ಕೋಲ್ಕತಾ: ಸೋಲಿನ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಪಕ್ಷದೊಳಗೆ ಅಸಮಾಧಾನ ಭುಗಿಲೇಳುತ್ತಿರುವುದರಿಂದ, ತಮ್ಮ ಸೋದರಳಿಯ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿಯವರ ಅನಿಯಂತ್ರಿತ ಅಧಿಕಾರಕ್ಕೆ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಕಡಿವಾಣ ಹಾಕಿದ್ದಾರೆ. ಈ ಮೂಲಕ ಪಕ್ಷವನ್ನು ಪುನಃ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಭಿಷೇಕ್ ಮಾತು ಇದುವರೆಗೆ ಪಕ್ಷದಲ್ಲಿ ಅಂತಿಮವಾಗಿತ್ತು. ಅವರನ್ನು ಯಾರೂ ಪ್ರಶ್ನೆ ಮಾಡುವಂತಿರಲಿಲ್ಲ. ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ಕಾರಣದಿಂದ ಹಲವರು ಪಕ್ಷ ತೊರೆಯುತ್ತಿದ್ದರು. ಇದೀಗ ಸಂಸದರಾದ ಡೆರೆಕ್ ಓಬ್ರಿಯಾನ್ ಮತ್ತು ಡೋಲಾ ಸೇನ್ ಅವರನ್ನು ರಾಷ್ಟ್ರೀಯ ಜಂಟಿ ಕಾರ್ಯದರ್ಶಿಗಳಾಗಿ ಮಮತಾ ನೇಮಿಸಿದ್ದಾರೆ. ಇವರು ಇನ್ನು ಅಭಿಷೇಕ್ಗೆ ಸಹಾಯ ಮಾಡಲಿದ್ದಾರೆ. ಈ ಮೂಲಕ ಅಭಿಷೇಕ್ ಅಧಿಕಾರಕ್ಕೆ ನಿಯಂತ್ರಣ ಹೇರಿ, ಹಳಿ ತಪ್ಪುತ್ತಿರುವ ಪಕ್ಷವನ್ನು ಪುನಃ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಮಮತಾ ಮುಂದಾದಂತಿದೆ.
ಕೋಲ್ಕತಾ: ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಎದುರು ಸೋಲುಂಡು ಶಾಸಕ ಸ್ಥಾನವನ್ನೂ ಕಳೆದುಕೊಂಡಿರುವ ಪಶ್ಚಿಮ ಬಂಗಾಳದ ಟಿಎಂಸಿ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉಪಚುನಾವಣೆ ಮೂಲಕ ಲೋಕಸಭೆ ಪ್ರವೇಶಿಸಲು ಮುಂದಾಗಿದ್ದಾರೆ ಎಂಬ ಗುಸುಗುಸು ಎದ್ದಿದೆ.
ಇದಕ್ಕಾಗಿ ಮಾಜಿ ಕ್ರಿಕೆಟಿಗ, ಬಹರಾಂಪುರ ಕ್ಷೇತ್ರದ ಸಂಸದ ಯೂಸುಫ್ ಪಠಾಣ್ರಿಂದ ರಾಜೀನಾಮೆ ಕೊಡಿಸಲು ಯತ್ನಿಸುತ್ತಿದ್ದಾರೆ. ಪಠಾಣ್ರ ಮನವೊಲಿಸುವಂತೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಬಳಿ ವಿನಂತಿ ಮಾಡಿದ್ದಾರೆ ಎಂದು ಬಂಗಾಳದ ದಿನಪತ್ರಿಕೆಯೊಂದು ವರದಿ ಮಾಡಿದೆ.
ಆದರೆ ಗಂಗೂಲಿ ಈ ವದಂತಿಯನ್ನು ತಳ್ಳಿಹಾಕಿದ್ದು, ‘ಇದು ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದ ಸಂಗತಿ’ ಎಂದಿದ್ದಾರೆ.