ನವದೆಹಲಿ: ಹೆಚ್ಚೆಂದರೆ ಜಾಮೀನು ಅರ್ಜಿ 11 ದಿನದಲ್ಲಿ ಇತ್ಯರ್ಥ ಆಗುತ್ತವೆ. ಆದರೆ 2010ರಲ್ಲಿ ನನ್ನ ಮೇಲಿನ ಕೇಸಿನ ವಿಚಾರಣೆ ನಡೆಸುತ್ತಿದ್ದ ನ್ಯಾ। ಅಫ್ತಾಬ್ ಆಲಂ ಕೃಪೆಯಿಂದ ಅದು ಇತ್ಯರ್ಥ ಆಗಲು 2 ವರ್ಷ ಹಿಡಿಯಿತು. ಹೀಗಾಗಿ 2 ವರ್ಷ ಗುಜರಾತ್ ಬಿಟ್ಟು ಅಜ್ಞಾತವಾಸದಲ್ಲಿದ್ದೆ ಎಂದು ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಕೇಸಿನ ಆರೋಪಿ ಆಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ‘ವಿಚಾರಣೆ ವೇಳೆ ನ್ಯಾ। ಆಲಂ ಅವರು, ‘ಶಾ ಪ್ರಭಾವಿ ಆಗಿರುವ ಕಾರಣ ಕೇಸಿನ ಮೇಲೆ ಪ್ರಭಾವ ಬೀರಬಹುದು ಎಂದರು. ಆಗ ನಾನು ಕೇಸು ಇತ್ಯರ್ಥದವರೆಗೆ ಗುಜರಾತ್ನಲ್ಲಿ ಇರಲ್ಲ ಎಂದೆ. ಅನ್ಯ ರಾಜ್ಯಕ್ಕೆ ಹೋದೆ. ಆದರೆ 11 ದಿನದಲ್ಲಿ ಇತ್ಯರ್ಥ ಆಗಬೇಕಾದ ಜಾಮೀನು ಅರ್ಜಿ ನ್ಯಾ। ಆಲಂ ಕೃಪೆಯಿಂದ 2 ವರ್ಷ ತೆಗೆದುಕೊಂಡಿತು. ಹೀಗಾಗಿ 2 ವರ್ಷ ಅಜ್ಞಾತವಾಸದಲ್ಲಿದ್ದೆ’ ಎಂದು 2010ರಲ್ಲಿನ ತಮ್ಮ 2 ವರ್ಷದ ಹೊರರಾಜ್ಯ ವಾಸದ ಕಾರಣ ಬಹಿರಂಗಪಡಿಸಿದರು.
ಧನಕರ್ ರಾಜೀನಾಮೆ ವಿಚಾರ ಹೆಚ್ಚು ಎಳೆಯಬೇಡಿ: ಅಮಿತ್ ಶಾ
ನವದೆಹಲಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ರಾಜೀನಾಮೆ ನೀಡಿದ ಬಳಿಕ ಗೃಹಬಂಧಕ್ಕೆ ಒಳಗಾಗಿದ್ದಾರೆ ಎಂಬ ವಿಪಕ್ಷಗಳ ಆರೋಪದ ಬಗ್ಗೆ ಮೊದಲ ಬಾರಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ ಧನಕರ್ ಅವರು ಅನಾರೋಗ್ಯದ ಕಾರಣಕ್ಕೆ ರಾಜೀನಾಮೆ ನೀಡಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಈ ವಿಚಾರವನ್ನು ತುಂಬಾ ಎಳೆಯಬೇಡಿ’ ಎಂದಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿದ ಶಾ, ‘ಧನಕರ್ ತಮ್ಮ ರಾಜೀನಾಮೆ ಪತ್ರದಲ್ಲಿಯೇ ಅನಾರೋಗ್ಯದ ಕಾರಣವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಸತ್ಯ ಮತ್ತು ಸುಳ್ಳಿನ ವ್ಯಾಖ್ಯಾನಗಳು ವಿರೋಧ ಪಕ್ಷಗಳ ಹೇಳಿಕೆಯನ್ನು ಮಾತ್ರ ಅವಲಂಬಿಸಿರಬಾರದು. ಧನಕರ್ ಸಾಂವಿಧಾನಿಕ ಹುದ್ದೆ ಹೊಂದಿದ್ದರು. ಸಂವಿಧಾನದ ಪ್ರಕಾರ ತಮ್ಮೆಲ್ಲ ಕರ್ತವ್ಯಗಳನ್ನು ನಿರ್ವಹಿಸಿದ್ದರು. ಈ ವಿಷಯದ ಬಗ್ಗೆ ಹೆಚ್ಚು ಮಾತನಾಡಬಾರದು. ಇದನ್ನೆಲ್ಲ ದೊಡ್ಡದಾಗಿಸಬಾರದು’ ಎಂದರು.