ಚೆನ್ನೈ: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ಕರ್ನಾಟಕ ಕೇಡರ್ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಮತ್ತು ಇತರ ಪಕ್ಷದ ನಾಯಕರು ಕಪ್ಪು ಬಟ್ಟೆ ಧರಿಸಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ಕುರಿತ ಸಭೆಗೆ ಡಿಕೆಶಿ ಆಗಮಿಸಿದ ವೇಳೆ ಈ ಪ್ರಸಂಗ ನಡೆದಿದ್ದು, ಇದು ಉಭಯ ನಾಯಕರ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.‘ನಾನು ತಿಹಾರಕ್ಕೆ ಹೋದಾಗಲೇ ಹೆದರಲಿಲ್ಲ, ಅಣ್ಣಾಮಲೈಗೆ ಹೆದರ್ತೀನಾ? ನನ್ನ ವಿರುದ್ಧ ಪ್ರತಿಭಟಿಸಿದ ಅಣ್ಣಾಮಲೈಗೆ ಶುಭಾಶಯ’ ಎಂದು ವ್ಯಂಗ್ಯಭರಿತವಾಗಿ ಡಿಕೆಶಿ ಪ್ರಶ್ನಿಸಿದ್ದಾರೆ. ಇದಕ್ಕೆ ವ್ಯಂಗ್ಯವಾಗೇ ತಿರುಗೇಟು ನೀಡಿರುವ ಅಣ್ಣಾಮಲೈ, ‘ಸಿದ್ದು ಕೆಳಗಿಳಿಸಲು ಯತ್ನಿಸುತ್ತಿರುವ ಡಿಕೆಶಿ ಯತ್ನಕ್ಕೆ ಶುಭವಾಗಲಿ’ ಎಂದಿದ್ದಾರೆ.
ಬಳಿಕ ಟ್ವೀಟರ್ನಲ್ಲಿ ತಿರುಗೇಟು ನೀಡಿದ ಅಣ್ಣಾಮಲೈ, ‘ಹೌದು, ನಾನು ಪೊಲೀಸ್ ಅಧಿಕಾರಿಯಾಗಿ ಕರ್ನಾಟಕದ ಜನರಿಗೆ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದೇನೆ. ಗಮನಾರ್ಹ ಉಲ್ಲೇಖಕ್ಕಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು ಅಲ್ಲದೆ, ಈ ಬಡವನಿಗೆ ಶುಭ ಹಾರೈಸಿದ್ದಕ್ಕಾಗಿ ಧನ್ಯವಾದಗಳು ಮತ್ತು ಸಿದ್ದರಾಮಯ್ಯ ಅವರನ್ನು ಅವರ ಕುರ್ಚಿಯಿಂದ ಕೆಳಗಿಳಿಸಿ ಕರ್ನಾಟಕದ ಮುಖ್ಯಮಂತ್ರಿಯಾಗುವ ನಿಮ್ಮ ನಿರಂತರ ಪ್ರಯತ್ನಗಳಿಗೆ ನನ್ನ ಶುಭಾಶಯಗಳು’ ಎಂದು ವ್ಯಂಗ್ಯವಾಡಿದ್ದಾರೆ.