ಡೆಹ್ರಾಡೂನ್: ಜಮ್ಮು ಮತ್ತು ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿ ಸೋಮವಾರ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ಗ್ರೆನೇಡ್ ಹಾಗೂ ಗುಂಡಿನ ದಾಳಿಗೆ ಭಾರತೀಯ ಸೇನೆಯ 22 ಗರ್ವಾಲ್ ರೈಫಲ್ಸ್ನ ಎಲ್ಲಾ ಐವರು ಯೋಧರು ಉತ್ತರಾಖಂಡದವರು ಎಂಬ ವಿಷಯ ಬೆಳಕಿಗೆ ಬಂದಿದೆ. ಹುತಾತ್ಮ ಯೋಧರನ್ನು ಆದರ್ಶ್ ನೇಗಿ, ವಿನೋದ್ ಸಿಂಗ್, ಅನುಜ್ ನೇಗಿ, ಕಮಲ್ ಸಿಂಗ್ ಮತ್ತು ಆನಂದ್ ಸಿಂಗ್ ಎಂದು ಗುರುತಿಸಲಾಗಿದೆ.
ಉಗ್ರರ ಪತ್ತೆಗೆ ಜಂಟಿ ಶೋಧ: ಐವರು ಯೋಧರನ್ನು ಬಲಿ ಪಡೆದ ಉಗ್ರರ ಪತ್ತೆಗೆ ಮಂಗಳವಾರ ಜಂಟಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.ಮಚೇಡಿ, ಬದ್ನೋಟ್, ಕಿಂಡ್ಲಿ ಮತ್ತು ಲೋಹೈ ಮಲ್ಹಾರ್ ಅರಣ್ಯ ಪ್ರದೇಶಗಳಲ್ಲಿ ಸೇನೆ, ಪೊಲೀಸ್ ಮತ್ತು ಸಿಆರ್ಪಿಎಫ್ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಇದರ ಜತೆಗೆ ಹೆಲಿಕಾಪ್ಟರ್ಗಳು ಹಾಗೂ ಮಾನವ ರಹಿತ ಕಣ್ಗಾವಲುಗಳು, ಸ್ನಿಫರ್ ಡಾಗ್ಗಳು ಹಾಗೂ ಮೆಟಲ್ ಡಿಟೆಕ್ಟರ್ಗಳನ್ನು ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಹೇಡಿತನದ ಕೃತ್ಯ: ಮುರ್ಮುಜಮ್ಮು ಮತ್ತು ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿಯ ಬೆಂಗಾವಲು ಪಡೆಯ ಮೇಲೆ ನಡೆಸಿದ ಉಗ್ರರ ದಾಳಿಗೆ ಪ್ರತಿಕ್ರಿಯೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದು ಹೇಡಿತನದ ಕೃತ್ಯ ಎಂದು ಕಿಡಿಕಾರಿದ್ದಾರೆ. ತಮ್ಮ ಟ್ವೀಟರ್ನಲ್ಲಿ ‘ ಈ ದಾಳಿ ಹೇಡಿತನದ ಕೃತ್ಯ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕಿದೆ. ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ದುಃಖ ಬರಿಸುವ ಶಕ್ತಿ ನೀಡಲಿ. ದಾಳಿಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ’ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.