ಗುತ್ತಿಗೆ, ಖರೀದಿಯಲ್ಲಿ ಅಲ್ಪಸಂಖ್ಯಾತ ಮೀಸಲು ಬಳಿಕ ರಾಜ್ಯ ಸರ್ಕಾರ ಮತ್ತೊಂದು ನಿರ್ಧಾರ

KannadaprabhaNewsNetwork | Updated : Jun 20 2025, 05:20 AM IST

 ರಾಜ್ಯ ಸರ್ಕಾರ ಇದೀಗ ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಸತಿ ಇಲಾಖೆಯಡಿ ಜಾರಿಗೊಳಿಸಿರುವ ವಿವಿಧ ವಸತಿ ಯೋಜನೆಗಳಡಿ ವಸತಿ ಹಂಚಿಕೆಗೆ ನಿಗದಿಪಡಿಸಿರುವ ಅಲ್ಪಸಂಖ್ಯಾತರ ಮೀಸಲು ಪ್ರಮಾಣವನ್ನು ಶೇ.10ರಿಂದ ಶೇ.15ಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

 ಬೆಂಗಳೂರು :  ರಾಜ್ಯದ ಅಲ್ಪಸಂಖ್ಯಾತರಿಗೆ ಗುತ್ತಿಗೆಗಳಲ್ಲಿ ಹಾಗೂ ಖರೀದಿಯಲ್ಲಿ ಮೀಸಲಾತಿ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಇದೀಗ ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಸತಿ ಇಲಾಖೆಯಡಿ ಜಾರಿಗೊಳಿಸಿರುವ ವಿವಿಧ ವಸತಿ ಯೋಜನೆಗಳಡಿ ವಸತಿ ಹಂಚಿಕೆಗೆ ನಿಗದಿಪಡಿಸಿರುವ ಅಲ್ಪಸಂಖ್ಯಾತರ ಮೀಸಲು ಪ್ರಮಾಣವನ್ನು ಶೇ.10ರಿಂದ ಶೇ.15ಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನು ಮುಂದೆ ವಸತಿ ಹಂಚಿಕೆ ವೇಳೆ ಮುಸ್ಲಿಮರು, ಕ್ರೈಸ್ತರು, ಜೈನ ಹಾಗೂ ಇತರೆ ಅಲ್ಪಸಂಖ್ಯಾತರಿಗೆ ಇದ್ದ ಮೀಸಲಾತಿ ಶೇ.5 ರಷ್ಟು ಹೆಚ್ಚಳ ಆಗಲಿದೆ.

ಕೇಂದ್ರ ಸರ್ಕಾರದಿಂದಲೇ ಸೂಚನೆ-ಪಾಟೀಲ್:

ಸಂಪುಟ ಸಭೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌, ಪರಿಶಿಷ್ಟ ಜಾತಿ, ಪಂಗಡದವರಿಗೆ ಸೀಮಿತವಾದ ವಸತಿ ಯೋಜನೆ ಹೊರತುಪಡಿಸಿ ಉಳಿದ ಯೋಜನೆಗಳಿಗೆ ಇದು ಅನ್ವಯವಾಗಲಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಗಿರುವ ವಸತಿ ಸೌಲಭ್ಯದ ಕೊರತೆ ಗಮನಿಸಿ ಕೇಂದ್ರ ಸರ್ಕಾರವೇ ಸೂಚನೆ ನೀಡಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಕೂಡ ಅಲ್ಪಸಂಖ್ಯಾತ ಸಮುದಾಯದವರಲ್ಲಿ ವಸತಿ ಹೀನರ ಸಂಖ್ಯೆ ಹೆಚ್ಚಾಗಿರುವುದನ್ನು ಗಮನಿಸಿದೆ. ಸಾಚಾರ್‌ ಕಮಿಟಿ ವರದಿಯಲ್ಲಿನ ಅಂಶಗಳನ್ನು ಆಧರಿಸಿ ಕೇಂದ್ರ ಸರ್ಕಾರದವರು ಆ ರೀತಿಯ ಸೂಚನೆಗಳನ್ನು ನೀಡುತ್ತಿದ್ದಾರೆ. ಎಲ್ಲಸೂಚನೆಗಳು, ವಸ್ತುಸ್ಥಿತಿ ಜತೆಗೆ ಸಾಮಾಜಿಕ ನ್ಯಾಯ ಪಾಲನೆ ಗಮನದಲ್ಲಿಟ್ಟುಕೊಂಡು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹಲವು ವರದಿಗಳೂ ಲಭ್ಯವಿವೆ:

