ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿ ಮೇಲೆ ನಿಗೂಢ ದ್ರವ ಎಸೆದ ಯುವಕ: ಹತ್ಯೆಗೆ ಯತ್ನ ಆರೋಪ

KannadaprabhaNewsNetwork | Updated : Dec 01 2024, 07:45 AM IST

ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಮೇಲೆ ವ್ಯಕ್ತಿಯೊಬ್ಬ ನಿಗೂಢ ದ್ರವ ಎರಚಿದ ಆಘಾತಕಾರಿ ಘಟನೆ ಶನಿವಾರ ಸಂಜೆ ನಡೆದಿದೆ. ಪ್ರಕರಣ ಸಂಬಂಧ ಅಶೋಕ್‌ ಝಾ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಮೇಲೆ ವ್ಯಕ್ತಿಯೊಬ್ಬ ನಿಗೂಢ ದ್ರವ ಎರಚಿದ ಆಘಾತಕಾರಿ ಘಟನೆ ಶನಿವಾರ ಸಂಜೆ ನಡೆದಿದೆ. ಪ್ರಕರಣ ಸಂಬಂಧ ಅಶೋಕ್‌ ಝಾ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.ಕೇಜ್ರಿವಾಲ್‌ ಮೇಲೆ ದಾಳಿ ನಡೆಸಿದ ವ್ಯಕ್ತಿ ಅವರ ಮೇಲೆ ಸ್ಪಿರಿಟ್‌ ಎರಚಿದ್ದ. ಬಳಿಕ ಬೆಂಕಿ ಹಚ್ಚಿ ಅವರನ್ನು ಸುಡುವ ಉದ್ದೇಶ ಹೊಂದಿದ್ದ. ಈ ಕೃತ್ಯ ನಡೆಸಿದ ವ್ಯಕ್ತಿ ಬಿಜೆಪಿ ಕಾರ್ಯಕರ್ತ. ಕಳೆದ 35 ದಿನಗಳಲ್ಲಿ ಕೇಜ್ರಿವಾಲ್‌ ನಡೆದ 3ನೇ ದಾಳಿ ಇದಾಗಿದೆ ಎಂದು ಎಂದು ಆಮ್‌ಆದ್ಮಿ ಪಕ್ಷ ಆರೋಪ ಮಾಡಿದೆ. ಆದರೆ ಬಂಧಿತ ವ್ಯಕ್ತಿ ಬಿಜೆಪಿಗ ಎಂಬ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ಜೊತೆಗೆ   ಎಸೆದಿದ್ದು ನೀರು ಎಂದು ಪೊಲೀಸರು ಹೇಳಿದ್ದಾರೆ.

ಏನಾಯ್ತು?:

ಕೇಜ್ರಿವಾಲ್‌, ದೆಹಲಿಯ ಗ್ರೇಟರ್‌ ಕೈಲಾಶ್‌ ಪ್ರದೇಶದಲ್ಲಿ ಶನಿವಾರ ಕೇಜ್ರಿವಾಲ್‌ ಪಾದಯಾತ್ರೆ ನಡೆಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಕಪ್ಪುಬಣ್ಣದ ದ್ರವವೊಂದನ್ನು ಎರಚಿದ್ದಾನೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ, ಕೇಜ್ರಿವಾಲ್‌ರನ್ನು ರಕ್ಷಿಸಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಈತ ದೆಹಲಿ ಸಾರಿಗೆ ನಿಗಮದ ಸಿಬ್ಬಂದಿ. ಹಿಂದಿನ ಚುನಾವಣೆ ವೇಳೆ ಆಪ್‌ಗೆ ದೇಣಿಗೆ ನೀಡಿದ್ದ. ಆದರೆ ಪೊಳ್ಳು ಭರವಸೆ ನೀಡುತ್ತಿದೆ. ಕಳೆದ 6 ತಿಂಗಳಿನಿಂದ ವೇತನ ಸಿಗದ್ದಕ್ಕೆ ಆಕ್ರೋಶಗೊಂಡು ಆತ ಈ ದಾಳಿ ನಡೆಸಿದ್ದಾನೆ ಎಂಬ ವಿಷಯ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ವರ್ಷದ ಹಿಂದಿನ ಸುಲಿಗೆ ಪ್ರಕರಣದಲ್ಲಿ ಆಪ್‌ ಶಾಸಕನ ಬಂಧನ

ನವದೆಹಲಿ: ಕಳೆದ ವರ್ಷ ದಾಖಲಾದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್‌ ಆದ್ಮಿ ಪಕ್ಷದ ಶಾಸಕ ನರೇಶ್‌ ಬಲ್ಯಾನ್‌ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ದೆಹಲಿಯ ಉತ್ತಮ್ ನಗರ ಕ್ಷೇತ್ರದ ಶಾಸಕರನ್ನು ವಿಚಾರಣೆಗಾಗಿ ಆರ್‌ಕೆ ಪುರಂನಲ್ಲಿರುವ ದೆಹಲಿ ಅಪರಾಧ ವಿಭಾಗದ ಕಚೇರಿಗೆ ಕರೆತರಲಾಯಿತು. ಬಳಿಕ ಅವರ ಬಂಧನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಲ್ಯಾನ್‌ ಸುಲಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಆದರೆ ಕೇಜ್ರಿವಾಲ್ ಶಾಸಕನ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಆರೋಪಿಸಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ. ಆಪ್‌, ಶಾಸಕನ ಬಂಧನ ಕಾನೂನು ಬಾಹಿರ ಎಂದು ಹೇಳಿದೆ. ಬಾಲ್ಯಾನ್ ಮತ್ತು ಗ್ಯಾಂಗ್‌ಸ್ಟರ್‌ ಕಪಿಲ್‌ ಸಾಂಗ್ವಾನ್‌ ಉದ್ಯಮಿಗಳಿಂದ ಸುಲಿಗೆ ಹಣವನ್ನು ಸಂಗ್ರಹಿಸುವ ಬಗ್ಗೆ ಮಾತನಾಡಿರುವ ಸಂಭಾಷಣೆಗಳು ವೈರಲ್‌ ಆಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮೂಲಗಳು ತಿಳಿಸಿವೆ.