ಇಂದಿನಿಂದ ನವಭಾರತ ಉದಯ: ಮೋಹನ ಭಾಗವತ್‌ ಹರ್ಷ

KannadaprabhaNewsNetwork | Updated : Jan 23 2024, 12:13 PM IST

ಸಾರಾಂಶ

ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾ ವಿರಾಜಮಾನನಾಗಿದ್ದಾನೆ. ಜೊತೆಗೆ, ಭಾರತದ ಹೆಮ್ಮೆಯೂ ಮರಳಿದೆ. ಇಂದಿನ ಕಾರ್ಯಕ್ರಮವು, ದೇಶವು ದುರಂತಗಳಿಂದ ಜಗತ್ತಿಗೆ ಪರಿಹಾರ ನೀಡುವ ‘ನವ ಭಾರತ’ವಾಗಿ ಖಂಡಿತವಾಗಿಯೂ ಹೊರಹೊಮ್ಮುತ್ತದೆ ಎಂಬುದರ ಸಂಕೇತವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಹೇಳಿದರು.

ಅಯೋಧ್ಯೆ: ‘ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾ ವಿರಾಜಮಾನನಾಗಿದ್ದಾನೆ. ಜೊತೆಗೆ, ಭಾರತದ ಹೆಮ್ಮೆಯೂ ಮರಳಿದೆ. ಇಂದಿನ ಕಾರ್ಯಕ್ರಮವು, ದೇಶವು ದುರಂತಗಳಿಂದ ಜಗತ್ತಿಗೆ ಪರಿಹಾರ ನೀಡುವ ‘ನವ ಭಾರತ’ವಾಗಿ ಖಂಡಿತವಾಗಿಯೂ ಹೊರಹೊಮ್ಮುತ್ತದೆ ಎಂಬುದರ ಸಂಕೇತವಾಗಿದೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಹೇಳಿದರು. 

ಅಲ್ಲದೆ, ರಾಮ ಕೊನೆಗೂ ಬಂದಿರುವ ಕಾರಣ ಎಲ್ಲ ವಿವಾದಗಳಿಗೂ ಇನ್ನು ಅಂತ್ಯ ಹಾಡಬೇಕು ಎಂದು ಕರೆ ನೀಡಿದರು.ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ನಂತರ ಭಾಗವತ್ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು.

ಈ ವೇಳೆ ಮೋದಿ ಮಾಡಿದ 11 ದಿನಗಳ ಉಪವಾಸವನ್ನು ಸ್ಮರಿಸಿದ ಅವರು, ‘ಪ್ರಾಣ ಪ್ರತಿಷ್ಠೆಗಾಗಿ ಇಲ್ಲಿಗೆ ಆಗಮಿಸುವ ಮುನ್ನ ಪ್ರಧಾನಿ ಮೋದಿ ಅವರು ಕಟ್ಟುನಿಟ್ಟಿನ ಉಪವಾಸವನ್ನು ಇಟ್ಟುಕೊಂಡಿದ್ದರು. 

ನಾನು ಅವರ ಬಗ್ಗೆ ಬಹಳ ಹಿಂದಿನಿಂದಲೂ ಬಲ್ಲೆ. ಪ್ರಧಾನಿ ಮೋದಿ ತಪಸ್ವಿ ಎಂದು ನನಗೆ ತಿಳಿದಿದೆ. ಈ ಕಠೋರ ಉಪವಾಸದ ಮೂಲಕ ಅವರು ನಾಗರಿಕರ ಸಾಮೂಹಿಕ ಜವಾಬ್ದಾರಿಯನ್ನು ಒತ್ತಿಹೇಳಿದ್ದಾರೆ. 

ಇಂಥ ವ್ರತಗಳನ್ನು ಅವರು ಮಾತ್ರ ಮಾಡಬೇಕು ಎಂದಿಲ್ಲ. ಈಗ ನಾವು ಕೂಡ ನಮ್ಮ ಕೈಲಾದಷ್ಟು ಮಾಡಬೇಕು. ಈ ಮೂಲಕ ದೇಶಕ್ಕಾಗಿ ಸೇವೆ ಸಲ್ಲಿಸಬೇಕು’ ಎಂದು ಕರೆ ನೀಡಿದರು.

ರಾಮನು ಕೊನೆಗೂ ಗರ್ಭಗುಡಿ ಪ್ರವೇಶಿಸಿರುವ ಕಾರಣ ಇನ್ನು ಎಲ್ಲ ವಿವಾದಗಳಿಗೂ ಅಂತ್ಯ ಹಾಡಬೇಕು ಎಂದು ಭಾಗವತ್‌ ಕರೆ ನೀಡಿದರು. ಈ ಮೂಲಕ ದಶಕಗಳ ಕಾಲದ ರಾಮಮಂದಿರ ವಿವಾದವನ್ನು ಪರೋಕ್ಷವಾಗಿ ಉಲ್ಲೇಖಿಸಿ ದೇಶದ ಏಕತೆಗೆ ಕರೆ ನೀಡಿದರು.

Share this article