ನವದೆಹಲಿ: ಅಹಮದಾಬಾದ್-ಲಂಡನ್ ಏರ್ ಇಂಡಿಯಾ ವಿಮಾನ ಪತನದ ಬೆನ್ನಲ್ಲೇ ಮಂಗಳವಾರ ವಿದೇಶಕ್ಕೆ ತೆರಳಬೇಕಿದ್ದ ಬೆಂಗಳೂರು-ಲಂಡನ್ ವಿಮಾನ ಸೇರಿ 7 ಏರ್ ಇಂಡಿಯಾ ಡ್ರೀಮ್ಲೈನರ್ ವಿಮಾನಗಳು ರದ್ದಾಗಿವೆ. ಈ ವಿದ್ಯಮಾನ ಪ್ರಯಾಣಿಕರಲ್ಲಿ ಭಾರೀ ಕಳವಳ ಉಂಟು ಮಾಡಿದೆ.
ಅಹಮದಾಬಾದ್-ಲಂಡನ್ ಎಐ 159, ಅಮೃತಸರ-ಲಂಡನ್ ಎಐ 170, ದಿಲ್ಲಿ-ಪ್ಯಾರಿಸ್ ಎಐ 143, ಬೆಂಗಳೂರು-ಲಂಡನ್ ಎಐ 133, ದೆಹಲಿ-ವಿಯೆನ್ನಾ ಎಐ 153, ಹಾಂಕಾಂಗ್-ದಿಲ್ಲಿ ಎಐ 315, ದಿಲ್ಲಿ-ದುಬೈ ಎಐ 915- ಇವು ರದ್ದಾದ ವಿಮಾನಗಳು. ವಿಮಾನ ಅಲಭ್ಯತೆ, ಇರಾನ್-ಇಸ್ರೇಲ್ ಸಮರದ ಹಿನ್ನೆಲೆಯಲ್ಲಿ ಅಲ್ಲಿನ ವಾಯುಪ್ರದೇಶ ನಿರ್ಬಂಧದ ಕಾರಣ ನೀಡಿ ಏರ್ ಇಂಡಿಯಾ ಈ ನಿರ್ಧಾರ ತೆಗೆದುಕೊಂಡಿದೆ. ಜೊತೆಗೆ ಕೆಲವು ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆಯೂ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.
ಅಹಮದಾಬಾದ್ನಲ್ಲಿ ಪತನ ಆಗಿದ್ದೂ ಬೋಯಿಂಗ್ ಡ್ರೀಮ್ಲೈನರ್. ಈಗ ರದ್ದಾದ 7 ವಿಮಾನಗಳೂ ಡ್ರೀಮ್ಲೈನರ್. ಹೀಗಾಗಿ ಡ್ರೀಮ್ಲೈನರ್ ಕ್ಷಮತೆಯ ಬಗ್ಗೆ ನಾನಾ ಪ್ರಶ್ನೆ ಎದ್ದಿವೆ. ಇದರ ಬೆನ್ನಲ್ಲೇ ಸತತ ರದ್ದತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ವಿಮಾನಯಾನ ನಿರ್ದೇಶನಾಲಯ ಉನ್ನತ ಮಟ್ಟದ ಸಭೆ ನಡೆಸಿ ವಿಮಾನದ ಸುರಕ್ಷತೆ ಹಾಗೂ ವಾಯುವಲಯ ನಿರ್ಬಂಧ ಬಗ್ಗೆ ಚರ್ಚಿಸಿದೆ.
