ಏಕ ಚುನಾವಣೆ ಮಸೂದೆ ಮಂಡನೆ

KannadaprabhaNewsNetwork |  
Published : Dec 18, 2024, 12:47 AM IST
ಒಂದು ಚುನಾವಣೆ | Kannada Prabha

ಸಾರಾಂಶ

ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆ ನಡೆಸುವ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘ಒಂದು ದೇಶ, ಒಂದು ಚುನಾವಣೆ’ ಕುರಿತ 2 ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ.

ಲೋಕಸಭೆಯಲ್ಲಿ ಬಿಲ್‌ ಮಂಡನೆ । ಜೆಪಿಸಿಗೆ ವರ್ಗ ಸಾಧ್ಯತೆ

ಇದು ಸಂವಿಧಾನ ವಿರೋಧಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ವಿಪಕ್ಷ

ರಾಜ್ಯಗಳ ಅಧಿಕಾರಕ್ಕೆ ಧಕ್ಕೆ ಇಲ್ಲ: ಕೇಂದ್ರ ಸಚಿವ ಮೇಘ್ವಾಲ್

--

ಒಂದು ದೇಶ, ಒಂದು ಚುನಾವಣೆ ಸಂವಿಧಾನ ವಿರೋಧಿ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಕಾಂಗ್ರೆಸ್‌ ಪಕ್ಷ ಇದನ್ನು ಸದನದಲ್ಲಿ ವಿರೋಧಿಸಲಿದೆ.

- ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಸಂಸದೆ

--

ಏಕ ಚುನಾವಣೆ ಮಸೂದೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲ್ಲ. ಮಸೂದೆ ಕುರಿತು ವಿಸ್ತೃತ ಚರ್ಚೆ ಆಗಲಿ ಎಂಬುದು ಪ್ರಧಾನಿ ನರೇಂದ್ರ ಮೋದಿ ಬಯಕೆ. ಹೀಗಾಗಿ ಅದನ್ನು ಜಂಟಿ ಸಂಸದೀಯ ಸಮಿತಿಗೆ ವಹಿಸಲು ಬಯಸಿದ್ದಾರೆ.

- ಅಮಿತ್‌ ಶಾ, ಕೇಂದ್ರ ಗೃಹ ಸಚಿವ

--

ಮೊದಲ ಬಾರಿ ಇ-ವೋಟಿಂಗ್: ಮಸೂದೆ ಪರ 269, ವಿರುದ್ಧ 198

ಮಂಡನೆಗೂ ಮುನ್ನ ಮಂಡನೆಯನ್ನೇ ವಿರೋಧಿಸಿದ ಪ್ರತಿಪಕ್ಷಗಳು ಮತಕ್ಕೆ ಹಾಕಲು ಕೋರಿದವು. ಆಗ ಹೊಸ ಸಂಸತ್ತಿನಲ್ಲಿ ಇದೇ ಮೊದಲ ಬಾರಿ ವಿದ್ಯುನ್ಮಾನ ಮತದಾನ (ಇ-ವೋಟಿಂಗ್‌) ನಡೆಯಿತು. ಆಗ ಮಸೂದೆ ಮಂಡನೆ ಪರ 269 ಹಾಗೂ ವಿರುದ್ಧ 198 ಮತ ಬಂದವು.

==

ಏಕ ಚುನಾವಣೆ ಏಕೆ?

ಸರ್ಕಾರ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ವೆಚ್ಚಕ್ಕೆ ಕಡಿವಾಣ

ನೀತಿ ಸಂಹಿತೆಯಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ಆಗುವ ತೊಂದರೆಗೆ ತಡೆ

ಪಿಟಿಐ ನವದೆಹಲಿ

ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆ ನಡೆಸುವ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘ಒಂದು ದೇಶ, ಒಂದು ಚುನಾವಣೆ’ ಕುರಿತ 2 ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ. ಈ ಕುರಿತು ಆರಂಭವಾದ ಪರ-ವಿರೋಧ ಚರ್ಚೆ ಅಪೂರ್ಣಗೊಂಡಿದ್ದು, ಸರ್ಕಾರವು ಇದನ್ನು ತಕ್ಷಣವೇ ಅಂಗೀಕರಿಸಲು ಮುಂದಾಗದೇ ಜಂಟಿ ಸದನ ಸಮಿತಿಗೆ (ಜೆಪಿಸಿ) ಕಳಿಸುವ ಇರಾದೆ ವ್ಯಕ್ತಪಡಿಸಿದೆ.

ಬುಧವಾರ ಈ ಬಗ್ಗೆ ನಿರ್ಧಾರ ಆಗುವ ಸಾಧ್ಯತೆ ಇದ್ದು ಬಳಿಕ ಜೆಪಿಸಿ ರಚನೆ ಆಗಲಿದೆ. ಜೆಪಿಸಿಯಲ್ಲಿ 31 ಸಂಸದರು (21 ಲೋಕಸಭೆ, 10 ರಾಜ್ಯಸಭೆ) ಇರಲಿದ್ದು ಬಿಜೆಪಿಗರೇ ಅಧ್ಯಕ್ಷ ಆಗುವ ಸಂಭವವಿದೆ. 90 ದಿನಗಳಲ್ಲಿ ಇದು ವರದಿ ನೀಡಬೇಕು.

ಇದು ಅನಗತ್ಯ ಚುನಾವಣಾ ಖರ್ಚು ವೆಚ್ಚ ತಪ್ಪಿಸಲು ಹಾಗೂ ನೀತಿಸಂಹಿತೆ ಹೇರಿಕೆಯಿಂದ ಆಗುವ ಅಭಿವೃದ್ಧಿ ಚಟುವಟಿಕೆಗಳ ಸ್ಥಾಗಿತ್ಯವನ್ನು ತಡೆಯಲು ಸಹಕಾರಿ ಎಂದಿರುವ ಕೇಂದ್ರ ಸರ್ಕಾರ, ಇದರಿಂದ ಸಂವಿಧಾನಕ್ಕೆ ಯಾವುದೇ ಹಾನಿ ಆಗುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ. ಆದರೆ ಮಸೂದೆ ವಿರೋಧಿಸಿರುವ ಪ್ರತಿಪಕ್ಷಗಳು, ಇದನ್ನು ಸಂವಿಧಾನ ವಿರೋಧಿ ಎಂದು ಕರೆದಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕಿಡಿ ಕಾರಿವೆ. ಜೊತೆಗೆ ಕರಡು ವರದಿಯನ್ನು ಜೆಪಿಸಿಗೆ ವಹಿಸುವಂತೆ ಒತ್ತಾಯಿಸಿದರು.

ಮೇಘ್ವಾಲ್ ಸ್ಪಷ್ಟನೆ:

ಮಂಗಳವಾರ ಮಧ್ಯಾಹ್ನ ಸಂವಿಧಾನದ (129ನೇ ತಿದ್ದುಪಡಿ) ಮಸೂದೆ-2024 (ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ) ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ- 2024ಯನ್ನು ಮಂಡಿಸಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮಂಡಿಸಿದರು.

ಈ ವೇಳೆ ಮಾತನಾಡಿದ ಅವರು, ‘ಏಕ ಚುನಾವಣೆಯಿಂದ ರಾಜ್ಯಗಳ ಅಧಿಕಾರಕ್ಕೆ ಧಕ್ಕೆ ಆಗುವುದಿಲ್ಲ. ಚುನಾವಣಾ ಸುಧಾರಣೆಗಳಿಗಾಗಿ ಕಾನೂನುಗಳನ್ನು ತರಲಾಗುತ್ತಿದೆ. ಈ ಮಸೂದೆ ಚುನಾವಣಾ ಪ್ರಕ್ರಿಯೆಯನ್ನು ಸರಾಗಗೊಳಿಸುವ ಪ್ರಕ್ರಿಯೆ ಆಗಿದೆ. ಈ ಮಸೂದೆಯಿಂದ ಸಂವಿಧಾನಕ್ಕೆ ಯಾವುದೇ ಹಾನಿಯಾಗುವುದಿಲ್ಲ. ನಾವು ರಾಜ್ಯಗಳ ಅಧಿಕಾರಕ್ಕೆ ಭಂಗ ತರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ನಂತರ ಅವರು ಮಸೂದೆಯನ್ನು ವ್ಯಾಪಕ ಸಮಾಲೋಚನೆಗಾಗಿ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ಪ್ರಸ್ತಾಪಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