ಹಿಂಡನ್‌ಬರ್ಗ್‌: ಆ.22ಕ್ಕೆ ಕಾಂಗ್ರೆಸ್‌ ದೇಶವ್ಯಾಪಿ ಪ್ರತಿಭಟನೆ

KannadaprabhaNewsNetwork | Published : Aug 14, 2024 12:55 AM

ಸಾರಾಂಶ

ಉದ್ಯಮಿ ಗೌತಮ್‌ ಅದಾನಿ ಹಾಗೂ ಸೆಬಿ ಅಧ್ಯಕ್ಷೆ ಮಾಧವಿ ಬುಚ್‌ ಮೇಲೆ ಅಕ್ರಮಗಳ ಆರೋಪ ಹೊರಿಸಿರುವ ಹಿಂಡನ್‌ಬರ್ಗ್‌ ವರದಿ ಹಿನ್ನೆಲೆಯಲ್ಲಿ ಆ.22ರಂದು ದೇಶವ್ಯಾಪಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುವುದಾಗಿ ಮಂಗಳವಾರ ಘೋಷಿಸಿದೆ.

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಹಾಗೂ ಸೆಬಿ ಅಧ್ಯಕ್ಷೆ ಮಾಧವಿ ಬುಚ್‌ ಮೇಲೆ ಅಕ್ರಮಗಳ ಆರೋಪ ಹೊರಿಸಿರುವ ಹಿಂಡನ್‌ಬರ್ಗ್‌ ವರದಿ ಹಿನ್ನೆಲೆಯಲ್ಲಿ ಆ.22ರಂದು ದೇಶವ್ಯಾಪಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುವುದಾಗಿ ಮಂಗಳವಾರ ಘೋಷಿಸಿದೆ.

ಅದಾನಿ ಸಮೂಹದ ಬೇನಾಮಿ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಆರೋಪ ಹೊತ್ತಿರುವ ಸೆಬಿ ಅಧ್ಯಕ್ಷೆ ಮಾಧವಿ ಬುಚ್‌ ರಾಜೀನಾಮೆಗೆ ಹಾಗೂ ಈ ಪ್ರಕರಣದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಆಗ್ರಹಿಸಿ ಈ ಪ್ರತಿಭಟನೆ ನಡೆಯಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಇದೇ ವೇಳೆ, ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಸೆಬಿ ಮತ್ತು ಅದಾನಿ ಸಮೂಹದ ನಡುವಿನ ಸಂಬಂಧದ ಬಗ್ಗೆ ಸಂಪೂರ್ಣ ತನಿಖೆಯ ನಡೆಯಬೇಕು. ಮೋದಿ ಸರ್ಕಾರ ತಕ್ಷಣವೇ ಸೆಬಿ ಅಧ್ಯಕ್ಷರ ರಾಜೀನಾಮೆಗೆ ಪಡೆಯಬೇಕು. ಹಗರಣದ ತನಿಖೆಗಾಗಿ ಜೆಪಿಸಿಯನ್ನು ರಚಿಸಬೇಕು’ ಎಂದು ಆಗ್ರಹಿಸಿದ್ದಾರೆ.

==

ಜಾತಿ ಗಣತಿಗೆ ಕಾಂಗ್ರೆಸ್‌ ಮತ್ತೆ ಆಗ್ರಹ

ನವದೆಹಲಿ: ಕೇಂದ್ರ ಸರ್ಕಾರ ಜಾತಿ ಗಣತಿಯನ್ನು ನಡೆಸಬೇಕೆಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸುವ ನಿರ್ಣಯವನ್ನು ಮಂಗಳವಾರ ವಿವಿಧ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು ಹಾಗೂ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಸಮಾನತೆ ದೂರ ಆಗಬೇಕೆಂದರೆ ಜಾತಿ ಗಣತಿ ಅಗತ್ಯ ಎಂದು ಸಭೆ ತೀರ್ಮಾನಿಸಿತು.--

ಬಾಂಗ್ಲಾ ಹಿಂದೂಗಳ ಪರ ನಿರ್ಣಯನವದೆಹಲಿ: ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳ ಮೇಲೆ ಉದ್ದೇಶಿತ ದಾಳಿಗಳನ್ನು ನಿಲ್ಲಿಸಲು ಮತ್ತು ಹಿಂದೂಗಳು ಭದ್ರತೆ, ಘನತೆ ಮತ್ತು ಸಾಮರಸ್ಯದ ಜೀವನವನ್ನು ನಡೆಸಲು ಅನುವು ಮಾಡಿಕೊಡಬೇಕು ಎಂದು ಬಾಂಗ್ಲಾ ಸರ್ಕಾರಕ್ಕೆ ಆಗ್ರಹಿಸುವ ನಿರ್ಣಯವನ್ನು ಕಾಂಗ್ರೆಸ್‌ ಸ್ವೀಕರಿಸಿತು.

Share this article