ಕೋಲ್ಕತಾ: ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ ಬಳಿಕ ನಡೆಯುತ್ತಿರುವ ಭಾರಿ ಪ್ರತಿಭಟನೆಗೆ ಮಣಿದಿರುವ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ, ಮಹಿಳಾ ವೈದ್ಯರ ಒಳಿತಿಗಾಗಿ ಹಲವು ಕ್ರಮಗಳನ್ನು ಘೋಷಿಸಿದೆ. ಇದರಲ್ಲಿ ಸುರಕ್ಷತಾ ಪ್ರದೇಶ ರಚನೆ, ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯ ಸೇರಿ ಹಲವು ಕ್ರಮ ಒಳಗೊಂಡಿದೆ.
1) ಮಹಿಳಾ ಸಿಬ್ಬಂದಿಗಾಗಿ ಪ್ರತ್ಯೇಕ ಶೌಚಾಲಯ, 2) ರಾತ್ರಿ ವೇಳೆ ಮಹಿಳೆಯರ ಕಾವಲಿಗಾಗಿ ಮಹಿಳಾ ಸಾಥಿ, 3) ಸಂಪೂರ್ಣ ಸಿಸಿಟೀವಿ ಅಳವಡಿಸಿರುವ ಭದ್ರತಾ ಕೋಣೆ, 4) ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕ ಹೊಂದಿರುವ ಮೊಬೈಲ್ ಆ್ಯಪ್ ಸಿದ್ಧಪಡಿಸುವಿಕೆ. ಅದನ್ನು ಎಲ್ಲಾ ಮಹಿಳಾ ಸಿಬ್ಬಂದಿ ಕಡ್ಡಾಯ ಅಳವಡಿಸಿಕೊಳ್ಳಬೇಕು, 5) ಭದ್ರತಾ ಹಾಗೂ ಉಸಿರಾಟದ ಪರೀಕ್ಷೆ ಹಾಗೂ 6) ಎಲ್ಲಾ ಸಂಸ್ಥೆಗಳಲ್ಲಿಯೂ ಲೈಂಗಿಕ ಕಿರುಕುಳ ಪತ್ತೆಗೆ ‘ವಿಶಾಖಾ ಸಮಿತಿ’ ರಚಿಸಬೇಕು ಎಂದು ಸರ್ಕಾರ ಆದೇಶಿಸಿದೆ.
==
ಪರಿಸ್ಥಿತಿ ನಿಭಾಯಿಸುವಲ್ಲಿ ದೀದಿ ವಿಫಲ, ರಾಜೀನಾಮೆ ಕೊಡಲಿ: ನಿರ್ಭಯಾ ತಾಯಿ
ಬಲ್ಲಿಯಾ (ಉತ್ತರಪ್ರದೇಶ): ವೈದ್ಯ ವಿದ್ಯಾರ್ಥಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ನಿರ್ಭಯಾ ತಾಯಿ ಆಶಾದೇವಿ ಶನಿವಾರ ಒತ್ತಾಯಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಮತಾ ತಮ್ಮ ಅಧಿಕಾರವನ್ನು ಬಳಸಿಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಂತೆ ಪ್ರತಿಭಟನೆ ನಡೆಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಸಿಎಂ ಸ್ಥಾನದಲ್ಲಿದ್ದುಕೊಂಡು ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕಿಡಿ ಕಾರಿದರು.