ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಗುರುವಾರ 126 ಅಂಕಗಳು ಏರಿಕೆ ಕಂಡು ದಾಖಲೆಯ 81,867 ಅಂಕಗಳಲ್ಲಿ ಮುಕ್ತಾವಾಗಿದೆ. ಇದೇ ವೇಳೆ, ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’, 59 ಅಂಕಗಳ ಏರಿಕೆ ಕಂಡು 25 ಸಾವಿರ ಅಂಕದ ಗಡಿ ದಾಟಿ 25,010 ಅಂಕಗಳಲ್ಲಿ ಮುಕ್ತಾಯವಾಗಿದೆ. ನಿಫ್ಟಿ 25 ಸಾವಿರದ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದು ಇದೇ ಮೊದಲು.
ಬಾಂಬೆ ಷೇರುಪೇಟೆ ಒಂದು ಹಂತದಲ್ಲಿ 82,129 ಅಂಕಗಳವರೆಗೆ ತಲುಪಿತ್ತು. ಬಳಿಕ ಕೊಂಚ ಇಳಿಯಿತು. ನಿಫ್ಟಿಯೂ ಒಂದು ಹಂತದಲ್ಲಿ 25,078 ಅಂಕಗಳ ವರೆಗೆ ತಲುಪಿತ್ತು.
ಪವರ್ ಗ್ರಿಡ್, ಎನ್ಟಿಪಿಸಿ, ಎಚ್ಡಿಎಫ್ಸಿ ಬ್ಯಾಂಕ್, ನೆಸ್ಲೆ ಇಂಡಿಯಾ, ಅದಾನಿ ಪೋರ್ಟ್ಸ್, ಮಾರುತಿ ಸುಜುಕಿ ಇಂಡಿಯಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭ ಗಳಿಸಿವೆ.
ಮಥುರಾ ಕೃಷ್ಣಜನ್ಮಭೂಮಿ ವಿವಾದ: ಶಾಹಿ ಈದ್ಗಾ ಮಸೀದಿ ಅರ್ಜಿ ವಜಾ
ಪ್ರಯಾಗ್ರಾಜ್: ಉತ್ತರ ಪ್ರದೇಶದ ಮಥುರಾದಲ್ಲಿರುವ ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ಅರ್ಜಿಧಾರರು ಸಲ್ಲಿಸಿದ ಅರ್ಜಿಯನ್ನು ಪ್ರಶ್ನಿಸಿ ಶಾಹಿ ಈದ್ಗಾ ಮಸೀದಿ ಸಲ್ಲಿಸಿದ ಮನವಿಯನ್ನು ಅಲಹಾಬಾದ್ ಹೈ ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಮಸೀದಿ ತೆರವಿಗೆ ಕೋರಿದ್ದ ಹಿಂದೂ ಪಕ್ಷಗಾರರ 18 ದಾವೆಗಳನ್ನು ಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ‘ಇದು ಶ್ರೀ ಕೃಷ್ಣನ ಜನ್ಮಸ್ಥಳವಾಗಿದ್ದು, ಔರಂಗಜೇಬನ ಕಾಲದಲ್ಲಿ ಇಲ್ಲಿನ ದೇವಸ್ಥಾನವನ್ನು ಕೆಡವಿ ಮಸೀದಿ ನಿರ್ಮಿಸಲಾಗಿತ್ತು. ದೇವಸ್ಥಾನಕ್ಕೆ ಸೇರಿದ 13.37 ಎಕರೆ ಜಾಗದಲ್ಲಿ ಮಸೀದಿ ಇದ್ದು, ಅದನ್ನು ತೆರವುಗೊಳಿಸಬೇಕು’ ಎಂದು ಹಿಂದೂ ಪಂಗಡಗಳು ಅರ್ಜಿ ಸಲ್ಲಿಸಿದ್ದವು.ಪೂಜಾ ಸ್ಥಳಗಳ ಕಾಯ್ದೆ, 1991ರ ಅಡಿಯಲ್ಲಿ ಸ್ವಾತಂತ್ರ್ಯಾನಂತರ ಯಾವುದೇ ಪೂಜಾ ಸ್ಥಳಗಳನ್ನು ಬದಲಿಸಬಾರದು ಎಂದಿರುವ ಕಾರಣ ಈ ಅರ್ಜಿ ವಜಾಗೊಳಿಸಬೇಕೆಂದು ಈದ್ಗಾ ಸಮಿತಿ ಅರ್ಜಿ ಸಲ್ಲಿಸಿತ್ತು.
