- ಕಗ್ಗಂಟಾಗಿದ್ದ ಅಧಿಕಾರ ಹಸ್ತಾಂತರ ಸುಸೂತ್ರವಾಗಿ ಬಗೆಹರಿಸಿದ್ದಕ್ಕೆ ಪ್ರತಿಪಕ್ಷದಲ್ಲೂ ಮೆಚ್ಚುಗೆ- ಹಲವು ಗೊಂದಲಗಳಿದ್ದರೂ ಬಗೆಹರಿಸದ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಬಗ್ಗೆ ಬೇಸರಟಾಪ್- ಹೋಲಿಕೆಎಲ್ಲದಕ್ಕೂ ಸುರ್ಜೇವಾಲಾ ರಾಜ್ಯಕ್ಕೆ ಬರ್ತಾರೆ । ಬಿಜೆಪಿ ಉಸ್ತುವಾರಿ ಪೋಸ್ಟ್ಮ್ಯಾನ್ ರೀತಿ ಆಗಿದ್ದಾರೆ: ಅತೃಪ್ತಿ--
--
ರಾಧಮೋಹನ ಬಗ್ಗೆಇರುವ ಅತೃಪ್ತಿ ಏನು?
ವಿಜಯ್ ಮಲಗಿಹಾಳಕನ್ನಡಪ್ರಭ ವಾರ್ತೆ ಬೆಂಗಳೂರು
ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಸ್ಥಾನ ಬಿಟ್ಟು ಕೊಡುವುದು ಆಗದ ಮಾತು ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ಬಲವಾಗಿ ಕೇಳಿಬಂದಿತ್ತು. ಒಟ್ಟಾರೆ ಈ ಪ್ರಕ್ರಿಯೆ ವೇಳೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಸ್ಫೋಟಗೊಂಡು ಕೋಲಾಹಲ ಉಂಟಾಗಲಿದೆ ಎಂಬ ನಿರೀಕ್ಷೆ ಸಹಜವಾಗಿಯೇ ಬಿಜೆಪಿಯಲ್ಲಿತ್ತು. ಆದರೆ, ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಇಡೀ ಪ್ರಕ್ರಿಯೆಯನ್ನು ಸುಗಮವಾಗಿ ಮುಗಿಸಿರುವುದು ಸಹಜವಾಗಿಯೇ ಬಿಜೆಪಿಗರಿಗೆ ಅಚ್ಚರಿ ಉಂಟು ಮಾಡಿದೆ.
ರಾಜ್ಯ ಬಿಜೆಪಿಯಲ್ಲಿ ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿ ಅಪಸ್ವರ, ಗೊಂದಲ ಮುಂದುವರೆದಿರುವುದು ಗೊತ್ತಿರುವ ಸಂಗತಿ. ಈ ಗೊಂದಲವನ್ನು ತಾವಾಗಿಯೇ ಪರಿಹರಿಸುವುದು ಇರಲಿ, ಬಗೆಹರಿಸಿ ಎಂದು ರಾಜ್ಯದ ಹಿರಿಯ ನಾಯಕರು ಮನವಿ ಮಾಡಿದರೂ ಬಿಜೆಪಿ ಹೈಕಮಾಂಡ್ ಆಗಲಿ ಅಥವಾ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರಾಗಲಿ ಕ್ಯಾರೇ ಎನ್ನದೆ ತಳ್ಳಿಕೊಂಡೇ ಬಂದಿರುವ ಬಗ್ಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. ಸುರ್ಜೇವಾಲಾ ರೀತಿಯ ಉಸ್ತುವಾರಿ ಬಿಜೆಪಿಗೂ ಅವಶ್ಯವಿದೆ ಎಂಬ ತುಡಿತ ಕೇಳಿಬರುತ್ತಿದೆ.
