ನವದೆಹಲಿ: ಸಂಸತ್ ಭವನದ ಆವರಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯ ಸಲುವಾಗಿ ಹಳೆ ಸಂಸತ್ ಭವನದ ಎದುರಿಗಿದ್ದ ಮಹಾತ್ಮ ಗಾಂಧಿ, ಛತ್ರಪತಿ ಶಿವಾಜಿ, ಡಾ. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ಥಳಾಂತರ ಮಾಡಲಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟ್ ಮಾಡಿ, ‘ಬಿಜೆಪಿಗೆ ಗುಜರಾತ್ನಲ್ಲಿ ಒಂದು ಸ್ಥಾನ ಕಳೆದಿದ್ದಕ್ಕೆ ಗಾಂಧಿಯನ್ನೂ, ಮಹಾರಾಷ್ಟ್ರದಲ್ಲಿ ಕಡಿಮೆ ಸ್ಥಾನ ಬಂದಿದ್ದಕ್ಕೆ ಶಿವಾಜಿಯನ್ನೂ, ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಯನ್ನೂ ಸ್ಥಳಾಂತರ ಮಾಡಿ ಅಗೌರವ ತೋರಲಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ಪವನ್ ಖೇರಾ ಮಾತನಾಡಿ, ‘ಬಿಜೆಪಿಗೆ ಕೇವಲ 240 ಸ್ಥಾನ ಬಂದಿದ್ದರೂ ಪ್ರತಿಮೆಗಳನ್ನು ಬದಲಾಯಿಸಿದೆ. ಇನ್ನೇನಾದರೂ 400 ಸ್ಥಾನಗಳು ಬಂದಿದ್ದರೆ ಈ ವೇಳೆಗೆ ಸಂವಿಧಾನವನ್ನೇ ಬದಲಿಸಿಬಿಡುತ್ತಿತ್ತು’ ಎಂದು ವ್ಯಂಗ್ಯವಾಡಿದ್ದಾರೆ.