ಪರಿಶಿಷ್ಟ ಜಾತಿ, ಪಂಗಡದವರು, ಸಾಮಾನ್ಯ ವರ್ಗ, ಅಲ್ಪಸಂಖ್ಯಾತ ಸಮುದಾಯದಲ್ಲಿನ ವಸತಿಹೀನರ ವಿವರ ಲಭ್ಯವಿದೆ. ಹಲವು ಅಧ್ಯಯನ ವರದಿಗಳೂ ಇವೆ. ಅಲ್ಪಸಂಖ್ಯಾತರಲ್ಲಿನ ವಸತಿಹೀನರು ಹಾಗೂ ಸಾಮಾಜಿಕ ನ್ಯಾಯ ಗಮನದಲ್ಲಿ ಟ್ಟುಕೊಂಡು ಹಂಚಿಕೆ ಮೀಸಲು ಪ್ರಮಾಣ ಹೆಚ್ಚಿಸಲಾಗಿದೆ ಎಂದು ಎಚ್.ಕೆ.ಪಾಟೀಲ್‌ ಹೇಳಿದರು.

ಹಂಚಿಕೆ ಮೀಸಲು ಪ್ರಮಾಣ ಹೆಚ್ಚಳಕ್ಕೆ ಯಾವುದೇ ನಿಯಮಾವಳಿ, ಕಾನೂನು ರೂಪಿಸುವ ಅಗತ್ಯವಿಲ್ಲ. ಈ ವಿಚಾರದಲ್ಲಿ ರಾಜಕೀಯ ತರಲು ಬಯಸುವವರ ಟೀಕೆಗಳಿಗೆ ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ವಸತಿಗಳು ಖಾಲಿಯಿವೆ ಹೀಗಾಗಿ ಬಿಲ್‌-ಡಿಕೆಶಿ:

ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಸತಿ ಇಲಾಖೆಯಿಂದ ನಗರ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ವಸತಿಗಳು ಹೆಚ್ಚಾಗಿ ಖಾಲಿ ಇದ್ದು, ಅಲ್ಪಸಂಖ್ಯಾತರು ಈ ಮನೆಗಳಿಗೆ ಹೋಗಲು ಮುಂದಾಗಿದ್ದಾರೆ. ಹೀಗಾಗಿ ಅವರಿಗೆ ನೀಡಲಾಗಿದ್ದ ವಸತಿ ಹಂಚಿಕೆ ಮೀಸಲಾತಿಯನ್ನು ಶೇ. 10 ರಿಂದ 15 ಕ್ಕೆ ಏರಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು.ಕೆಲವು ನಗರ ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಶೇ. 20-30 ರಷ್ಟು ಬಡವರು ಇದ್ದಾರೆ. ಹೀಗಾಗಿ ಅವರಿಗೆ ಮೀಸಲಾತಿ ಹೆಚ್ಚಳ ಮಾಡಲು ಪ್ರಸ್ತಾವನೆ ಬಂದಿದೆ. ಈ ಮನೆಗಳಿಗೆ ಹಣ ಪಾವತಿ ಮಾಡಬೇಕು. ಇತರರು ಇದಕ್ಕೆ ಹೆಚ್ಚಿನ ಆಸಕ್ತಿ ತೋರಿಲ್ಲ. ಬೆಂಗಳೂರಿನಲ್ಲೂ ಅನೇಕ ವಸತಿ ಕಟ್ಟಡಗಳಲ್ಲಿ ಮನೆಗಳು ಖಾಲಿ ಇವೆ. ಮಂಡ್ಯದಲ್ಲೂ ಖಾಲಿ ಬಿದ್ದಿವೆ. ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಸಹಾಯಧನ ತೀರಾ ಕಡಿಮೆ ಇದೆ. ಈ ಮನೆಗಳನ್ನು ಕಟ್ಟಿದ ನಂತರ ಖಾಲಿ ಬಿದ್ದಿವೆ. ಇವುಗಳನ್ನು ಯಾರಿಗೆ ನೀಡಬೇಕು? ಎಂದು ಪ್ರಶ್ನಿಸಿದರು.

