ತರಕಾರಿ, ಹಣ್ಣು ದರದಲ್ಲಿ ರೈತರಿಗೆ ಸಿಗೋದು ಬರೀ 30%! : ಮಧ್ಯವರ್ತಿಗಳು, ವ್ಯಾಪಾರಿಗಳಿಗೇ ಶೇ.70

Published : Oct 08, 2024, 05:26 AM IST
vegetable

ಸಾರಾಂಶ

ರೈತರ ಆದಾಯ ದ್ವಿಗುಣಕ್ಕೆ ಒಂದೆಡೆ ಕೇಂದ್ರ ಸರ್ಕಾರ ನಾನಾ ಯೋಜನೆಗಳನ್ನು ರೂಪಿಸುತ್ತಿದ್ದರೆ, ಇನ್ನೊಂದೆಡೆ ತರಕಾರಿ ಮತ್ತು ಹಣ್ಣಿನ ಅಂತಿಮ ಮಾರಾಟದ ಬೆಲೆಯ ಪೈಕಿ ಶೇ.30ರಷ್ಟು ಮಾತ್ರವೇ ಅದನ್ನು ಬೆಳೆದ ರೈತನಿಗೆ ಸಿಗುತ್ತಿದೆ ಎಂಬ ಕಳವಳಕಾರಿ ಅಂಶ ಹೊರಬಿದ್ದಿದೆ.

ಮುಂಬೈ: ರೈತರ ಆದಾಯ ದ್ವಿಗುಣಕ್ಕೆ ಒಂದೆಡೆ ಕೇಂದ್ರ ಸರ್ಕಾರ ನಾನಾ ಯೋಜನೆಗಳನ್ನು ರೂಪಿಸುತ್ತಿದ್ದರೆ, ಇನ್ನೊಂದೆಡೆ ತರಕಾರಿ ಮತ್ತು ಹಣ್ಣಿನ ಅಂತಿಮ ಮಾರಾಟದ ಬೆಲೆಯ ಪೈಕಿ ಶೇ.30ರಷ್ಟು ಮಾತ್ರವೇ ಅದನ್ನು ಬೆಳೆದ ರೈತನಿಗೆ ಸಿಗುತ್ತಿದೆ ಎಂಬ ಕಳವಳಕಾರಿ ಅಂಶ ಹೊರಬಿದ್ದಿದೆ.

ಆಹಾರ ಹಣದುಬ್ಬರ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸಿದ್ಧಪಡಿಸಿರುವ ಅಧ್ಯಯನ ವರದಿಯೊಂದು ಇಂಥದ್ದೊಂದು ಮಾಹಿತಿ ಹೊರಹಾಕಿದೆ. ಜೊತೆಗೆ ಅಂತಿಮ ಮಾರಾಟದ ಬೆಲೆಯ ಶೇ.70ರಷ್ಟು ಪಾಲು ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಪಾಲಾಗುತ್ತಿದೆ ಎಂದು ವರದಿ ಹೇಳಿದೆ.

ವರದಿ ಹೇಳಿದ್ದೇನು?:

ವಿವಿಧ ರೀತಿಯ ಕೃಷಿ ಮತ್ತು ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೈತರ ಆದಾಯ ಗಮನಿಸಿದರೆ, ತರಕಾರಿ ಮತ್ತು ಹಣ್ಣು ಬೆಳೆಯುವ ರೈತನಿಗೆ ಅಂತಿಮ ಮಾರಾಟ ದರದಲ್ಲಿ ಶೇ.30ರಷ್ಟು ಮಾತ್ರವೇ ಪಾಲು ಸಿಗುತ್ತಿದೆ. ಉಳಿದ ಶೇ.70ರಷ್ಟು ಪಾಲು ಮಧ್ಯವರ್ತಿಗಳು, ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಪಾಲಾಗುತ್ತಿದೆ ಎಂದು ವರದಿ ಹೇಳಿದೆ.

ಆದರೆ ಈ ಆದಾಯದ ಪಾಲಿನ ಪ್ರಮಾಣ ಕೆಲ ವಲಯಗಳಲ್ಲಿ ಭಿನ್ನವಾಗಿದೆ. ತರಕಾರಿಗೆ ಹೋಲಿಸಿದರೆ ಇತರೆ ವಲಯಗಳಲ್ಲಿ ರೈತರಿಗೆ ಸಿಗುವ ಪಾಲು ಹೆಚ್ಚಿದೆ. ಉದಾಹರಣೆಗೆ ಕ್ಷೀರೋದ್ಯಮದಲ್ಲಿ ರೈತನಿಗೆ ಶೇ.70ರಷ್ಟು ಪಾಲು, ಮೊಟ್ಟೆ ಉದ್ಯಮದಲ್ಲಿ ಅತಿ ಹೆಚ್ಚು ಶೇ.75ರಷ್ಟು ಪಾಲು ರೈತರಿಗೆ ಸಿಗುತ್ತಿದೆ. ಇದರ ನಂತರದಲ್ಲಿ ಕೋಳಿ ಮಾಂಸದ ವಲಯದಲ್ಲಿ ರೈತರು ಮತ್ತು ಅಗ್ರಿಗೇಟರ್‌ಗಳು ಒಟ್ಟಾರೆ ಶೇ.56ರಷ್ಟು ಪಾಲು ಹಂಚಿಕೊಳ್ಳುತ್ತಿದ್ದಾರೆ ಎಂದು ವರದಿ ಹೇಳಿದೆ.

