ದಕ್ಷಿಣದ ಭಾರತದ ಸಿನಿಮಾ ರಂಗದ ಪ್ರಸಿದ್ಧ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ ಗೋವಾದಲ್ಲಿ ಸೆರೆ

KannadaprabhaNewsNetwork |  
Published : Sep 20, 2024, 01:34 AM ISTUpdated : Sep 20, 2024, 05:34 AM IST
ಜಾನಿ ಮಾಸ್ಟರ್‌ | Kannada Prabha

ಸಾರಾಂಶ

ಕನ್ನಡ, ತೆಲುಗು ಸೇರಿದಂತೆ ದಕ್ಷಿಣದ ಭಾರತದ ವಿವಿಧ ಭಾಷೆಯ ಹಲವು ಸೂಪರ್‌ಹಿಟ್‌ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಖ್ಯಾತ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಅಲಿಯಾಸ್‌ ಶೇಖ್‌ ಜಾನಿ ಬಾಷಾರನ್ನು ಲೈಂಗಿಕ ಕಿರುಕುಳದ ಆರೋಪದ ಪ್ರಕರಣದಲ್ಲಿ ಗೋವಾದಲ್ಲಿ ಬಂಧಿಸಲಾಗಿದೆ.

ಹೈದರಾಬಾದ್‌: ಕನ್ನಡ, ತೆಲುಗು ಸೇರಿದಂತೆ ದಕ್ಷಿಣದ ಭಾರತದ ವಿವಿಧ ಭಾಷೆಯ ಹಲವು ಸೂಪರ್‌ಹಿಟ್‌ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಖ್ಯಾತ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಅಲಿಯಾಸ್‌ ಶೇಖ್‌ ಜಾನಿ ಬಾಷಾರನ್ನು ಲೈಂಗಿಕ ಕಿರುಕುಳದ ಆರೋಪದ ಪ್ರಕರಣದಲ್ಲಿ ಗೋವಾದಲ್ಲಿ ಬಂಧಿಸಲಾಗಿದೆ.

ಆಂಧ್ರಪ್ರದೇಶದ ಯುವತಿಯೊಬ್ಬಳು ಜಾನಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ ಜಾನಿ ಗೋವಾದಲ್ಲಿ ಇರುವುದನ್ನು ಪತ್ತೆ ಮಾಡಿದ ಪೊಲಿಸರು ಗುರುವಾರ ಬಂಧಿಸಿದ್ದಾರೆ. ಬಳಿಕ ಅವರನ್ನು ಗೋವಾದ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಟ್ರಾನ್ಸಿಟ್‌ ವಾರಂಟ್‌ ಪಡೆದು ಹೈದ್ರಾಬಾದ್‌ಗೆ ಕರೆ ತರಲಾಗಿದೆ.

5 ವರ್ಷ ಹಳೆ ಪ್ರಕರಣ:

2019ರಲ್ಲಿ ನನಗೆ 16 ವರ್ಷವಾಗಿತ್ತು. ಆ ವೇಳೆ ನಾನು ಜಾನಿ ಅವರ ಸಹಾಯಕಿಯಾಗಿ ಸೇರಿಕೊಂಡಿದ್ದೆ. ಅದೇ ಸಮಯದಲ್ಲಿ ಮುಂಬೈನಲ್ಲಿ ಶೂಟಿಂಗ್‌ಗೆ ತೆರಳಿದ್ದ ವೇಳೆ ಜಾನಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಜೊತೆಗೆ ಈ ವಿಷಯ ಯಾರಿಗಾದರೂ ತಿಳಿಸಿದರೆ ಕೆಲಸದಿಂದ ತೆಗೆದುಹಾಕುವೆ. ಜೊತೆಗೆ ಉದ್ಯಮದಲ್ಲಿ ಕೆಲಸ ಸಿಗದಂತೆ ಮಾಡುವೆ ಎಂದು ಬೆದರಿಕೆ ಹಾಕಿದರು.

ಬಳಿಕವೂ ಸತತವಾಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ ನನ್ನನ್ನು ದೈಹಿಕವಾಗಿ ಮತ್ತು ಮಾನಸಿವಕಾಗಿ ಹಿಂಸಿಸುತ್ತಿದ್ದರು. ಜೊತೆಗೆ ಶೂಟಿಂಗ್‌ ಸ್ಥಳದಲ್ಲಿ ಎಲ್ಲರ ಎದುರೇ ನನ್ನನ್ನು ಅಸಭ್ಯವಾಗಿ ಸ್ಪರ್ಶಿಸುತ್ತಿದ್ದರು ಎಂದು ಯುವತಿ ಸೆ.16ರಂದು ದೂರು ನೀಡಿದ್ದರು.

ಸೂಪರ್‌ಹಿಟ್ ನೃತ್ಯ:

ಕಿಚ್ಚ ಸುದೀಪ್‌ರ ವಿಕ್ರಾಂತ್‌ ರೋಣ ಚಿತ್ರದ ‘ರಾ ರಾ ರಕ್ಕಮ್ಮ’, ಪುನೀತ್‌ ರಾಜ್‌ ಕುಮಾರ್‌ ನಟನೆಯ ರಾಜಕುಮಾರ ಚಿತ್ರದ ‘ಅಪ್ಪು ಡ್ಯಾನ್ಸ್‌’ ನಟಸಾರ್ವಭೌಮ, ಯುವರತ್ನ; ಡಾಲಿ ಧನಂಜಯ ನಟನೆಯ ಹೆಡ್‌ಬುಷ್‌; ಡಾರ್ಲಿಂಗ್‌ ಕೃಷ್ಣ ಅವರ ಲಕ್ಕಿ ಮ್ಯಾನ್‌; ಅನೀಶ್‌ ನಟನೆಯ ಅಕಿರಾ; ನಿರೂಪ್‌ ಭಂಡಾರಿ ನಟನೆಯ ರಾಜರಥ ಹಾಗೂ ಉಪೇಂದ್ರ ಅವರ ಕಬ್ಜಾ ಸಿನಿಮಾಗಳ ಹಾಡುಗಳಿಗೆ ಜಾನಿ ಮಾಸ್ಟರ್‌ ನೃತ್ಯ ಸಂಯೋಜನೆ ಮಾಡಿದ್ದಾರೆ. ಇದಲ್ಲದೆ ತೆಲುಗಿನಲ್ಲಿ ಅಲ್ಲು ಅರ್ಜುನ್‌ ನಟನೆಯ ಬುಟ್ಟ ಬೊಮ್ಮ ಹಾಗೂ ಪುಷ್ಪ ಚಿತ್ರದ ಶ್ರೀವಲ್ಲಿ ಹಾಡುಗಳು ಸೇರಿದಂತೆ ಅನೇಕ ಹಾಡುಗಳಿಗೆ ಶೇಖ್‌ ಜಾನಿ ನೃತ್ಯ ಸಂಯೋಜನೆ ಮಾಡಿದ್ದಾರೆ.

ತನಿಖೆಗೆ ಸಮಿತಿ:

ಈ ಆರೋಪದ ಬಗ್ಗೆ ತನಿಖೆ ನಡೆಸಲು ತೆಲುಗು ಚಿತ್ರರಂಗದ ವಾಣಿಜ್ಯ ಮಂಡಳಿ ಮಂಗಳವಾರ ಸಮಿತಿ ರಚಿಸಿದ್ದು, ಮೂರು ತಿಂಗಳೊಳಗೆ ವರದಿ ನೀಡಬೇಕೆಂದು ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