ಹಾಥ್ರಸ್ (ಉ.ಪ್ರ): ಧಾರ್ಮಿಕ ಸಭೆಯೊಂದರ ವೇಳೆ ಕಂಡು ಕೇಳರಿಯದ ಕಾಲ್ತುಳಿತ ಸಂಭವಿಸಿ 107 ಜನ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಹಾಥ್ರಸ್ ಬಳಿಯ ಪುಲ್ರೈ ಎಂಬ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಇನ್ನೊಬ್ಬರ ಪ್ರಕಾರ, ಕೆಲವರು ಭೋಲೆ ಬಾಬಾ ಅವರನ್ನು ಹತ್ತಿರದಿಂದ ನೋಡಿ ಅವರು ಪಾದ ಇಟ್ಟ ಸ್ಥಳದ ಪಾದ ಧೂಳಿಯನ್ನು ಸಂಗ್ರಹಿಸಲು ಮುಗಿಬಿದ್ದರು. ಆಗ ನೂಕುನುಗ್ಗಲು ಉಂಟಾಗಿದೆ. ಜಿಲ್ಲಾಡಳಿತ ನೀಡಿದ ಅನುಮತಿಯ ಮಿತಿ ಮೀರಿ ಜನರನ್ನು ಸೇರಿಸಲಾಗಿತ್ತು. ಹೀಗಾಗಿ ಸ್ಥಳದಲ್ಲಿ ಉಸಿರುಕಟ್ಟುವ ವಾತಾವರಣ ಉಂಟಾಗಿತ್ತು ಎನ್ನಲಾಗಿದೆ.
ಆಗ್ರಾ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಅಲಿಗಢದ ವಿಭಾಗೀಯ ಆಯುಕ್ತರನ್ನು ಒಳಗೊಂಡ ತಂಡವು ಘಟನೆಯ ತನಿಖೆ ನಡೆಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಘಟನಾ ಸ್ಥಳಕ್ಕೆ ಬುಧವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ನೀಡಲಿದ್ದಾರೆ.ಹೃದಯ ಕಲಕುವ ದೃಶ್ಯಗಳು:
ಗಾಯಗೊಂಡ ನೂರಾರು ಜನರನ್ನು ಎಟಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ, ಗಾಯಾಳುಗಳನ್ನು ಹಾಗೂ ಶವಗಳನ್ನು ಎಟಾ ಆಸ್ಪತ್ರೆಗೆ ಟ್ರಕ್ ಹಾಗೂ ಟೆಂಪೋಗಳಲ್ಲಿ ತರಲಾಗಿದೆ. ಆಸ್ಪತ್ರೆಯಲ್ಲಿ ಪುಟ್ಟ ಬಾಲಕರು ಸೇರಿ ಹಲವರ ಶವಗಳನ್ನು ಕೋಣೆಯೊಂದರಲ್ಲಿ ನೆಲದ ಮೇಲೆ ಮಲಗಿಸಲಾಗಿದ್ದು, ಅದರ ಸುತ್ತ ಜನರು ರೋದಿಸುತ್ತಿರುವ ದೃಶ್ಯಗಳು ಹೃದಯ ಕಲಕುವಂತಿವೆ.