ಸಾಂಗ್ಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ಭಾನುವಾರ ‘ವಿಷಕಾರಿ ಹಾವಿಗೆ’ ಹೋಲಿಸಿದ್ದಾರೆ ಮತ್ತು ಭಾರತದಲ್ಲಿ ‘ರಾಜಕೀಯವಾಗಿ ಅತ್ಯಂತ ಅಪಾಯಕಾರಿ’ ಎಂದು ಬಣ್ಣಿಸಿದ್ದಾರೆ.
ಸಾಂಗ್ಲಿಯಲ್ಲಿ ಕಾಂಗ್ರೆಸ್ ಚುನಾವಣಾ ರ್ಯಾಲಿಯಲ್ಲಿ ತಾತನಾಡಿದ ಅವರು, ‘ಭಾರತದಲ್ಲಿ ರಾಜಕೀಯವಾಗಿ ಅತ್ಯಂತ ಅಪಾಯಕಾರಿ ಯಾವುದಾದರೂ ಇದ್ದರೆ ಅದು ಬಿಜೆಪಿ ಮತ್ತು ಆರೆಸ್ಸೆಸ್ ಆಗಿದೆ. ಅವು ವಿಷದಂತಿವೆ. ಹಾವು ಕಚ್ಚಿದರೆ (ಕಚ್ಚಿದ ವ್ಯಕ್ತಿ) ಸಾಯುತ್ತಾನೆ... ಅಂತಹ ವಿಷಕಾರಿ ಹಾವನ್ನು ಕೊಲ್ಲಬೇಕು’ ಎಂದು ಖರ್ಗೆ ಹೇಳಿದರು.
ಮಹಾರಾಷ್ಟ್ರ: ಅಬ್ಬರದ ಬಹಿರಂಗ ಪ್ರಚಾರಕ್ಕೆ ಇಂದು ತೆರೆ
ಮುಂಬೈ: ನ.20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಅಬ್ಬರದ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬೀಳಲಿದೆ.ರಾಜ್ಯದಲ್ಲಿ ಮಹಾಯುತಿ ಕೂಟ ಹಾಗೂ ವಿಪಕ್ಷ ಮಹಾ ವಿಕಾಸ ಅಘಾಡಿ ಕೂಟಗಳ ನಡುವೆ ಭಾರಿ ಹಣಾಹಣಿ ಇದೆ. ಮಹಾಯುತಿ ಪರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅಬ್ಬರದ ಪ್ರಚಾರ ಮಾಡಿದ್ದಾರೆ.ಇನ್ನು ಅಘಾಡಿ ಪರ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಉದ್ಧವ ಠಾಕ್ರೆ, ಶರದ್ ಪವಾರ್, ಪ್ರಿಯಾಂಕಾ ವಾದ್ರಾ, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಚಾರ ನಡೆಸಿದ್ದಾರೆ.
ಸುಳ್ಳು ವಿಡಿಯೋ ಅಳಿಸಿ: ಬಿಜೆಪಿಗೆ ಆಯೋಗ ಸೂಚನೆ
ರಾಂಚಿ : ಜಾರ್ಖಂಡ್ ಬಿಜೆಪಿ, ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಹಾಕಿದ್ದ ವಿವಾದಾತ್ಮಕ ಸೋಷಿಯಲ್ ಮೀಡಿಯಾ ವಿಡಿಯೋ ತೆಗೆದು ಹಾಕುವಂತೆ ಚುನಾವಣಾ ಆಯೋಗ ಸೂಚಸಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಅದು ಹೇಳಿದೆ.ದಾರಿ ತಪ್ಪಿಸುವ ಸುಳ್ಳು ವಿಡಿಯೋವನ್ನು ಬಿಜೆಪಿ ಹಾಕಿದೆ ಎಂದು ಕಾಂಗ್ರೆಸ್ ದೂರಿತ್ತು. ಅದಕ್ಕೆ ಅನುಗುಣವಾಗಿ ಆಯೋಗ ಈ ಕ್ರಮ ಜರುಗಿಸಿದೆ.