಲಿನ ಹಿಂದೂಗಳ ಮೇಲೆ ಕಂಡು ಕೇಳರಿಯದಷ್ಟು ದೌರ್ಜನ್ಯ ನಡೆದಿತ್ತು.