ಇನ್ನು ವರ್ಷಕ್ಕೆ ಎರಡು ಬಾರಿ ಕಾಲೇಜಿಗೆ ಪ್ರವೇಶ ಅವಕಾಶ!

KannadaprabhaNewsNetwork |  
Published : Jun 12, 2024, 01:48 AM IST
ಕಾಲೇಜು ವಿದ್ಯಾರ್ಥಿಗಳು | Kannada Prabha

ಸಾರಾಂಶ

ವಿದೇಶಗಳಲ್ಲಿನ ವ್ಯವಸ್ಥೆ ಭಾರತದಲ್ಲೂ ಆರಂಭವಾಗಿದ್ದು, ಜುಲೈನಲ್ಲಿ ಮೊದಲ, ಜನವರೀಲಿ 2ನೇ ಸಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇದರ ಜಾರಿ ಕಡ್ಡಾಯವಲ್ಲ, ಕೇವಲ ಮೂಲಸೌಕರ್ಯ ಇರುವ ವಿವಿಗಳಲ್ಲಿ ಮಾತ್ರ ಇದೇ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಲಿದೆ.

ಪಿಟಿಐ ನವದೆಹಲಿಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈಗ ವಿದೇಶಿ ವಿವಿಗಳ ರೀತಿ ವರ್ಷಕ್ಕೆ 2 ಬಾರಿ ಪ್ರವೇಶವನ್ನು ನೀಡಲು ಅನುಮತಿಸಲಾಗಿದೆ. ಅಂದರೆ ವರ್ಷಕ್ಕೆ 2 ಪ್ರವೇಶ ಚಕ್ರಗಳು ಇರಲಿವೆ.

ಜುಲೈ-ಆಗಸ್ಟ್‌ನಲ್ಲಿ ಮೊದಲ ಅಡ್ಮಿಷನ್‌ ನಡೆಯಲಿದೆ ಮತ್ತು ಜನವರಿ-ಫೆಬ್ರವರಿಯಲ್ಲಿ 2ನೇ ಹಂತದ ಪ್ರವೇಶ ಪ್ರಕ್ರಿಯೆ ನಡೆಯಲಿದೆ. 2024-25ನೇ ಶೈಕ್ಷಣಿಕ ವರ್ಷದಿಂದ, ಅರ್ಥಾತ್‌ ಇದೇ ವರ್ಷದಿಂದ ಇದು ಆರಂಭವಾಗಲಿದೆ.

ಮಂಗಳವಾರ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ ಯುಜಿಸಿ ಮುಖ್ಯಸ್ಥ ಜಗದೀಶ್ ಕುಮಾರ್, ‘ಭಾರತೀಯ ವಿವಿಗಳು ವರ್ಷಕ್ಕೆ 2 ಬಾರಿ ಪ್ರವೇಶವನ್ನು ನೀಡಿದರೆ, ಮಂಡಳಿಯ ಫಲಿತಾಂಶಗಳ ಪ್ರಕಟಣೆಯಲ್ಲಿ ವಿಳಂಬ, ಆರೋಗ್ಯ ಸಮಸ್ಯೆಗಳು ಅಥವಾ ವೈಯಕ್ತಿಕ ಕಾರಣಗಳಿಂದ ಜುಲೈ-ಆಗಸ್ಟ್ ನಲ್ಲಿ ಪ್ರವೇಶ ಪಡೆಯಲು ಆಗದ ಅನೇಕ ವಿದ್ಯಾರ್ಥಿಗಳಿಗೆ ನೆರವಾಗಲಿದೆ’ ಎಂದರು.

