ಹರ್ಯಾಣ ಭೂಖರೀದಿ ಪ್ರಕರಣ:ಇ.ಡಿ.ಯಿಂದ ವಾದ್ರಾ ವಿಚಾರಣೆ

KannadaprabhaNewsNetwork | Published : Apr 16, 2025 12:42 AM

ಸಾರಾಂಶ

ಭೂಮಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್‌ ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ಮಂಗಳವಾರ ಕೆಲಕಾಲ ವಿಚಾರಣೆ ನಡೆಸಿದೆ.

- ಇದು ರಾಜಕೀಯ ಹಗೆತನದ ಕ್ರಮ: ವಾದ್ರಾ ಆರೋಪನವದೆಹಲಿ: ಭೂಮಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್‌ ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ಮಂಗಳವಾರ ಕೆಲಕಾಲ ವಿಚಾರಣೆ ನಡೆಸಿದೆ.

ಇ.ಡಿ.ಕಚೇರಿಗೆ ತೆರಳುವ ವೇಳೆ ಪ್ರತಿಕ್ರಿಯಿಸಿದ ಅವರು, ನಾನು ದೇಶದ ಪರ, ಅಲ್ಪಸಂಖ್ಯಾತರ ಪರ ಮಾತನಾಡಿದಾಗಲೆಲ್ಲ ನನ್ನನ್ನು ತಡೆಯಲು ಯತ್ನಿಸುತ್ತಿದ್ದಾರೆ. ಇದೇ ರೀತಿ ರಾಹುಲ್‌ ಗಾಂಧಿ ಅವರನ್ನೂ ಅವರು

ಸಂಸತ್ತಿನಲ್ಲಿ ತಡೆಯಲೆತ್ನಿಸಿದರು. ಇದು ತನಿಖಾ ಸಂಸ್ಥೆಗಳ ದುರ್ಬಳಕೆ ಹಾಗೂ ರಾಜಕೀಯ ಹಗೆತನದ ಕ್ರಮವಾಗಿದೆ ಎಂದು ಆರೋಪಿಸಿದರು.ಹರ್‍ಯಾಣದ ಗುರುವಾಂವ್‌ನ ಶಿಕೋಪುರ್‌ನಲ್ಲಿ 2008ರ ಫೆಬ್ರವರಿಯಲ್ಲಿ ಭೂಮಿ ಖರೀದಿಗೆ ಸಂಬಂಧಿಸಿ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಇದೀಗ ಇ.ಡಿ. ತನಿಖೆ ನಡೆಸುತ್ತಿದೆ. ವಾದ್ರಾ ಅವರ ಸ್ಕೈಲೈಟ್‌ ಹಾಸ್ಪಿಟ್ಯಾಲಿಟಿ ಪ್ರೈ.ಲಿ. ಸಂಸ್ಥೆಯು ಓಂಕಾರೇಶ್ವರ ಪ್ರಾಪರ್ಟೀಸ್ ಸಂಸ್ಥೆಯಿಂದ 3.5 ಎಕ್ರೆ ಭೂಮಿಯನ್ನು 7.5 ಕೋಟಿ. ರು ಕೊಟ್ಟು ಖರೀದಿಸಿತ್ತು. ಈ ಖರೀದಿ ನಡೆದ ಕೇವಲ 3 ವರ್ಷಗಳಲ್ಲಿ ಇದೇ ಜಾಗವನ್ನು ಡಿಎಲ್‌ಎಫ್‌ ಸಂಸ್ಥೆಗೆ ಭರ್ಜರಿ 58 ಕೋಟಿ ರು.ಗೆ ಮಾರಾಟ ಮಾಡಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದ ಈ ಖರೀದಿ ವ್ಯವಹಾರ ಅನುಮಾನಾಸ್ಪದವಾಗಿದೆ ಎಂದು ಹರ್ಯಾಣ ಪೊಲೀಸರು 2018ರಲ್ಲಿ ಪ್ರಕರಣ ದಾಖಲಿಸಿದ್ದರು.ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇ.ಡಿ.ಯು ಏ.8ರಂದೇ ವಾದ್ರಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ದಾಖಲೆಗಳನ್ನು ಸಿದ್ಧಪಡಿಸುತ್ತಿರುವುದಾಗಿ ಹೇಳಿ ಅ‍ವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದೀಗ ಅವರಿಗೆ ಎರಡನೇ ಬಾರಿ ಸಮನ್ಸ್‌ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.ಈಗಾಗಲೇ ಬೇರೆ ಪ್ರಕರಣದಲ್ಲಿ ಅಕ್ರಮ ಹಣಕಾಸು ಹಗರಣಕ್ಕೆ ಸಂಬಂಧಿಸಿ ವಾದ್ರಾ ಅವರು ಹಲವು ಬಾರಿ ಇ.ಡಿ. ವಿಚಾರಣೆಗೆ ಒಳಗಾಗಿದ್ದಾರೆ.

Share this article