ಇದು ಓಲೈಕೆ ರಾಜಕಾರಣ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ಯಾರು ಏನಾದರೂ ಹೇಳಿಕೊಳ್ಳಲಿ. ನಾವು ಬಡವರ್ಗದ ಜನರಿಗೆ ನೆರವು ನೀಡುತ್ತಿದ್ದೇವೆ. ಈ ಮನೆಗಳಿಗೆ ಯಾರೂ ಅರ್ಜಿ ಹಾಕದಿದ್ದಾಗ ನಾವು ಏನು ಮಾಡಬೇಕು? ಮನೆಯನ್ನು ಹಾಗೇ ಖಾಲಿ ಬಿಡಬೇಕೇ? ಉಳಿದ ವಿಚಾರವನ್ನು ಕಾನೂನು ಸಚಿವರು ವಿವರಿಸಲಿದ್ದಾರೆ ಎಂದಷ್ಟೇ ಉಪಮುಖ್ಯಮಂತ್ರಿ ಹೇಳಿದರು. 

ಹೊಸ ಯೋಜನೆಗಳಿಗಷ್ಟೇ ಅನ್ವಯ?ವಸತಿ ಯೋಜನೆಗಳಲ್ಲಿ ಈಗಾಗಲೇ ಹಂಚಿಕೆಗೆ ಅಧಿಸೂಚನೆ ಹೊರಡಿಸಿರುವ ಯೋಜನೆಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಹೊಸದಾಗಿ ಅಧಿಸೂಚನೆ ಹೊರಡಿಸುವ ಯೋಜನೆಗಳಿಗೆ ಅನ್ವಯವಾಗಲಿದೆ. ಬೆಂಗಳೂರಿನ 1 ಲಕ್ಷ ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ ಮುಂದಿನ ಹಂತದ ಅಧಿಸೂಚನೆಗೆ ಅನ್ವಯಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಯಾರ ಮೀಸಲಾತಿ ಕಡಿಮೆಯಾಗಲಿದೆ?

ಅಲ್ಪಸಂಖ್ಯಾತರಿಗೆ ಹೆಚ್ಚಳ ಮಾಡಿರುವ ಮೀಸಲಾತಿಯನ್ನು ಯಾವ ವರ್ಗದಿಂದ ತೆಗೆದು ನೀಡಲಾಗಿದೆ ಎಂಬ ಬಗ್ಗೆ ಸಚಿವರು ಸ್ಪಷ್ಟನೆ ನೀಡಿಲ್ಲ. ಉದಾ: ಮುಖ್ಯಮಂತ್ರಿಗಳ 1 ಲಕ್ಷ ವಸತಿ ಯೋಜನೆಯಲ್ಲಿ ಶೇ.50 ರಷ್ಟು ಮನೆ ಸಾಮಾನ್ಯ ವರ್ಗ, ಶೇ.30 ಎಸ್ಸಿ, ಶೇ.10 ಎಸ್ಟಿ ಹಾಗೂ ಶೇ.10 ರಷ್ಟು ಅಲ್ಪಸಂಖ್ಯಾತ ವರ್ಗಕ್ಕೆ ಮೀಸಲಿಡಲಾಗಿತ್ತು. ಈಗ ಅಲ್ಪಸಂಖ್ಯಾತರ ಮೀಸಲಾತಿ ಶೇ.15ಕ್ಕೆ ಹೆಚ್ಚಳ ಮಾಡಲಾಗಿದ್ದು, ಸಾಮಾನ್ಯ ವರ್ಗದ ಮೀಸಲಾತಿ ಶೇ.45ಕ್ಕೆ ಇಳಿಸಲಾಗಿದೆಯೇ ಅಥವಾ ಬೇರೆ ವರ್ಗದಿಂದ ಕಡಿತ ಮಾಡಿ ಮಾಡಲಾಗಿದೆಯೇ ಎಂಬ ಬಗ್ಗೆ ಗೊಂದಲಗಳು ಮುಂದುವರಿದಿವೆ.