‘ದ್ವೈವಾರ್ಷಿಕ ವಿಶ್ವವಿದ್ಯಾನಿಲಯ ಪ್ರವೇಶಗಳು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತವೆ. ಏಕೆಂದರೆ ಅವರು ಪ್ರಸ್ತುತ ‘ಚಕ್ರ’ದಲ್ಲಿ ಪ್ರವೇಶವನ್ನು ಕಳೆದುಕೊಂಡರೆ, ಪ್ರವೇಶ ಪಡೆಯಲು ಮತ್ತೆ 1 ಪೂರ್ಣ ವರ್ಷ ಕಾಯಬೇಕಾಗಿಲ್ಲ. ದ್ವೈವಾರ್ಷಿಕ ಪ್ರವೇಶದೊಂದಿಗೆ, ಉದ್ಯಮಗಳು ತಮ್ಮ ಕ್ಯಾಂಪಸ್ ನೇಮಕಾತಿಯನ್ನು ವರ್ಷಕ್ಕೆ 2 ಬಾರಿ ಮಾಡಬಹುದು. ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಕಂಪನಿಗಳಿಗೂ ಇದರಿಂದ ನೆರವಾಗಲಿದೆ’ ಎಂದರು. ‘ವಿಶ್ವದಾದ್ಯಂತ ವಿಶ್ವವಿದ್ಯಾನಿಲಯಗಳು ಈಗಾಗಲೇ ದ್ವೈವಾರ್ಷಿಕ ಪ್ರವೇಶ ವ್ಯವಸ್ಥೆಯನ್ನು ಅನುಸರಿಸುತ್ತವೆ. ಭಾರತೀಯ ವಿವಿಗಳೂ ಅದನ್ನು ಅಳವಡಿಸಿಕೊಳ್ಳುವ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ನಮ್ಮ ವಿದ್ಯಾರ್ಥಿಗಳಿಗೆ ನೆರವಾಗಲಿದೆ’ ಎಂದು ಹೇಳಿದರು.

ಕಡ್ಡಾಯವಲ್ಲ:

ವಿಶ್ವವಿದ್ಯಾನಿಲಯಗಳಿಗೆ ದ್ವೈವಾರ್ಷಿಕ ಪ್ರವೇಶ ವ್ಯವಸ್ಥೆ ಅಳವಡಿಸಿಕೊಳ್ಳುವುದು ಕಡ್ಡಾಯವಲ್ಲ. ಅಗತ್ಯವಿರುವ ಮೂಲಸೌಕರ್ಯ ಮತ್ತು ಬೋಧಕರು ಇದ್ದಲ್ಲಿ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಕುಮಾರ್ ಸ್ಪಷ್ಟಪಡಿಸಿದರು.ಇನ್ನು ಅಳವಡಿಸಿಕೊಳ್ಳಲು ಬಯಸುವ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಸಂಸ್ಥೆಗಳ ನಿಯಮಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.ಏನು ಅನುಕೂಲ?

ಜುಲೈನಲ್ಲಿ ಕಾಲೇಜಿಗೆ ಸೇರಲು ಆಗದೆ ಇದ್ದರೆ ಜನವರಿಯಲ್ಲಿ ಸೇರಬಹುದು. ಫಲಿತಾಂಶ ವಿಳಂಬ, ಅನಾರೋಗ್ಯ ಇನ್ನಿತರ ಸಮಸ್ಯೆಗಳಾದಲ್ಲಿ ಅನುಕೂಲವಾಗಲಿದೆ. ಕಂಪನಿಗಳು ವಿವಿಗಳಲ್ಲಿ ವರ್ಷಕ್ಕೆ 2 ಬಾರಿ ಕ್ಯಾಂಪಸ್‌ ಸಂದರ್ಶನ ಮಾಡಬಹುದು. ಅಂ.ರಾ.ಮಟ್ಟದಲ್ಲಿ ಸ್ಪರ್ಧಿಸಲು ಭಾರತೀಯ ವಿದ್ಯಾರ್ಥಿಗಳಿಗೆ ಇದರಿಂದ ಅವಕಾಶ ಹೆಚ್ಚಲಿದೆ. ಆದರೆ ಇದು ಕಡ್ಡಾಯವಲ್ಲ, ವಿವಿಗಳಲ್ಲಿ ಅನುಕೂಲವಿದ್ದರೆ ಮಾತ್ರ ಈ ವ್ಯವಸ್ಥೆ ಜಾರಿಗೆ ತರಬಹುದು.

PREV

Recommended Stories

ಉತ್ತರಾಖಂಡ ಮೇಘಸ್ಫೋಟಕ್ಕೆ ಅರ್ಧ ಹಳ್ಳಿಯೇ ಭೂಸಮಾಧಿ
ಕೇರಳದ ಎಲ್ಲಾ ಶಾಲೆಗಳಲ್ಲಿ ಇನ್ನು ಲಾಸ್ಟ್‌ ಬೆಂಚೇ ಇರಲ್ಲ!