ವಿವಾದಿತ ಐಎಎಸ್ ಪೂಜಾ ನಿರೀಕ್ಷಣಾ ಜಾಮೀನು ದಿಲ್ಲಿ ಕೋರ್ಟಲ್ಲಿ ವಜಾ
ನವದೆಹಲಿ: ನಕಲಿ ಒಬಿಸಿ ಪ್ರಮಾಣ ಪತ್ರ ಬಳಸಿ ಐಎಎಸ್ ಆಗಿರುವ ಆರೋಪ ಹೊತ್ತಿರುವ ಪೂಜಾ ಖೇಡ್ಕರ್ಳಿಗೆ ದಿಲ್ಲಿ ಸೆಷನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.ಇದರ ವಿಚಾರಣೆ ನಡೆಸಿದ ಕೋರ್ಟ್, ‘ಈಗಾಗಲೇ ಅಧಿಕಾರದಲ್ಲಿರುವವರು ಯಾರಾದರೂ ಪೂಜಾ ಅವರಿಗೆ ಸಹಾಯ ಮಾಡಿದ್ದಾರೆಯೇ? ಜೊತೆಗೆ ಇದೇ ರೀತಿ ಇನ್ನೆಷ್ಟು ಮಂದಿ ನಕಲಿ ಪ್ರಮಾಣ ಪತ್ರದಿಂದ ಹುದ್ದೆಗೆ ಏರಿದ್ದಾರೆಯೇ ಎಂದು ತನಿಖೆ ಮಾಡಿ’ ಎಂದು ದೆಹಲಿ ಪೊಲೀಸರಿಗೆ ಸೂಚನೆ ನೀಡಿತು.
ಬುಧವಾರ ಕೇಂದ್ರ ಲೋಕಸೇವಾ ಆಯೋಗವು ಪೂಜಾ ಅವರನ್ನು ಐಎಎಸ್ನಿಂದ ವಜಾಗೊಳಿಸಿ, ಪರೀಕ್ಷೆ ತೆಗೆದುಕೊಳ್ಳುವುದರಿಂದ ನಿರ್ಬಂಧ ಹೇರಿತ್ತು.
ಕೇಜ್ರಿ ಮನೆಯಲ್ಲಿ ಗೂಂಡಾ ಕೆಲಸ: ಆಪ್ತ ಬಿಭವ್ಗೆ ಸುಪ್ರೀಂ ಚಾಟಿ
ನವದೆಹಲಿ: ಈ ವರ್ಷದ ಆರಂಭದಲ್ಲಿ ಎಎಪಿ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ನನ್ನು ಸುಪ್ರೀಂ ಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆದುಕೊಂಡಿದೆ. ‘ಮುಖ್ಯಮಂತ್ರಿ ನಿವಾಸದಲ್ಲಿ ಈ ರೀತಿಯ ಗೂಂಡಾ ಕೆಲಸ ಮಾಡಬೇಕೆ’ ಎಂದು ಪ್ರಶ್ನಿಸಿದೆ.ಜು.12 ರಂದು ದೆಹಲಿ ಹೈಕೋರ್ಟ್ ಬಿಭವ್ ಕುಮಾರ್ಗೆ ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಬಿಭವ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ‘ನನ್ನ ಮೇಲಿನ ಆರೋಪವೆಲ್ಲಾ ಸುಳ್ಳು’ ಎಂದು ಹೇಳಿಕೊಂಡಿದ್ದ.
ಜಾಮೀನು ಅರ್ಜಿ ವಿಚಾರಣೆ ಮಾಡಿದ ತ್ರಿಸದನ ಪೀಠ, ‘ಸಿಎಂ ನಿವಾಸ ಖಾಸಗಿ ಬಂಗಲೆಯೇ? ಸಿಎಂ ನಿವಾಸದಲ್ಲಿ ಈ ರೀತಿಯ ''''''''ಗೂಂಡಾ'''''''' ಕೆಲಸ ಮಾಡಬೇಕಾ?ಪ್ರತಿದಿನ ನಾವು ಗುತ್ತಿಗೆ ಹಂತಕರು, ಕೊಲೆಗಾರರು, ದರೋಡೆಕೋರರಿಗೆ ಜಾಮೀನು ನೀಡುತ್ತೇವೆ. ಆದರೆ ಯಾವ ರೀತಿಯ ಘಟನೆಯಾಗಿದೆ ಎಂಬುದು ಇಲ್ಲಿ ಎದ್ದಿರುವ ಪ್ರಶ್ನೆ. ಅವರು (ಬಿಭವ್ ಕುಮಾರ್) ಸಿಎಂ ಅವರ ಅಧಿಕೃತ ನಿವಾಸದಲ್ಲಿ ಯಾರೋ ‘ಗೂಂಡಾ’ ನಂತೆ ವರ್ತಿಸಿದ್ದಾರೆ ಎಂದು ಕಿಡಿಕಾರಿತು’ ಹಾಗೂ ಆ.7ಕ್ಕೆ ವಿಚಾರಣೆ ಮುಂದೂಡಿತು.ಬಿಭವ್ ಕುಮಾರ್ನನ್ನು ಮೇ 18 ರಂದು ಪೊಲೀಸರು ಬಂಧಿಸಿದ್ದರು.