ಅಯೋಧ್ಯೆ: ಶ್ರೀರಾಮಜನ್ಮಭೂಮಿ ಟ್ರಸ್ಟ್ ಆಹ್ವಾನದ ಮೇರೆಗೆ ಕರ್ನಾಟಕದ ಇಡಗುಂಜಿ ಗಣೇಶ ಭಟ್ ಕೆತ್ತಿದ್ದ ಬಾಲರಾಮನ ಮೂರ್ತಿಯ ಫೋಟೋ ಬಿಡುಗಡೆ ಆಗಿದೆ.
ಇದರೊಂದಿಗೆ ಮೂರ್ತಿ ಕೆತ್ತಲು ಆಯ್ಕೆಯಾಗಿದ್ದ ಮೂವರೂ ಶಿಲ್ಪಿಗಳ ವಿಗ್ರಹಗಳು ಅನಾವರಣಗೊಂಡಂತೆ ಆಗಿದೆ.
ಹೆಗ್ಗಡದೇವನಕೋಟೆ ಬಳಿಯ ಹೊಲವೊಂದರಲ್ಲಿ ಲಭ್ಯವಾಗಿದ್ದ ಕೃಷ್ಣಶಿಲೆಯನ್ನು ಬಳಸಿ ಗಣೇಶ್ ಭಟ್ ಅವರ ಸುಂದರ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ್ದಾರೆ.
ಈ ಮೂರ್ತಿ ಕೂಡಾ, ಈಗಾಗಲೇ ಗರ್ಭಗೃಹದಲ್ಲಿ ಇರಿಸಿರುವ ಅರುಣ್ ಯೋಗಿರಾಜ್ ಕೆತ್ತಿರುವ ಮೂರ್ತಿಯಂತೆಯೇ, ದಶಾವತಾರ, ಕಮಲ, ಕಿರೀಟ ಮತ್ತು ಮುಖದಲ್ಲಿ ಮಗುವಿನ ಮುಗ್ಧ ಕಳೆಯನ್ನು ಹೊಂದಿದೆ.
ಒಂದು ದಿನದ ಹಿಂದಷ್ಟೇ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ನಿರ್ಮಿಸಿದ್ದ ಬಾಲರಾಮನ ಚಿತ್ರ ಬಿಡುಗಡೆ ಆಗಿತ್ತು.
ಪಾಂಡೆ ಮತ್ತು ಗಣೇಶ್ ಭಟ್ ಕೆತ್ತಿದ ಮೂರ್ತಿಗಳನ್ನು ಮಂದಿರದಲ್ಲಿ ಭಕ್ತಿ, ಗೌರವಪೂರ್ವಕವಾಗಿ ಇಡಲಾಗುವುದು ಎಂದು ಈಗಾಗಲೇ ದೇಗುಲದ ನಿರ್ಮಾಣ ಮಂಡಳಿ ಹೇಳಿದೆ.