ನವದೆಹಲಿ: ಇತ್ತೀಚೆಗೆ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಕಾರ್ಯಕ್ರಮವೊಂದರಲ್ಲಿ ಅಶ್ಲೀಲವಾಗಿ ಮಾತಾಡಿದ ಬೆನ್ನಲ್ಲೇ ಅಂತಹ ಘಟನೆಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ನೀಡಿದ ಸೂಚನೆಯನ್ನು ಕೇಂದ್ರ ಸರ್ಕಾರ ಕಾರ್ಯರೂಪಕ್ಕೆ ತಂದಿದೆ. ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಒಟಿಟಿ ವೇದಿಕೆಗಳು ಹಾಗೂ ಸೋಷಿಯಲ್ ಮೀಡಿಯಾಗಳಿಗೆ ಕಟ್ಟುನಿಟ್ಟಿನ ಸಲಹಾವಳಿ ಜಾರಿ ಮಾಡಿದೆ.
ಕೆಲ ಒಟಿಟಿಗಳು ಹಾಗೂ ಸಾಮಾಜಿಕ ಮಾಧ್ಯಮಗಳು ಅಶ್ಲೀಲ ಹಾಗೂ ಅಸಭ್ಯ ವಿಷಯಗಳನ್ನು ಪ್ರಸಾರ ಮಾಡುತ್ತಿವೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ, ಕಾನೂನಿನಿಂದ ನಿಷೇಧಿಸಲ್ಪಟ್ಟ ಯಾವುದೇ ವಿಷಯವನ್ನು ಪ್ರಕಟಿಸದಂತೆ ಎಚ್ಚರಿಸಲಾಗಿದೆ.
ರಣವೀರ್ ಅಲಹಾಬಾದಿಯಾ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ವಿಚಾರಣೆ ನಡೆಸಿದ್ದ ಕೋರ್ಟ್, ಅವರಾಡಿದ್ದ ನುಡಿಗಳ ಬಗ್ಗೆ ಅಸಹ್ಯ ವ್ಯಕ್ತಪಡಿಸಿ, ‘ಇದು ಅಶ್ಲೀಲತೆ ಅಲ್ಲದಿದ್ದರೆ ಇನ್ನೇನು?’ ಎಂದು ಪ್ರಶ್ನಿಸಿತ್ತು. ಜೊತೆಗೆ, ಇದರ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿತ್ತು.