ಹೈದರಾಬಾದ್: ತೆಲಂಗಾಣದ ಖಾಸಗಿ ಸುದ್ದಿವಾಹಿನಿಯೊಂದರ ಚರ್ಚೆ ವೇಳೆ ಬಿಜೆಪಿ ಅಭ್ಯರ್ಥಿ ಶ್ರೀಶೈಲಂ ಗೌಡ್ ಅವರ ಮೇಲೆ ಆಡಳಿತಾರೂಢ ಬಿಎರ್ಎಸ್ ಪಕ್ಷದ ಶಾಸಕ ಕೆ.ಪಿ.ವಿವೇಕಾನಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಮುಂಬರುವ ವಿಧಾನಸಭಾ ಚುನಾವಣೆ ಸಂಬಂಧ ಹಮ್ಮಿಕೊಂಡಿದ್ದ ಚರ್ಚೆ ವೇಳೆ ಇಬ್ಬರ ನಡುವೆ ಜೋರಾದ ಮಾತುಕತೆ ನಡೆದಿತ್ತು. ಮಾತುಕತೆ ಬಳಿಕ ತೀವ್ರ ಸ್ವರೂಪ ಪಡೆದು ವಾಗ್ವಾದ ಹೆಚ್ಚಾಯಿತು. ಈ ಹಂತದಲ್ಲಿ ಕುರ್ಚಿಯಿಂದ ಎದ್ದ ಶಾಸಕ ವಿವೇಕಾನಂದ ಏಕಾಏಕಿ ಶ್ರೀಶೈಲಂ ಅವರ ಕುತ್ತಿಗೆ ಪಟ್ಟಿ ಹಿಡಿದು ಥಳಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರು ಜಗಳ ಬಿಡಿಸಿ ಸಮಾಧಾನ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹಾಗೂ ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ. ಕಿಶನ್ ರೆಡ್ಡಿ,‘ ಗೂಂಡಾಗಿರಿ ಆಡಳಿತ ಬಿಆರ್ಎಸ್ ಪಕ್ಷದ ಹಾಲ್ಮಾರ್ಕ್. ಚುನಾವಣೆ ಅಭ್ಯರ್ಥಿ ಮೇಲೆಯೇ ಶಾಸಕ ಆಕ್ರಮಣ ಮಾಡುತ್ತಾರೆ ಎಂದರೆ ಸಾಮಾನ್ಯ ಜನರ ಸ್ಥಿತಿ ಗಮನಿಸಿ ಜನರೇ, ಎಚ್ಚರವಾಗಿರಿ’ ಎಂದು ಹೇಳಿದ್ದಾರೆ.