ಇದೀಗ ಸುರ್ಜೇವಾಲಾ ಜತೆಗೆ ರಾಧಾಮೋಹನ್ ದಾಸ್ ಅಗರ್ವಾಲ್ ಅವರ ಕಾರ್ಯವೈಖರಿಯನ್ನು ಬಿಜೆಪಿಗರು ಹೋಲಿಸಿಕೊಂಡು ಬೇಸರಪಟ್ಟುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ಕಾಲದಲ್ಲಿ ಪಕ್ಷದಲ್ಲಿನ ಬಿಕ್ಕಟ್ಟು, ಗೊಂದಲಗಳನ್ನು ಬಗೆಹರಿಸುವಲ್ಲಿ ಬಿಜೆಪಿ ಮುಂಚೂಣಿಯಲ್ಲಿ ಇರುತ್ತಿತ್ತು. ಏನೇ ಗೊಂದಲ ಕಂಡು ಬಂದರೆ ತಕ್ಷಣ ಪಕ್ಷದ ರಾಜ್ಯ ಉಸ್ತುವಾರಿ ಕ್ರಿಯಾಶೀಲವಾಗಿ ಬಗೆಹರಿಸಲು ಮುಂದಾಗುತ್ತಿದ್ದರು. ಬಿಜೆಪಿಗೆ ಪಕ್ಷಕ್ಕೆ ಹೋಲಿಸಿದರೆ ಕಾಂಗ್ರೆಸ್ ಪಕ್ಷ ಈ ವಿಷಯದಲ್ಲಿ ತೀರಾ ಹಿಂದುಳಿದಿತ್ತು.
ಹಿಂದೆ ರಾಜ್ಯ ಉಸ್ತುವಾರಿಯಾಗಿದ್ದ ಅರುಣ್ ಸಿಂಗ್ ಅವರೂ ಆರಂಭದಲ್ಲಿ ತುಸು ಗಡಸು ಎಂಬಂತೆ ಕಂಡು ಬಂದರೂ ನಂತರದ ದಿನಗಳಲ್ಲಿ ಮೆತ್ತಗಾದರು. ಇದೀಗ ರಾಧಾಮೋಹನ್ ದಾಸ್ ಅಗರ್ವಾಲ್ ಅವರೂ ಅಷ್ಟೇ. ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಮಾತನಾಡಲು, ಗೊಂದಲಗಳನ್ನು ಬಗೆಹರಿಸಲು ಯಾವುದೇ ಗಂಭೀರ ಪ್ರಯತ್ನಗಳನ್ನು ಮಾಡುತ್ತಿರುವುದು ಕಂಡು ಬಂದೇ ಇಲ್ಲ. ದೆಹಲಿಯಿಂದ ಮುಂದಿನ ಟಾಸ್ಕ್ನ ಪಟ್ಟಿ ಹೊತ್ತು ತರುವ ಪೋಸ್ಟ್ಮನ್ ಕೆಲಸ ಮಾಡುತ್ತಿದ್ದಾರೆಯೇ ಹೊರತು ಪಕ್ಷ ಸಂಘಟನೆ ಬಲಪಡಿಸಲು ಮಾಡಬೇಕಾದ ಪ್ರಯತ್ನ ಮಾಡುತ್ತಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ ಅಸಮಾಧಾನ ಹೊರಹಾಕಿದರು.
ಸ್ಥಳೀಯ ಸಂಸ್ಥೆ ಚುನಾವಣೆ ಸಜ್ಜು ಯಾವಾಗ?:ಇನ್ನೆರಡು ವರ್ಷಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಎದುರಾಗಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ಹೊಸ್ತಿಲಲ್ಲಿ ಬಂದು ನಿಲ್ಲುವ ಸಾಧ್ಯತೆಯಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಆ ಚುನಾವಣೆಗಳನ್ನು ಎದುರಿಸಲು ದಿನೇ ದಿನೆ ಸಜ್ಜಾಗುತ್ತಿದೆ. ಆದರೆ, ನಮ್ಮ ಬಿಜೆಪಿ ಮಾತ್ರ ಅದೆಲ್ಲವನ್ನೂ ನೋಡಿಕೊಂಡು ಪತ್ರಿಕಾ ಹೇಳಿಕೆ, ಬೈಟ್ ನೀಡುವುದಕ್ಕೆ ಮಾತ್ರ ಸೀಮಿತವಾಗಿದೆ. ಮುಂದೆ ನೋಡಿದರಾಯಿತು ಎಂಬ ನಿಲವಿಗೆ ಹೈಕಮಾಂಡ್ ಬಂದಂತಿದೆ. ಕಾಂಗ್ರೆಸ್ ಪಕ್ಷದ ವರಿಷ್ಠರ ಕಾರ್ಯವೈಖರಿಯನ್ನು ನಾವು ನೋಡಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹಲವು ಮುಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.