ಜು.17ಕ್ಕೆ ನಂದಿಬೆಟ್ಟದಲ್ಲಿ ಸಂಪುಟ ಸಭೆ?

ನಂದಿಬೆಟ್ಟದಲ್ಲಿ ಜೂ.19 ರಂದು ನಿಗದಿಯಾಗಿದ್ದ ಸಂಪುಟ ಸಭೆಗೆ ಸ್ಥಳಾಂತರವಾದ ಬಗ್ಗೆ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್‌, ವಿವಿಧ ಇಲಾಖೆಗಳಿಂದ ಪ್ರಸ್ತಾವನೆಗಳಿಗೆ ಅಂಗೀಕಾರ ಬಂದಿರಲಿಲ್ಲ. ಹೀಗಾಗಿ ನಂದಿಬೆಟ್ಟದ ಸಂಪುಟ ಸಭೆ ಮುಂದೂಡಿದ್ದು, ಜು.16 ಅಥವಾ 17 ರಂದು ನಂದಿಬೆಟ್ಟದಲ್ಲಿ ಸಂಪುಟ ಸಭೆ ನಡೆಸಲಾಗುವುದು ಎಂದು ಹೇಳಿದರು.

ಜೂ.19 ರಂದು ನಂದಿಬೆಟ್ಟದಲ್ಲಿ ಕರೆದಿದ್ದ ಸಂಪುಟ ಸಭೆಯಲ್ಲಿನ ವಿಷಯಗಳು ಅಪೂರ್ಣ ಆಗಿತ್ತು. ಆ ಪ್ರದೇಶಕ್ಕೆ ಪರಿಣಾಮಕಾರಿಯಾಗಿ ಕೆಲಸಗಳು ಆಗಬೇಕು ಎಂಬ ಉದ್ದೇಶದಿಂದ ಮತ್ತು ಕೆಲವು ಸಚಿವರ ಕೋರಿಕೆಯ ಮೇರೆಗೆ ಮುಂದೂಡಲಾಯಿತು ಎಂದು ಹೇಳಿದರು.

ಏನಿದು ನಿರ್ಧಾರ?

1. ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಇಲಾಖೆ ಮೂಲಕ ವಿವಿಧ ಯೋಜನೆಗಳಡಿ ಸರ್ಕಾರ ಮನೆ ಹಂಚಿಕೆ ಮಾಡುತ್ತದೆ2. ಕೆಲವು ಯೋಜನೆಗಳಲ್ಲಿ ಸಾಮಾನ್ಯ ವರ್ಗಕ್ಕೆ 50%, ಎಸ್ಸಿಗೆ 30%, ಎಸ್ಟಿಗೆ 10%, ಅಲ್ಪಸಂಖ್ಯಾತರಿಗೆ 10% ಮೀಸಲಾತಿ ಲಭ್ಯವಿದೆ3.- ಇದೀಗ ಅಲ್ಪಸಂಖ್ಯಾತರ ಮೀಸಲು ಪ್ರಮಾಣವನ್ನು ಶೇ.5ರಷ್ಟು ಹೆಚ್ಚಳ ಮಾಡಿ ಶೇ.15ಕ್ಕೆ ನಿಗದಿಗೊಳಿಸಲು ಸಂಪುಟ ತೀರ್ಮಾನಿಸಿದೆ4. ಹೀಗಾಗಿ ಬೇರೆ ವರ್ಗಗಳಿಗೆ ಹಂಚಿಕೆಯಲ್ಲಿ ಕಡಿಮೆ ಪ್ರಾತಿನಿಧ್ಯ ಸಿಗುತ್ತದೆ. ಅಲ್ಪಸಂಖ್ಯಾತರಿಗೆ ಹೆಚ್ಚು ಮನೆಗಳು ದೊರಕಿದಂತಾಗುತ್ತವೆ5. ಅಲ್ಪಸಂಖ್ಯಾತರಲ್ಲಿ ವಸತಿಹೀನರು ಸಂಖ್ಯೆ ಹೆಚ್ಚಿರುವುದು, ಸರ್ಕಾರಿ ಮನೆಗಳು ಖಾಲಿ ಉಳಿದಿರುವ ಕಾರಣ ಈ ನಿರ್ಧಾರ ಎನ್ನುತ್ತೆ ಸರ್ಕಾರ