ಅಹಮದಾಬಾದ್-ಲಂಡನ್ ವಿಮಾನ ರದ್ದು:ವಿಮಾನದ ಅಲಭ್ಯತೆ ಕಾರಣ ನೀಡಿ ಮಂಗಳವಾರ ಗುಜರಾತ್ನ ಅಹಮದಾಬಾದ್ನಿಂದ ಲಂಡನ್ಗೆ ತೆರಳಲಿದ್ದ ಏರ್ ಇಂಡಿಯಾ ಡ್ರೀಮ್ಲೈನರ್ ವಿಮಾನ ಎಐ-159 ಅನ್ನು ರದ್ದುಗೊಳಿಸಲಾಗಿದೆ. ಜೂ.12ರಂದು ಸಂಭವಿಸಿದ ಘೋರ ದುರಂತದ ಬಳಿಕ ಏರ್ ಇಂಡಿಯಾ ವಿಮಾನದ ಎಐ-171 ಸಂಖ್ಯೆಯನ್ನು ಕೈಬಿಟ್ಟು ಎಐ-159ನ್ನು ಅಳವಡಿಸಿತ್ತು. ಆದರೆ ಅಗತ್ಯ ಸಂಖ್ಯೆಯ ವಿಮಾನಗಳು ಲಭ್ಯವಿಲ್ಲದ ಕಾರಣ ನೀಡಿ ಅಹಮದಾಬಾದ್ನಿಂದ ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆ ರಳಲಿದ್ದ ವಿಮಾನದ ಹಾರಾಟವನ್ನು ರದ್ದುಪಡಿಸಿದೆ. ಇದಕ್ಕೆ ವಿಮಾನದ ಅಲಭ್ಯತೆ ಕಾರಣವನ್ನು ಅದು ನೀಡಿದೆ. ಅವರನ್ನು ಲಂಡನ್ಗೆ ತಲುಪಿಸಲು ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಹೋಟೆಲ್ ವಸತಿ ಸೌಕರ್ಯ ಒದಗಿಸುತ್ತಿದ್ದೇವೆ. ಪೂರ್ಣ ಮರುಪಾವತಿಯೊಂದಿಗೆ ಟಿಕೆಟ್ ರದ್ದತಿ ಅಥವಾ ಮರುನಿಗದಿ ಆಯ್ಕೆಯನ್ನು ನೀಡಿದ್ದೇವೆ’ ಎಂದಿದೆ.
ಬೆಂಗಳೂರು-ಲಂಡನ್ ವಿಮಾನ ರದ್ದು:
ಇದೇ ವೇಳೆ, ಬೋಯಿಂಗ್ 787 ಫ್ಲೀಟ್ ತಪಾಸಣೆಗೆ ಸರ್ಕಾರ ಸೂಚಿಸಿರುವ ಕಾರಣ ವಿಮಾನಗಳು ಲಭ್ಯವಿಲ್ಲ ಹೀಗಾಗಿ ಬೆಂಗಳೂರಿನಿಂದ ಲಂಡನ್ನ ಹೀಥ್ರೂಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಎಐ 133 ಅನ್ನು ಪೂರ್ವಭಾವಿಯಾಗಿ ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.
ದೆಹಲಿ-ಪ್ಯಾರಿಸ್ ವಿಮಾನ ರದ್ದು:
ಏತನ್ಮಧ್ಯೆ, ಜೂ.17ರಂದು ದೆಹಲಿಯಿಂದ ಪ್ಯಾರಿಸ್ಗೆ ಹಾರಾಟ ನಡೆಸುತ್ತಿದ್ದ ಎಐ143 ಡ್ರೀಮ್ಲೈನರ್ ವಿಮಾನವನ್ನು ರದ್ದುಗೊಳಿಸಲಾಗಿದೆ. ಕಡ್ಡಾಯ ಪೂರ್ವ-ವಿಮಾನ ತಪಾಸಣೆಯಲ್ಲಿ ಒಂದು ಸಮಸ್ಯೆ ಕಂಡುಬಂದಿದ್ದು, ಅದನ್ನು ಪ್ರಸ್ತುತ ಪರಿಹರಿಸಲಾಗುತ್ತಿದೆ. ಆದಾಗ್ಯೂ, ಯಾನ ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.
ಲಂಡನ್-ಅಮೃತಸರ ವಿಮಾನ ರದ್ದು: ಇನ್ನೊಂದು ಕಡೆ ಜೂನ್ 17 ಮಂಗಳವಾರ ಲಂಡನ್ ಗ್ಯಾಟ್ವಿಕ್ ನಿಂದ ಅಮೃತಸರಕ್ಕೆ ಹಾರಲು ನಿಗದಿಯಾಗಿದ್ದ ಏರ್ ಇಂಡಿಯಾ ವಿಮಾನವನ್ನು ವಿಮಾನಯಾನ ಸಂಸ್ಥೆ ರದ್ದುಗೊಳಿಸಿದೆ. ಇದಕ್ಕೆ ಅದು ವಾಯುಪ್ರದೇಶ ನಿರ್ಬಂಧಗಳ ಕಾರಣ ನೀಡಿದೆ.
