ಹಿಂದೂಪುರದಲ್ಲಿ ಮಾಜಿ ಸಂಸದರಿಗೆ ಕರ್ನಾಟಕದ ಜೆ. ಶಾಂತಾ ಸವಾಲು

KannadaprabhaNewsNetwork | Updated : Apr 15 2024, 05:55 AM IST

ಸಾರಾಂಶ

ಆಂಧ್ರಪ್ರದೇಶದ ಹಿಂದೂಪುರದಲ್ಲಿ ಈ ಬಾರಿ ಕನ್ನಡತಿಯೇ ಆಗಿರುವ ಬಳ್ಳಾರಿಯ ಮಾಜಿ ಸಂಸದೆ ಜೆ. ಶಾಂತಾ ಜಗನ್‌ ನೇತೃತ್ವದ ವೈಎಸ್‌ಆರ್‌ಸಿಪಿ ಪಕ್ಷದಿಂದ ಸ್ಪರ್ಧಿಸಿದ್ದಾರೆ

ಕರ್ನಾಟಕದ ಜೊತೆಗೆ ಗಡಿ ಹೊಂದಿಕೊಂಡು ಹೆಚ್ಚಿನ ಪಾಲು ಕನ್ನಡಿಗರೇ ಇರುವ ಕ್ಷೇತ್ರವಾದ ಆಂಧ್ರಪ್ರದೇಶದ ಹಿಂದೂಪುರದಲ್ಲಿ ಈ ಬಾರಿ ಕನ್ನಡತಿಯೇ ಆಗಿರುವ ಬಳ್ಳಾರಿಯ ಮಾಜಿ ಸಂಸದೆ ಜೆ. ಶಾಂತಾ ಜಗನ್‌ ನೇತೃತ್ವದ ವೈಎಸ್‌ಆರ್‌ಸಿಪಿ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಸ್ಥಳೀಯರನ್ನು ಆಪ್ತವಾಗಿ ಕನ್ನಡ ಭಾಷೆಯಲ್ಲೇ ಪ್ರಚಾರ ಮಾಡುವ ಮೂಲಕ ಮತ ಸೆಳೆಯುತ್ತಿರುವ ಶಾಂತಾ, ಜಗನ್ಮೋಹನ ರೆಡ್ಡಿ ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳನ್ನು ಮತದಾರರಿಗೆ ಮನದಟ್ಟು ಮಾಡಿಕೊಡುತ್ತಿದ್ದಾರೆ. ಈ ಮೂಲಕ ಗೆಲ್ಲುವ ನೆಚ್ಚಿನ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ಮೈತ್ರಿಯಲ್ಲಿ ಒಡಕು: ಮತ್ತೊಂದೆಡೆ ಬಿಜೆಪಿ-ಟಿಡಿಪಿ ಮತ್ತು ಜನಸೇನಾ ಪಕ್ಷಗಳು ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಟಿಡಿಪಿಯಿಂದ ಮಾಜಿ ಸಂಸದರಾಗಿರುವ ಪಾರ್ಥಸಾರಥಿ ಅವರನ್ನು ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗಿದೆ. ಆದರೆ ತಮಗೆ ಬಿಜೆಪಿಯಿಂದ ಟಿಕೆಟ್‌ ಸಿಗುವ ವಿಶ್ವಾಸದಲ್ಲಿದ್ದ ಸ್ವಾಮಿ ಪರಿಪೂರ್ಣಾನಂದ ಮುನಿಸಿಕೊಂಡು ಸ್ವತಂತ್ರ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಕ್ಷೇತ್ರದಲ್ಲಿ ಬಹಳ ಪ್ರಭಾವ ಹೊಂದಿರುವ ಸ್ವಾಮೀಜಿ ಯಾರ ಮತಗಳನ್ನು ವಿಭಜಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ನಿಂದಲೂ ತಯಾರಿ: ಕಾಂಗ್ರೆಸ್‌ ಸಹ ಕ್ಷೇತ್ರದಲ್ಲಿ ಇದಕ್ಕೂ ಮೊದಲು ಎರಡು ಬಾರಿ ಸಂಸದರಾಗಿದ್ದ ಜಿ ನಿಜಾಮುದ್ದೀನ್‌ ಅವರನ್ನು ಕಣಕ್ಕಿಳಿಸಿ ಅಲ್ಪಸಂಖ್ಯಾತರನ್ನು ಓಲೈಸುವ ಕಾರ್ಯದಲ್ಲಿ ತೊಡಗಿದೆ. ಒಟ್ಟಿನಲ್ಲಿ ಕ್ಷೇತ್ರವು ಈ ಬಾರಿ ಮೂವರು ಮಾಜಿ ಸಂಸದರ ಹಣಾಹಣಿಗೆ ಸಜ್ಜಾಗಿದ್ದು, ಯಾರಿಗೆ ವಿಜಯಮಾಲೆ ಒಲಿಯಲಿದೆ ಎಂಬುದು ಕುತೂಹಲವಾಗಿದೆ.

ಸ್ಟಾರ್‌ ಕ್ಷೇತ್ರ: ಹಿಂದೂಪುರ

ರಾಜ್ಯ: ಆಂಧ್ರಪ್ರದೇಶಪ್ರಮುಖ ಅಭ್ಯರ್ಥಿಗಳು:

ವೈಎಸ್‌ಆರ್‌ಸಿಪಿ: ಜೆ ಶಾಂತಾ

ಟಿಡಿಪಿ: ಬಿಕೆ ಪಾರ್ಥಸಾರಥಿ

ಕಾಂಗ್ರೆಸ್‌: ನಿಜಾಮುದ್ದೀನ್‌

ಪಕ್ಷೇತರ: ಸ್ವಾಮಿ ಪರಿಪೂರ್ಣಾನಂದ2019ರ ಚುನಾವಣೆ ಫಲಿತಾಂಶ:

ಗೆಲುವು: ವೈಎಸ್‌ಆರ್‌ಸಿಪಿ- ಕುರುವ ಗೋರಂಟ್ಲ ಮಾಧವ

ಸೋಲು: ಟಿಡಿಪಿ- ಕ್ರಿಷ್ಟಪ್ಪ ನಿಮ್ಮಲಮತದಾನದ ದಿನ: ಮೇ.13

ಒಟ್ಟು ವಿಧಾನಸಭಾ ಕ್ಷೇತ್ರಗಳು: 7

Share this article