ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಜಾನುವಾರುಗಳಿಗೂ ಇನ್ನು ಅಗ್ಗದ ದರದಲ್ಲಿ ಗುಣಮಟ್ಟದ ಜನರಿಕ್‌ ಔಷಧ ಸೌಲಭ್ಯ! ಕೇಂದ್ರ ಸರ್ಕಾರ

KannadaprabhaNewsNetwork | Updated : Mar 06 2025, 05:14 AM IST

ಜನ ಸಾಮಾನ್ಯರಿಗೆ ಅಗತ್ಯ ಗುಣಮಟ್ಟದ ಔಷಧಗಳನ್ನು ಅಗ್ಗದ ದರದಲ್ಲಿ ಜನೌಷಧಿ ಕೇಂದ್ರಗಳ ಮೂಲಕ ಜನರಿಗೆ ಒದಗಿಸುತ್ತಿದ್ದ ಕೇಂದ್ರ ಸರ್ಕಾರ, ಇದೀಗ ಜಾನುವಾರುಗಳಿಗೆ ಅಗತ್ಯವಾದ ಔಷಧಗಳನ್ನು ಜನೆರಿಕ್‌ ಮಾದರಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. 

ನವದೆಹಲಿ: ಜನ ಸಾಮಾನ್ಯರಿಗೆ ಅಗತ್ಯ ಗುಣಮಟ್ಟದ ಔಷಧಗಳನ್ನು ಅಗ್ಗದ ದರದಲ್ಲಿ ಜನೌಷಧಿ ಕೇಂದ್ರಗಳ ಮೂಲಕ ಜನರಿಗೆ ಒದಗಿಸುತ್ತಿದ್ದ ಕೇಂದ್ರ ಸರ್ಕಾರ, ಇದೀಗ ಜಾನುವಾರುಗಳಿಗೆ ಅಗತ್ಯವಾದ ಔಷಧಗಳನ್ನು ಜನೆರಿಕ್‌ ಮಾದರಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಮೂಲಕ ರೈತರಿಗೆ ಅಗ್ಗದ ದರದಲ್ಲಿ ಔಷಧ ಪೂರೈಕೆಗೆ ಮುಂದಾಗಿದೆ.

ಕೇಂದ್ರ ಸರ್ಕಾರದ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ(ಎಲ್‌ಎಚ್‌ಡಿಸಿ) ಕಾರ್ಯಕ್ರಮದ ಅಡಿಯಲ್ಲಿ ಇನ್ನುಮುಂದೆ ಜಾನುವಾರುಗಳಿಗೆ ಕೊಡುವ ಉತ್ತಮ ಗುಣಮಟ್ಟದ ಜನರಿಕ್‌ ಔಷಧಿಗಳನ್ನು ರೈತರಿಗೆ ನೀಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್‌ಎಚ್‌ಡಿಸಿ ಯೋಜನೆಗೆ ‘ಪಶು ಔಷಧಿ’ ಎಂಬ ಅಂಶವನ್ನು ಹೊಸದಾಗಿ ಸೇರಿಸಲಾಗಿದೆ.

ಈ ಬಗ್ಗೆ ಸಭೆಯ ಬಳಿಕ ಮಾಹಿತಿ ನೀಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ‘ಜನ ಔಷಧಿಯಂತೆ ಪಶು ಔಷಧಿ ಎಂಬ ಯೋಜನೆಯನ್ನು ಆರಂಭಿಸಲಾಗಿದ್ದು, ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಔಷಧಿಗಳನ್ನು ಒದಗಿಸಲಾಗುವುದು. ಅದನ್ನು ಪಿಎಂ ಕಿಸಾನ್‌ ಸಮೃದ್ಧಿ ಕೇಂದ್ರಗಳಲ್ಲಿ ವಿತರಿಸಲಾಗುವುದು’ ಎಂದರು. ಅಂತೆಯೇ, ಸಾಂಪ್ರದಾಯಿಕ ಪಶುವೈದ್ಯಕೀಯ ಔಷಧಿಗಳನ್ನು ದಾಖಲಿಸುವುದೂ ಈ ಯೋಜನೆಗೆ ಭಾಗವಾಗಿದೆ ಎಂದು ತಿಳಿಸಿದರು.

ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಜೆನೆರಿಕ್ ಪಶು ಔಷಧವನ್ನು ಪೂರೈಸಲು ಮತ್ತು ಅವುಗಳ ಮಾರಾಟವನ್ನು ಪ್ರೋತ್ಸಾಹಿಸಲು ಒಟ್ಟು ಬಜೆಟ್‌ನಲ್ಲಿ 75 ಕೋಟಿ ರು. ಮೀಸಲಿಡಲಾಗಿದೆ ಎಂದು ವೈಷ್ಣವ್‌ ಮಾಹಿತಿ ನೀಡಿದರು.

ಯೋಜನೆಗೆ 3,880 ಕೋಟಿ ರು. ಮೀಸಲು: ಎಲ್‌ಎಚ್‌ಡಿಸಿ ಯೋಜನೆಗೆ ಬಜೆಟ್‌ನಲ್ಲಿ 3,880 ಕೋಟಿ ರು. ಮೀಸಲಿಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು 2024-25 ಮತ್ತು 2025-26 ಅವಧಿಗೆ ಅನ್ವಯಿಸಲಿದೆ.

ರಾಜ್ಯ ಕಾಲುಬಾಯಿ ರೋಗ ಮುಕ್ತ ವಲಯ: ಕರ್ನಾಟಕ ಸೇರಿದಂತೆ ದೇಶದ 9 ರಾಜ್ಯಗಳನ್ನು(ಪಂಜಾಬ್‌, ಹರ್ಯಾಣ, ಉತ್ತರಾಖಂಡ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌, ಮಹಾರಾಷ್ಟ್ರ) ಕಾಲು ಬಾಯಿ ರೋಗ ಮುಕ್ತ ವಲಯಗಳು ಎಂದು ಘೋಷಿಸಲು ಯೋಗ್ಯವಾಗಿವೆ. ಇದರಿಂದ ಹಾಲು ಹಾಗೂ ಅದರ ಉತ್ಪನ್ನಗಳ ಆಮದು ಹೆಚ್ಚಲಿದ್ದು, ರೈತರ ಆದಾಯ ಅಧಿಕವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.