ಹಾಂಕಾಂಗ್ಗೇ ದಿಲ್ಲಿ-ಹಾಂಕಾಂಗ್ ವಿಮಾನ ವಾಪಸ್:
ಹಾಂಕಾಂಗ್-ದೆಹಲಿ ಎಐ 315 ಆಗಿ ಡ್ರೀಮ್ಲೈನರ್ನಲ್ಲೂ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ವಿಮಾನ ಹಾಂಕಾಂಗ್ಗೆ ಹಿಂತಿರುಗಬೇಕಾಯಿತು.
ಗೋವಾ-ಲಖನೌ ಇಂಡಿಗೋ ವಿಮಾನದಲ್ಲಿ ಟರ್ಬ್ಯುಲೆನ್ಸ್: ಪ್ರಯಾಣಿಕರು ಸುರಕ್ಷಿತ
ಮುಂಬೈ: ಗೋವಾದಿಂದ ಲಖನೌಗೆ ಹೊರಟಿದ್ದ ಏರಿಂಡಿಯಾ ವಿಮಾನವು ಪ್ರತಿಕೂಲ ಹವಾಮಾನದಿಂದಾಗಿ ಗಾಳಿಯಲ್ಲಿ ಪ್ರಕ್ಷುಬ್ಧತೆ ಎದುರಿಸಿ ಘಟನೆ ನಡೆದಿದೆ, ಆದರೆ ವಿಮಾನಯಾನ ಸಿಬ್ಬಂದಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ ಘಟನೆ ಘಟನೆ ನಡೆದಿದೆ.ಈ ಬಗ್ಗೆ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದ್ದು, ‘ಗೋವಾ ಮತ್ತು ಲಖನೌ ನಡುವಿನ 6ಇ 6811 ವಿಮಾನದ ಹಾರಾಟ ವೇಳೆ ಟರ್ಬ್ಯುಲೆನ್ಸ್ ಸಮಸ್ಯೆ ಉಂಟಾಗಿದೆ. ಮಾನ್ಸೂನ್ ಕಾರಣದಿಂದ ಪ್ರಕ್ಷುಬ್ಧತೆ ಉಂಟಾಗಿದ್ದು, ವಿಮಾನವನ್ನು ಲಖನೌನಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಲಾಗಿದೆ’ ಎಂದಿದೆ. ಆದರೆ ಹೆಚ್ಚಿನ ವಿವರ ಬಿಟ್ಟುಕೊಟ್ಟಿಲ್ಲ.
ಕೊಚ್ಚಿಯಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ
ಕೊಚ್ಚಿ: ಮಸ್ಕತ್ನಿಂದ ಕೊಚ್ಚಿ ಮಾರ್ಗವಾಗಿ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಪರಿಣಾಮ ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ನಾಗ್ಪುರ ವಿಮಾಣ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.ಈ ಬಗ್ಗೆ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಸಿಐಎಎಲ್)ನ ಮಾಹಿತಿ ನೀಡಿದ್ದು, ಅಧಿಕೃತ ಇಮೇಲ್ಗೆ ಬೆದರಿಕೆ ಸಂದೇಶ ಬಂದಿದೆ. ವಿಮಾನದಲ್ಲಿ 157 ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಬಾಂಬ್ ಬೆದರಿಕೆ ಸಂದೇಶ ಬರುತ್ತಿದ್ದಂತೆ ಬಾಂಬ್ ಬೆದರಿಕೆ ಪರಿಶೀಲನಾ ಸಮಿತಿ (ಬಿಟಿಎಸಿ) ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದೆ. ಆ ಬಳಿಕ ವಿಮಾನ ದೆಹಲಿಗೆ ಪ್ರಯಾಣಿಸಲಿದೆ.