ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ 18 ಹಳ್ಳಿಗರ ಜನರಲ್ಲಿ ಹಠಾತ್ ಕೂದಲು ಉದುರಲು ರೇಷನ್‌ ಗೋಧಿ ಕಾರಣ!

KannadaprabhaNewsNetwork | Updated : Feb 26 2025, 08:44 AM IST

ಸಾರಾಂಶ

ಜನವರಿಯಲ್ಲಿ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ 18 ಹಳ್ಳಿಗರ ಜನರಲ್ಲಿ ಹಠಾತ್ ಕೂದಲು ಉದುರುವಿಕೆ ಸಮಸ್ಯೆ ಆರಂಭವಾಗಿತ್ತು. ಅದರ ಅಧ್ಯಯನದ ಬಳಿಕ ಈಗ ಪಂಜಾಬ್ ಮತ್ತು ಹರ್ಯಾಣದಿಂದ ಆಮದಾದ ರೇಷನ್‌ ಗೋಧಿಯೇ ಸಮಸ್ಯೆಗೆ ಕಾರಣ ಎಂಬ ಅಚ್ಚರಿಯ ಅಂಶ ಹೊರಬಂದಿದೆ.

ಮುಂಬೈ: ಜನವರಿಯಲ್ಲಿ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ 18 ಹಳ್ಳಿಗರ ಜನರಲ್ಲಿ ಹಠಾತ್ ಕೂದಲು ಉದುರುವಿಕೆ ಸಮಸ್ಯೆ ಆರಂಭವಾಗಿತ್ತು. ಅದರ ಅಧ್ಯಯನದ ಬಳಿಕ ಈಗ ಪಂಜಾಬ್ ಮತ್ತು ಹರ್ಯಾಣದಿಂದ ಆಮದಾದ ರೇಷನ್‌ ಗೋಧಿಯೇ ಸಮಸ್ಯೆಗೆ ಕಾರಣ ಎಂಬ ಅಚ್ಚರಿಯ ಅಂಶ ಹೊರಬಂದಿದೆ.

‘ಅಲ್ಲಿನ ಜನ ಸೇವಿಸುತ್ತಿದ್ದ ಗೋಧಿಯಲ್ಲಿ ಹೆಚ್ಚಿನ ಪ್ರಮಾಣದ ಸೆಲೆನಿಯಂ ಅಂಶ ಕಂಡುಬಂದಿದೆ. ಸತುವಿನ ಅಂಶ ಗಮನಾರ್ಹವಾಗಿ ಕಡಿಮೆಯಾಗಿದೆ. ಜನರಿಗೆ ಬಹಳ ಕಡಿಮೆ ಪ್ರಮಾಣದ ಸೆಲೆನಿಯಂ ಅಗತ್ಯವಿರುತ್ತದೆ. ಅದು ಹೆಚ್ಚಾದರೆ ಚಯಾಪಚಯ ಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ. ಆದರೆ ಪಂಜಾಬ್, ಹರ್ಯಾಣದಿಂದ ಆಮದಾದ ಗೋಧಿಯನ್ನು ಸ್ಥಳೀಯ ರೇಷನ್ ಅಂಗಡಿಗಳಿಂದ ಖರೀದಿಸಿ ಜನ ಬಳಸುತ್ತಿದ್ದರು. ಆ ಗೋಧಿಯಲ್ಲಿ ಸೆಲೆನಿಯಂ ಅಧಿಕ ಪ್ರಮಾಣದಲ್ಲಿದ್ದುದೇ ಕೂದಲು ಉದುರುವಿಕೆಗೆ ಕಾರಣವಾಗಿದೆ’ ಎಂದು ತಜ್ಞರ ತಂಡ ಹೇಳಿದೆ.

ಆಗಿದ್ದೇನು?:

2024ರ ಡಿಸೆಂಬರ್‌ನಿಂದ ಜನವರಿ ಅವಧಿಯಲ್ಲಿ ಬುಲ್ಧಾನಾ ಜಿಲ್ಲೆಯ 18 ಹಳ್ಳಿಗಳ 279 ಜನರಲ್ಲಿ ದಿಢೀರ್ ಕೂದಲು ಉದುರುವಿಕೆ ಸಮಸ್ಯೆ (ಅಲೋಪೆಸಿಯಾ ಟೋಟಲಿಸ್) ಆರಂಭವಾಗಿತ್ತು. ಯುವಕರು, ವೃದ್ಧರು ಎನ್ನದೆ ಎಲ್ಲ ವಯೋಮಾನದವರಿಗೂ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಮಕ್ಕಳು ಶಾಲೆ, ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದ್ದರು, ನಿಗದಿಯಾಗಿದ್ದ ವಿವಾಹಗಳು ಸಹ ನಿಂತು ಹೋಗಿದ್ದವು. ಇದರ ಬೆನ್ನಲ್ಲೆ ತಜ್ಞರು ಹಾಗೂ ಆರೋಗ್ಯ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದರು.‘ಸ್ಥಳೀಯ ಗೋಧಿಗಿಂತ ಪಂಜಾಬ್, ಹರ್ಯಾಣದಿಂದ ತರಿಸಿದ ಗೋಧಿಯಲ್ಲಿ ಸೆಲೆನಿಯಂ ಅಂಶ 600 ಪಟ್ಟು ಅಧಿಕವಾಗಿದೆ. ಜನರ ರಕ್ತ, ಮೂತ್ರ ಮತ್ತು ಕೂದಲಿನ ಮಾದರಿಗಳಲ್ಲಿ ಸೆಲೆನಿಯಂ ಅಂಶ ಕ್ರಮವಾಗಿ 35, 60 ಮತ್ತು 150 ಪಟ್ಟು ಹೆಚ್ಚಾಗಿದೆ. ಇದೇ ಈ ಸಮಸ್ಯೆಗೆ ಕಾರಣವಾಗಿದೆ’ ಎಂದು ತಜ್ಞ ಡಾ. ಹಿಮ್ಮತ್ರಾವ್‌ ಬವಾಸ್ಕರ್ ತಿಳಿಸಿದ್ದಾರೆ.

Share this article