ಇಂಫಾಲ: ರಾಷ್ಟ್ರಮಟ್ಟದಲ್ಲಿನ ಎನ್ಡಿಎ ಅಂಗಪಕ್ಷವಾದ ಜೆಡಿಯು, ಮಣಿಪುರದ ಬಿಜೆಪಿ ನೇತೃತ್ವದ ಬಿರೇನ್ ಸಿಂಗ್ ಸರ್ಕಾರಕ್ಕೆ ತನ್ನ ಬೆಂಬಲವನ್ನು ಹಿಂತೆಗೆದುಕೊಂಡು, ನಂತರ ಮತ್ತೆ ಬೆಂಬಲ ನೀಡುತ್ತೇವೆ ಎಂದು ಹೇಳಿದ ಹೈಡ್ರಾಮಾ ನಡೆದಿದೆ.
ಆಗಿದ್ದೇನು?:
ಬಿಜೆಪಿ ನೇತೃತ್ವದ ಬಿರೇನ್ ಸಿಂಗ್ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾಗಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ‘ಕ್ಷ’ ಬಿರೇನ್ ಸಿಂಗ್ ಬುಧವಾರ ಮಧ್ಯಾಹ್ನ ಪತ್ರ ಬರೆದರು. ಅಲ್ಲದೆ, ವಿಧಾನಸಭೆ ಅಧಿವೇಶನದಲ್ಲಿ ಜೆಡಿಯು ಏಕೈಕ ಶಾಸಕ ಎಂಡಿ ಅಬ್ದುಲ್ ನಾಸಿರ್ಗೆ ಪ್ರತಿಪಕ್ಷದವರ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡುವಂತೆಯೂ ಕೋರಿದ್ದರು.ಇದು ದೇಶಮಟ್ಟದಲ್ಲಿ ಸುದ್ದಿ ಮಾಡಿ, ಬಿಜೆಪಿ-ನಿತೀಶ್ ಸಂಬಂಧ ಹಳಸಿದೆ ಎಂದು ಪ್ರತಿಪಕ್ಷಗಳು ಟೀಕಿಸತೊಡಗಿದವು. ಆಗ ‘ಕ್ಷ’ ಸಿಂಗ್ ಅವರ ನಿರ್ಧಾರಕ್ಕೆ ಕೆಂಡಾಮಂಡಲವಾದ ಜೆಡಿಯು ಹೈಕಮಾಂಡ್, ‘ನಮ್ಮನ್ನು ಕೇಳದೇ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದ್ದಾರೆ’ ಎಂದು ಹೇಳಿ ಅವರನ್ನು ಸ್ಥಾನದಿಂದ ವಜಾಗೊಳಿಸಿದೆ.
ಈ ಕುರಿತು ಮಾತನಾಡಿರುವ ಜೆಡಿಯು ರಾಷ್ಟ್ರೀಯ ವಕ್ತಾರ ರಾಜೀವ್ ರಂಜನ್ ಪ್ರಸಾದ್, ‘ಇದು ಮಣಿಪುರದ ಜನರನ್ನು ತಪ್ಪುದಾರಿಗೆಳೆಯುವ ನಡೆಯಾಗಿದ್ದು, ರಾಜ್ಯ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆದಿರುವ ವರದಿಗಳು ಆಧಾರರಹಿತ. ಮಣಿಪುರಕ್ಕೆ ಸಂಬಂಧಿಸಿದಂತೆ ಏಕಪಕ್ಷೀಯ ನಿರ್ಧಾರ ಕೈಗೊಂಡ ಪಕ್ಷದ ಮಣಿಪುರ ಘಟಕದ ಅಧ್ಯಕ್ಷರನ್ನು ಅವರ ಸ್ಥಾನದಿಂದ ವಜಾಗೊಳಿಸಲಾಗಿದೆ. ನಾವು ಮಣಿಪುರದಲ್ಲಿ ಎನ್ಡಿಎಗೆ ಬೆಂಬಲ ನೀಡಿದ್ದೇವೆ ಮತ್ತು ನಮ್ಮ ಬೆಂಬಲವನ್ನು ಮುಂದುವರೆಸುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.