ಪ್ರಮುಖ ತರಕಾರಿ:

ಪ್ರತಿ ವರ್ಷ ಬೆಳೆ ಕುಸಿತ ಇಲ್ಲವೇ ಬೇಡಿಕೆ ಹೆಚ್ಚಳದ ಕಾರಣ ಈರುಳ್ಳಿ, ಟೊಮೆಟೋ ಮತ್ತು ಆಲೂಗಡ್ಡೆ ದರ ಗಗನಕ್ಕೇರುತ್ತದೆ. ಆದರೆ ಇದರೆ ಲಾಭ ರೈತರಿಗೆ ಸಿಗುತ್ತಿಲ್ಲ. ಈರುಳ್ಳಿಯಲ್ಲಿ ಶೇ.36, ಟೊಮೆಟೋದಲ್ಲಿ ಶೇ.33 ಮತ್ತು ಆಲೂಗಡ್ಡೆಯಲ್ಲಿ ಶೇ.37ರಷ್ಟು ಮಾತ್ರವೇ ಪಾಲು ರೈತರಿಗೆ ದೊರೆಯುತ್ತಿದೆ ಎಂದು ವರದಿ ಹೇಳಿದೆ.

ಹಣ್ಣಿನ ಪಾಲು:

ಹಣ್ಣುಗಳ ವಿಭಾಗದಲ್ಲಿ ಬಾಳೆಹಣ್ಣಿನಲ್ಲಿ ಶೇ.31ರಷ್ಟು, ದ್ರಾಕ್ಷಿಯಲ್ಲಿ ಶೇ.35ರಷ್ಟು ಮತ್ತು ಮಾವಿನ ಹಣ್ಣಿನಲ್ಲಿ ಶೇ.43ರಷ್ಟು ಪಾಲು ಬೆಳೆಗಾರನಿಗೆ ಸೇರುತ್ತಿದೆ. ಅದೇ ಹೊರದೇಶಕ್ಕೆ ರಫ್ತು ಮಾಡುವಾಗ ದ್ರಾಕ್ಷಿ ಹೊರತುಪಡಿಸಿ ಮಿಕ್ಕೆಲ್ಲಾ ಹಣ್ಣುಗಳ ಮಾರಾಟದ ಮೌಲ್ಯವು ರೈತನಿಗೆ ಹೆಚ್ಚು ದೊರೆಯುತ್ತಿದೆ ಎಂದು ವರದಿ ಹೇಳಿದೆ.

ಬೆಲೆ ಏರಿಕೆ ತಡೆಗೆ ಕ್ರಮ:

ಪ್ರಮುಖ ಆಹಾರ ವಸ್ತುಗಳ ಬೆಲೆ ಏರಿಕೆ ತಡೆಗೆ ಖಾಸಗಿ ಮಂಡಿಗಳ ವಿಸ್ತರಣೆ ಆಗಬೇಕು, ರೈತ ಸಹಕಾರ ಸಂಘಗಳ ಉತ್ತೇಜನ, ಫ್ಯೂಚರ್‌ ಟ್ರೇಡಿಂಗ್‌ಗೆ ಹೊಸ ರೂಪ, ಇ-ನಾಮ್‌ ವಿಸ್ತರಣೆ, ಹೆಚ್ಚಿನ ಶೀತಲಾಗಾರ ಸ್ಥಾಪನೆ, ಸೌರ ಶಕ್ತಿ ಆಧರಿತ ಶೀತಲಾಗಾರ ಸ್ಥಾಪನೆಗೆ ಉತ್ತೇಜನ, ಕೃಷಿ ಉತ್ಪನಗಳ ಸಂಸ್ಕರಣೆ ಪ್ರಮಾಣ ಹೆಚ್ಚಳ, ಸಂಸ್ಕರಿತ ಕೃಷಿ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ವರದಿ ಹೇಳಿದೆ.
ವಲಯ ದರದಲ್ಲಿ ರೈತರಿಗೆ ಸಿಗುವ ಪಾಲು

ತರಕಾರಿ 30%

ಕೋಳಿ ಮೊಟ್ಟೆ 75%

ಕ್ಷೀರೋತ್ಪನ್ನ 70%

ಕೋಳಿಸಾಗಣೆ 56%

==

ತರಕಾರಿ-ಹಣ್ಣು ರೈತನ ಪಾಲು

ಈರುಳ್ಳಿ 36%

ಟೊಮೆಟೋ 33%

ಆಲೂಗಡ್ಡೆ 37%

ಬಾಳೆಹಣ್ಣು 31%

ದ್ರಾಕ್ಷಿ 35%

ಮಾವಿನ ಹಣ್ಣು 43%

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!
7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು