ಜ್ಯೋತಿ ಪಾಕ್‌ ಪ್ರವಾಸಕ್ಕೆ ದುಬೈ ಕಂಪನಿ ಪ್ರಾಯೋಜಕತ್ವ

KannadaprabhaNewsNetwork | Updated : May 23 2025, 05:51 AM IST
ಪಾಕ್‌ ಪರ ಗೂಢಚರ್ಯೆ ನಡಸುತ್ತಿದ್ದ ​​ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ತನ್ನ ಪ್ರವಾಸಕ್ಕೆ ಹಲವಾರು ಪ್ರಾಯೋಜಕತ್ವ ಪಡೆಯುತ್ತಿದ್ದಳು. ಪಾಕಿಸ್ತಾನಕ್ಕೆ ತೆರಳಲು ಆಕೆಗೆ ಯುಎಇ ಮೂಲದ ವೀಗೋ ಸಂಸ್ಥೆಯು ಪ್ರಾಯೋಜಕತ್ವ ನೀಡಿತ್ತು ಎಂದು ಹರ್ಯಾಣ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
Follow Us

ಹಿಸಾರ್‌ (ಹರ್ಯಾಣ): ಪಾಕ್‌ ಪರ ಗೂಢಚರ್ಯೆ ನಡಸುತ್ತಿದ್ದ ​​ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ತನ್ನ ಪ್ರವಾಸಕ್ಕೆ ಹಲವಾರು ಪ್ರಾಯೋಜಕತ್ವ ಪಡೆಯುತ್ತಿದ್ದಳು. ಪಾಕಿಸ್ತಾನಕ್ಕೆ ತೆರಳಲು ಆಕೆಗೆ ಯುಎಇ ಮೂಲದ ವೀಗೋ ಸಂಸ್ಥೆಯು ಪ್ರಾಯೋಜಕತ್ವ ನೀಡಿತ್ತು ಎಂದು ಹರ್ಯಾಣ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ‘ಟ್ರಾವೆಲ್ ವಿತ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಜ್ಯೋತಿ, ವೇದಿಕೆಯಲ್ಲಿ ಸುಮಾರು 4 ಲಕ್ಷ ಚಂದಾದಾರರನ್ನು ಹೊಂದಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ ಸಹ ಅವರು 1,32,000 ಅನುಯಾಯಿಗಳನ್ನು ಹೊಂದಿದ್ದಾಳೆ.

4 ದಿನ ಕಸ್ಟಡಿ ವಿಸ್ತರಣೆ:

ಈ ನಡುವೆ, ಹರ್ಯಾಣ ಪೊಲೀಸರ ವಶದಲ್ಲಿರುವ ಜ್ಯೋತಿ ಕಸ್ಟಡಿಯನ್ನು ಕೋರ್ಟು ಇನ್ನೂ 4 ದಿನ ವಿಸ್ತರಿಸಿದೆ.

ಪಾಕ್‌ ಪರ ಗೂಢಚರ್ಯೆ: ವಾರಾಣಸಿಯಲ್ಲಿ ಒಬ್ಬನ ಸೆರೆ

ವಾರಾಣಸಿ: ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ವಾರಣಾಸಿಯ ತುಫೈಲ್‌ರ ಮಕ್ಸೂದ್ ಆಲಂ ಎಂಬಾತನನ್ನು ಯುಪಿ ಎಟಿಎಸ್ ಬಂಧಿಸಿದೆ.ಭಾರತದ ಆಂತರಿಕ ಭದ್ರತೆಯ ಬಗ್ಗೆ ಆತ ಪಾಕಿಸ್ತಾನದೊಂದಿಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ. ಈ ವಿಷಯ ಗುಪ್ತದಳದ ಗಮನಕ್ಕೆ ಬಂದು ಎಟಿಎಸ್‌ ವಾರಾಣಸಿ ಘಟಕಕ್ಕೆ ಮಾಹಿತಿ ನೀಡಿತು. ಆಗ ಆತನನ್ನು ಬಂಧಿಸಲಾಗಿದೆ.

ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆ ತೆಹ್ರೀಕ್-ಇ-ಲಬ್ಬೈಕ್‌ನ ನಾಯಕ ಮೌಲಾನಾ ಶಾ ರಿಜ್ವಿಯ ವೀಡಿಯೊಗಳನ್ನು ಈತ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳುತ್ತಿದ್ದ. ಅಲ್ಲದೆ, ಬಾಬ್ರಿ ಮಸೀದಿ ಧ್ವಂಸದ ಸೇಡು ಮತ್ತು ಭಾರತದಲ್ಲಿ ಶರಿಯತ್ ಅನ್ನು ಜಾರಿಗೆ ತರುವ ‘ಘಜ್ವಾ-ಇ-ಹಿಂದ್‌’ಗೆ ಕರೆ ನೀಡುವ ಸಂದೇಶಗಳನ್ನೂ ಆತ ಹಂಚಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೇಡಿಗೆ ಸೇಡು: ಪಾಕ್‌ನಿಂದ ಭಾರತ ದೂತಾವಾಸ ಸಿಬ್ಬಂದಿ ವಜಾ

ಇಸ್ಲಾಮಾಬಾದ್: ಭಾರತವು ಪಾಕ್‌ ದೂತಾವಾಸದ ಒಬ್ಬ ಸಿಬ್ಬಂದಿಯನ್ನು ದೇಶದಿಂದ ಹೊರಹೋಗಲು ಆದೇಶಿಸಿದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಗುರುವಾರ ಭಾರತೀಯ ಹೈಕಮಿಷನ್ ಸಿಬ್ಬಂದಿಯೊಬ್ಬರನ್ನು ಹೊರಹಾಕಿರುವುದಾಗಿ ಘೋಷಿಸಿದೆ.‘ಪಾಕಿಸ್ತಾನ ಸರ್ಕಾರವು ಇಸ್ಲಾಮಾಬಾದ್‌ನ ಭಾರತದ ಹೈಕಮಿಷನ್‌ನ ಸಿಬ್ಬಂದಿಯನ್ನು ಅವರ ವಿಶೇಷ ಸ್ಥಾನಮಾನಕ್ಕೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಅವರ ಸ್ಥಾನದಿಂದ ವಜಾಗೊಳಿಸಿದೆ. ಸಂಬಂಧಪಟ್ಟ ಅಧಿಕಾರಿಯನ್ನು 24 ಗಂಟೆಗಳ ಒಳಗೆ ಪಾಕಿಸ್ತಾನ ತೊರೆಯುವಂತೆ ನಿರ್ದೇಶಿಸಲಾಗಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿದೆ.

ಗೂಢಚರ್ಯೆಯಲ್ಲಿ ತೊಡಗಿರುವ ಆರೋಪದ ಮೇಲೆ ದಿಲ್ಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ ಅಧಿಕಾರಿಯೊಬ್ಬರನ್ನು ಬುಧವಾರ ಭಾರತ ಹೊರಹಾಕಿತ್ತು. ಅವರಿಗೆ ಭಾರತ ತೊರೆಯಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿತ್ತು.===

ಮೇ 13ರಂದು ಬೇಹುಗಾರಿಕೆಯಲ್ಲಿ ತೊಡಗಿರುವ ಆರೋಪದಲ್ಲಿ ಭಾರತ ಮತ್ತೊಬ್ಬ ಪಾಕಿಸ್ತಾನಿ ಅಧಿಕಾರಿಯನ್ನು ಹೊರಹಾಕಿತ್ತು. ಭಾರತದ ಕ್ರಮದ ನಂತರ ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿದ್ದ ಸಿಬ್ಬಂದಿಯನ್ನು ಹೊರಹಾಕಿದೆ.

Read more Articles on