ಚೆನ್ನೈ : ತಮಿಳುನಾಡಿನ ಪ್ರಸಿದ್ಧ ಉದ್ಯಮ ಸಮೂಹ ಸನ್ ನೆಟ್ವರ್ಕ್ನಲ್ಲಿ ಈಗ ಸೋದರರ ಕಲಹ ಕಾಣಿಸಿಕೊಂಡಿದೆ. 2003ರಲ್ಲಿ ನಡೆದ ಸನ್ ಗ್ರೂಪ್ ಷೇರು ವರ್ಗಾವಣೆಗೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ, ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಸನ್ ಟಿವಿ ಸಮೂಹದ ಮುಖ್ಯಸ್ಥರಾಗಿರುವ ತಮ್ಮ ಸಹೋದರ ಕಲಾನಿಧಿ ಮಾರನ್, ಅವರ ಪತ್ನಿ ಕಾವೇರಿ ಸೇರಿ 6 ಮಂದಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.
ನೋಟಿಸ್ನಲ್ಲಿ ದಯಾನಿಧಿ ಅವರು ಕಲಾನಿಧಿ ಮೇಲೆ ವ್ಯಾಪಕ ಷೇರು ಅವ್ಯವಹಾರದ ಆರೋಪ ಹೊರಿಸಿದ್ದು, ಇದನ್ನು ಸರಿಮಾಡಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ. ಇಲ್ಲದೇ ಹೋದರೆ ಸನ್ ಸಮೂಹದ ಮಾಲೀಕತ್ವದ 37 ಟೀವಿ ವಾಹಿನಿಗಳು, ಪತ್ರಿಕೆಗಳು, ರೇಡಿಯೋ ವಾಹಿನಿಗಳು, ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡ ಹಾಗೂ ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆ ಸೇರಿ ಹಲವಾರು ವ್ಯವಹಾರ ಸ್ಥಗಿತ ಕೋರಿ ಕೋರ್ಟಿಗೆ ಹೋಗುವ ಎಚ್ಚರಿಕೆ ನೀಡಿದ್ದಾರೆ.
ಏನಿದು ವಿವಾದ?:
2003ರಲ್ಲಿ ಕಲಾನಿಧಿ ಹಾಗೂ ದಯಾನಿಧಿ ಅವರ ತಂದೆ ಮುರಸೋಳಿ ಮಾರನ್ ನಿಧನರಾದರು. ಇದು ಆಗಿನಿಂದ ಆರಂಭವಾದ ಅಕ್ರಮ ಎನ್ನಲಾಗಿದೆ.
‘ತಂದೆಯ ಮರಣಾನಂತರ ಕಲಾನಿಧಿ ಮಾರನ್ ಅವರು ಕಂಪನಿಯ ಇತರೆ ಪಾಲುದಾರರ ಅನುಮತಿ ಪಡೆಯದೇ ಹಾಗೂ ತಂದೆಯವರ ಮರಣ ಪ್ರಮಾಣಪತ್ರ ಕೈಸೇರುವ ಮೊದಲೇ ಕೇವಲ ತಲಾ 10 ರು.ನಂತೆ ಕಂಪನಿಯ 12 ಲಕ್ಷ ಷೇರುಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡರು. ಪ್ರತಿ ಷೇರು ಮೌಲ್ಯ 2500 ರು.ನಿಂದ 3000 ರು. ಇದ್ದರೂ ಕಡಿಮೆ ಮೌಲ್ಯಕ್ಕೆ ವರ್ಗಾವಣೆ ಮಾಡಿಕೊಂಡಿದ್ದರು. ಇದರಿಂದಾಗಿ ಸುಮಾರು 3500 ಕೋಟಿ ರು. ಮೌಲ್ಯದ ಷೇರುಗಳು ಕೇವಲ 1.2 ಕೋಟಿ ರು.ಗೆ ಅವರ ಕೈಸೇರಿದ್ದವು. 3,498.8 ಕೋಟಿ ರು.ಗಳನ್ನು ಅವರು ವಂಚಿಸಿದಂತಾಯಿತು’ ಎಂದು ದಯಾನಿಧಿ ಆರೋಪಿಸಿದ್ದಾರೆ. ಆದರೆ ಈಗ ಕಂಪನಿಯ ಮೌಲ್ಯ 24 ಸಾವಿರ ಕೋಟಿ ರು.ಗೆ ಏರಿದೆ.
‘ನೀವು ಮತ್ತು ನಿಮ್ಮ ಸಹಚರರು ನಿಮ್ಮ ವಿಶ್ವಾಸಾರ್ಹ ಮತ್ತು ವೃತ್ತಿಪರ ಬಾಧ್ಯತೆಗಳನ್ನು ಉದ್ದೇಶಪೂರ್ವಕವಾಗಿ ದುರುಪಯೋಗಪಡಿಸಿಕೊಂಡು ಸಂಘಟಿತ ಆರ್ಥಿಕ ಅಪರಾಧಗಳ ಸರಣಿಯನ್ನು ಮಾಡಿದ್ದೀರಿ. ಇದರಿಂದಾಗಿ ಕಂಪನಿಯ ಪಾಲುದಾರರಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದ್ದೀರಿ. ಹೀಗಾಗಿ ಕೂಡಲೇ ಅವ್ಯವಹಾರ ಸರಿಪಡಿಸಿ ಮೌಲ್ಯವನ್ನು ವರ್ಗಾಯಿಸಬೇಕು. ಇಲ್ಲದಿದ್ದರೆ ಕೋರ್ಟಿಗೆ ಹೋಗುತ್ತೇವೆ. ಸನ್ ಸಮೂಹದ ಎಲ್ಲ ಕಂಪನಿಗಳ ಸ್ಥಗಿತಕ್ಕೆ ಕೋರುತ್ತೇನೆ’ ಎಂದು ನೋಟಿಸ್ನಲ್ಲಿ ವಿವರಿಸಿದ್ದಾರೆ.