ಎಸ್ಸಿ, ಎಸ್ಟಿ ಯೋಜನೆಗಿಲ್ಲ

ಪರಿಶಿಷ್ಟ ಜಾತಿ, ಪಂಗಡದವರಿಗೆ ಸೀಮಿತವಾದ ವಸತಿ ಯೋಜನೆ ಹೊರತುಪಡಿಸಿ ಉಳಿದ ಯೋಜನೆಗಳಿಗೆ ಇದು ಅನ್ವಯವಾಗಲಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಗಿರುವ ವಸತಿ ಸೌಲಭ್ಯದ ಕೊರತೆ ಗಮನಿಸಿ ಕೇಂದ್ರ ಸರ್ಕಾರವೇ ಸೂಚನೆ ನೀಡಿದೆ. ಜಾರಿಗೆ ಹೊಸ ಕಾನೂನು ಅವಶ್ಯಕತೆ ಇಲ್ಲ. ಇದರಲ್ಲಿ ರಾಜಕೀಯ ತರಲು ಬಯಸಿದರೆ ಪ್ರತಿಕ್ರಿಯಿಸಿಲ್ಲ.- ಎಚ್‌.ಕೆ. ಪಾಟೀಲ್‌, ಕಾನೂನು ಸಚಿವ

ಅಲ್ಪಸಂಖ್ಯಾತರಲ್ಲಿ ಬಡವರಿದ್ದಾರೆವಸತಿ ಇಲಾಖೆಯಿಂದ ನಗರ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ಮನೆಗಳು ಹೆಚ್ಚಾಗಿ ಖಾಲಿ ಇವೆ. ಕೆಲವು ನಗರಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಶೇ. 20-30 ರಷ್ಟು ಬಡವರು ಇದ್ದಾರೆ. ಅವರಿಗೆ ಮೀಸಲಾತಿ ಹೆಚ್ಚಳ ಮಾಡಲು ಪ್ರಸ್ತಾವನೆ ಬಂದಿದೆ. ಹೀಗಾಗಿ ವಸತಿ ಹಂಚಿಕೆ ಮೀಸಲಾತಿಯನ್ನು ಶೇ. 10 ರಿಂದ 15 ಕ್ಕೆ ಏರಿಕೆ ಮಾಡುತ್ತಿದ್ದೇವೆ.

- ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ--ರಾಜ್ಯಾದ್ಯಂತ ಹೋರಾಟ

ಸಂವಿಧಾನದ ಪ್ರಕಾರ ಧರ್ಮಾಧಾರಿತವಾದ ಮೀಸಲು ನೀಡಲು ಸಾಧ್ಯವಿಲ್ಲ. ವಸತಿ ಯೋಜನೆಯಲ್ಲಿ ಮುಸ್ಲಿಮರಿಗೆ ಶೇ.5ರಷ್ಟು ಮೀಸಲು ಹೆಚ್ಚಿಸಿರುವುದರಿಂದ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗುತ್ತದೆ. ಮೀಸಲಾತಿ ಹೆಚ್ಚಳವನ್ನು ಹಿಂಪಡೆಯುವವರೆಗೂ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ.

- ಆರ್‌. ಅಶೋಕ್‌, ವಿಪಕ್ಷ ನಾಯಕ

ಇತರೆ ವರ್ಗಗಳಿಗೆ ಅನ್ಯಾಯ

ಯಾವುದರಲ್ಲೂ ಧರ್ಮಾಧಾರಿತ ಮೀಸಲಾತಿ ಕಲ್ಪಿಸುವುದು ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂಬುದನ್ನು ಸುಪ್ರೀಂಕೋರ್ಟ್‌ ಹೇಳಿದೆ. ಎಲ್ಲದರಲ್ಲೂ ಮುಸ್ಲಿಂರಿಗೆ ಮೀಸಲಾತಿ ನೀಡುತ್ತಿರುವುದರಿಂದ ಸಾಮಾನ್ಯ ವರ್ಗದ ಬಡವರಿಗೆ, ಎಸ್ಸಿ-ಎಸ್ಟಿ ಮತ್ತು ಒಬಿಸಿಗಳಿಗೆ ಬಹು ಅನ್ಯಾಯವಾಗುತ್ತದೆ.

ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

Read more Articles on