ಸುಪ್ರೀಂ ಉವಾಚ
- ಏಕಪಕ್ಷೀಯವಾಗಿ ಖಾಸಗಿ ಆಸ್ತಿ ವಶಪಡಿಸಿಕೊಳ್ಳುವ ಅಧಿಕಾರ ಸರ್ಕಾರಕ್ಕೆ ಇಲ್ಲ
- ಸಂವಿಧಾನದ 39 (ಎ) ವಿಧಿ ವ್ಯಾಪ್ತಿಯಲ್ಲಿನ ಅರ್ಹ ಆಸ್ತಿ ಮಾತ್ರ ಪಶಪಡಿಸಿಕೊಳ್ಳಬೇಕು- ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದಿಂದ 7:2 ಬಹುಮತದ ಐತಿಹಾಸಿಕ ತೀರ್ಪು
-----ನವದೆಹಲಿ: ‘ಸಮುದಾಯದ ಒಳಿತಿನ ಹೆಸರಲ್ಲಿ, ಸರ್ಕಾರಗಳು ಯಾವುದೇ ಖಾಸಗಿ ಆಸ್ತಿಯನ್ನು ಸಂವಿಧಾನದ ನಿಯಮಗಳ ಹೆಸರಿನಲ್ಲಿ ಏಕಪಕ್ಷೀಯವಾಗಿ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಹೀಗೆ ವಶಪಡಿಸಿಕೊಳ್ಳಲು ಉದ್ದೇಶಿಸಿರುವ ಆಸ್ತಿಯು ಕೆಲವೊಂದು ಮಾನದಂಡಗಳನ್ನು ಪೂರೈಸಿದರಷ್ಟೇ ಅದು ಸಮುದಾಯದ ಭೌತಿಕ ಸಂಪನ್ಮೂಲ ಎಂದು ಪರಿಗಣಿಸಲ್ಪಡುತ್ತದೆ. ಅಂಥ ಸಂದರ್ಭದಲ್ಲಿ ಮಾತ್ರ ಸರ್ಕಾರಗಳು ಖಾಸಗಿ ಆಸ್ತಿ ವಶಪಡಿಸಿಕೊಳ್ಳಬಹುದು’ ಎಂದು ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ 7:2 ಬಹುಮತದಿಂದ ಐತಿಹಾಸಿಕ ತೀರ್ಪು ನೀಡಿದೆ.
ನ್ಯಾ.ಚಂದ್ರಚೂಡ್ ತಾವು ಮತ್ತು ಇತರೆ 6 ನ್ಯಾಯಾಧೀಶರ ಪರವಾಗಿ ಒಂದು ತೀರ್ಪು ಬರೆದರೆ, ತೀರ್ಪಿನ ಮೂಲ ಅಂಶಗಳನ್ನು ಭಾಗಶಃ ಬೆಂಬಲಿಸಿ ಹಾಗೂ ಕೆಲವು ಭಾಗಗಳಿಗೆ ಆಕ್ಷೇಪಿಸಿ ನ್ಯಾ. ಬಿ.ವಿ. ನಾಗರತ್ನ ಪ್ರತ್ಯೇಕ ತೀರ್ಪು ಬರೆದರು. ಇನ್ನು ನ್ಯಾ. ಸುಧಾಂಶು ಧುಲಿಯಾ, ಇತರೆ ಎಲ್ಲ ನ್ಯಾಯಾಧೀಶರ ತೀರ್ಪಿಗೆ ವಿರುದ್ಧವಾದ ಸಂಪೂರ್ಣ ಭಿನ್ನ ಅಭಿಪ್ರಾಯ ಹೊಂದಿರುವ ತೀರ್ಪು ಬರೆದರು.ವಿವಾದ ಏನು?:
ಸರ್ಕಾರ ಸಮುದಾಯದ ಒಳಿತಿನ ಉದ್ದೇಶದಲ್ಲಿ ಯಾವುದೇ ಖಾಸಗಿ ಆಸ್ತಿ ವಶಪಡಿಸಿಕೊಳ್ಳಲು ಉದ್ದೇಶಿಸಿದರೆ ಮೊದಲಿಗೆ, ‘ಭೌತಿಕ ಸಂಪನ್ಮೂಲದ ಸ್ವರೂಪ, ಅದರ ಗುಣಲಕ್ಷಣ, ಅದನ್ನು ಸಮುದಾಯಕ್ಕೆ ಬಳಸಿದರೆ ಅದರಿಂದ ಆಗುವ ಪರಿಣಾಮಗಳು, ಸಂಪನ್ಮೂಲದ ಕೊರತೆ ಪ್ರಮಾಣ, ಖಾಸಗಿ ವ್ಯಕ್ತಿಗಳ ಬಳಿಯೇ ಆ ಭೌತಿಕ ಆಸ್ತಿ ಉಳಿದರೆ ಅದರಿಂದ ಆಗುವ ಪರಿಣಾಮಗಳನ್ನು’ ಪರಿಗಣಿಸಬೇಕು. ಈ ಎಲ್ಲಾ ಷರತ್ತುಗಳನ್ನು ಪೂರ್ಣಗೊಳಿಸಿದರೆ ಮಾತ್ರವೇ ಸರ್ಕಾರವು ಸಂವಿಧಾನದ 39 ಬಿ ಪರಿಚ್ಛೇದ ಅನ್ವಯ ಅಂಥ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು. ಈ ಷರತ್ತುಗಳನ್ನು ಪಾಲಿಸದ ಆಸ್ತಿ ಸಮುದಾಯದ ಭೌತಿಕ ಸಂಪನ್ಮೂಲ ಎಂದು ಪರಿಗಣಿಸಲಾಗದು ಮತ್ತು ಅಂಥ ಆಸ್ತಿಗಳನ್ನು ಸರ್ಕಾರ ವಶಪಡಿಸಿಕೊಳ್ಳಲಾಗದು’ ಎಂದು ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.1977ರಲ್ಲಿ ಇದೇ ವಿಷಯದ ಸಂಬಂಧ 7 ಸದಸ್ಯರ ಸಾಂವಿಧಾನಿಕ ಪೀಠ 4:3ರ ಬಹುಮತದಲ್ಲಿ, ಎಲ್ಲಾ ಖಾಸಗಿ ಆಸ್ತಿಗಳನ್ನು ಸರ್ಕಾರ ಸಮುದಾಯ ಭೌತಿಕ ಸಂಪನ್ಮೂಲದ ಹೆಸರಲ್ಲಿ ವಶಪಡಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಇದಕ್ಕೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾ.ವಿ.ಆರ್.ಕೃಷ್ಣ ಅಯ್ಯರ್ ಅವರು, ಸಂವಿಧಾನದ 39 (ಬಿ) ಪರಿಚ್ಛೇದದ ವ್ಯಾಪ್ತಿಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ತಿ ಒಳಪಡುತ್ತದೆ ಎಂದು ಭಿನ್ನ ತೀರ್ಪು ನೀಡಿದ್ದರು.