ಆರೋಪ ಸುಳ್ಳು-ಸನ್ಟೀವಿ:ದಯಾನಿಧಿ ಮಾರನ್ ಆರೋಪ ತಳ್ಳಿ ಹಾಕಿರುವ ಕಂಪನಿಯು, ‘ಇದು 22 ವರ್ಷ ಹಳೆಯ ವಿಚಾರವಾಗಿದ್ದು, ಕಾನೂನು ಬದ್ಧವಾಗಿಯೇ ವ್ಯವಹರಿಸಲಾಗಿದೆ. ಅಲ್ಲದೇ ದಯಾನಿಧಿ ಮಾರನ್ ಅವರು ಮಾಡಿರುವ ಆರೋಪಗಳು ಆಧಾರರಹಿತವಾಗಿದ್ದು, ಇದು ಅವರ ಕೌಟುಂಬಿಕ ವಿಷಯವಾಗಿದೆ’ ಎಂದಿದೆ.
ಏನಿದು ‘ಸನ್’ಕಷ್ಟ?
- 2003ರಲ್ಲಿ ಕಲಾನಿಧಿ- ದಯಾನಿಧಿ ತಂದೆ ಮುರಸೋಳಿ ಮಾರನ್ ಅವರು ನಿಧನರಾದರು. ಅಂದಿನಿಂದಲೇ ವಿವಾದ
- ತಂದೆಯ ಮರಣಾನಂತರ ಕಲಾನಿಧಿ ಅವರು ಷೇರು ವರ್ಗಾವಣೆ ಮಾಡಿಕೊಂಡಿದ್ದಾರೆಂದು ದಯಾನಿಧಿ ಆರೋಪ
- ತಂದೆಯ ಡೆತ್ ಸರ್ಟಿಫಿಕೇಟ್ ಕೈ ಸೇರುವ ಮೊದಲೇ 12 ಲಕ್ಷ ಷೇರುಗಳನ್ನು ಹೆಸರಿಗೆ ಮಾಡಿಕೊಂಡಿದ್ದಾರೆಂದು ದೂರು
- ಪ್ರತಿ ಷೇರು ಬೆಲೆ ₹2500ರಿಂದ ₹3000 ಇದ್ದರೂ ಕೇವಲ ₹10ರಂತೆ ವರ್ಗಾವಣೆ ಮಾಡಿಕೊಂಡಿದ್ದಾರೆಂಬ ಆರೋಪ
- ಇದರಿಂದಾಗಿ 3500 ಕೋಟಿ ರು. ಮೌಲ್ಯದ ಷೇರುಗಳು ಕೇವಲ 1.2 ಕೋಟಿ ರು.ಗೆ ಕಲಾನಿಧಿ ಕೈಸೇರಿವೆ ಎಂದು ಕಿಡಿ
- ಈ ಅವ್ಯವಹಾರವನ್ನು ಸರಿಪಡಿಸಬೇಕು. ಷೇರುಗಳು 2003ರಲ್ಲಿದ್ದಂತೆ ಮಾಡಬೇಕು. ಇಲ್ಲದಿದ್ದರೆ ಕೋರ್ಟಿಗೆ: ದಯಾನಿಧಿ
--ಆರೋಪಗಳು ಆಧಾರರಹಿತಇದು 22 ವರ್ಷ ಹಳೆಯ ವಿಚಾರ. ಕಾನೂನುಬದ್ಧವಾಗಿಯೇ ವ್ಯವಹರಿಸಲಾಗಿದೆ. ಅಲ್ಲದೆ ದಯಾನಿಧಿ ಮಾರನ್ ಅವರು ಮಾಡಿರುವ ಆರೋಪಗಳು ಆಧಾರರಹಿತವಾಗಿವೆ. ಇದು ಅವರ ಕೌಟುಂಬಿಕ ವಿಷಯವಾಗಿದೆ.
- ಸನ್ ಟೀವಿ ಸಮೂಹ--
ಸನ್ ಷೇರುಮೌಲ್ಯ ಕುಸಿತ
ಸನ್ ಟೀವಿ ಸಮೂಹದಲ್ಲಿ ಕೌಟುಂಬಿಕ ಘರ್ಷಣೆ ಆರಂಭವಾದ ಕಾರಣ ಷೇರುಪೇಟೆಯಲ್ಲಿ ಸನ್ ಷೇರು ಮೌಲ್ಯ ಶೇ.5ರಷ್ಟು ಕುಸಿದಿದೆ.
--ಸನ್ ಗ್ರೂಪ್ ಅನ್ನೇ ಬಂದ್
ಮಾಡಿಸುವೆ: ದಯಾನಿಧಿಷೇರು ಅವ್ಯವಹಾರವನ್ನು ಕಲಾನಿಧಿ ಸರಿಮಾಡಿಕೊಳ್ಳಬೇಕು. ಇಲ್ಲದೇ ಹೋದರೆ ಸನ್ ಸಮೂಹದ ಮಾಲೀಕತ್ವದ 37 ಟೀವಿ ವಾಹಿನಿಗಳು, ಪತ್ರಿಕೆಗಳು, ರೇಡಿಯೋ ವಾಹಿನಿಗಳು, ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡ ಹಾಗೂ ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆ ಸೇರಿ ಹಲವಾರು ವ್ಯವಹಾರ ಸ್ಥಗಿತ ಕೋರಿ ಕೋರ್ಟಿಗೆ ಹೋಗುವುದಾಗಿ ದಯಾನಿಧಿ ಎಚ್ಚರಿಕೆ ನೀಡಿದ್ದಾರೆ.