ಭಾರತದಲ್ಲಿ ನಮಾಜ಼್ ನಿಷೇಧಿವುವ ಮೊದಲು ಉರ್ದಿಸ್ತಾನ್ ಸ್ಥಾಪನೆಗೆ ಯುಪಿ ಮುಸ್ಲಿಮರಿಗೆ ಖಲಿಸ್ತಾನ್ ಉಗ್ರ ಪನ್ನು ಕರೆ ನೀಡಿದ್ದಾನೆ. ಅಲ್ಲದೆ ನರೇಂದ್ರ ಮೋದಿ ಮೇಲೆ ಅಯೋಧ್ಯೆಯಲ್ಲಿ ದಾಳಿ ಮಾಡುವಂತೆ ಪ್ರಚೋದಿಸಿದ್ದಾನೆ.
ನವದೆಹಲಿ: ವಿದೇಶದಲ್ಲಿದ್ದುಕೊಂಡು ಭಾರತದಲ್ಲಿ ಶಾಂತಿ ಕದಡುವ ನಿರಂತರ ಯತ್ನ ಮಾಡುತ್ತಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯನ್ನು ಗುರಿಯಾಗಿಸಿ ದಾಳಿ ಮಾಡುವಂತೆ ಉತ್ತರಪ್ರದೇಶದ ಮುಸ್ಲಿಮರಿಗೆ ಕರೆ ನೀಡಿದ್ದಾನೆ.
ಈ ಕುರಿತಾಗಿ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಪನ್ನೂನ್, ಡಿ.30ರಂದು ಅಯೋಧ್ಯೆಯಲ್ಲಿ ನಡೆಯುವ ಮೋದಿ ರ್ಯಾಲಿಯನ್ನು ಉತ್ತರ ಪ್ರದೇಶದ ಮುಸ್ಲಿಮರು ಗುರಿಯಾಗಿಸಿಕೊಳ್ಳಬೇಕು, ಭಾರತದಲ್ಲಿ ಶೀಘ್ರವೇ ನಮಾಜ್ ರದ್ದು ಮಾಡಲಾಗುತ್ತದೆ. ಹೀಗಾಗಿ ಉರ್ದಿಸ್ತಾನ್ ಎಂಬ ದೇಶ ಕಟ್ಟಲು ಯತ್ನಿಸಬೇಕು ಎಂದು ಹೇಳಿದ್ದಾನೆ. ಈ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ಗುಪ್ತಚರ ಇಲಾಖೆಗಳು ಹೆಚ್ಚು ಸಕ್ರಿಯಗೊಂಡಿದ್ದು, ಭದ್ರತೆ ನೀಡುವತ್ತ ಗಮನ ಹರಿಸಿವೆ. ಅಲ್ಲದೇ ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರ ಕೃತ್ಯಕ್ಕೆ ಪನ್ನೂನ್ ಬೆಂಬಲ ವ್ಯಕ್ತಪಡಿಸಿದ್ದು, ಕಾಶ್ಮೀರ್-ಖಲಿಸ್ತಾನಿ ಡೆಸ್ಕ್ ಸ್ಥಾಪನೆ ಮಾಡಬೇಕು ಎಂದು ಕರೆ ನೀಡಿದ್ದಾನೆ. ನಿಷೇಧಿತ ಉಗ್ರ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ನ ಮುಖ್ಯಸ್ಥನಾದ ಪನ್ನು ಅಮೆರಿಕದಲ್ಲಿ ನೆಲೆಸಿದ್ದು, ಪದೇ ಪದೇ ಭಾರತದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿದ್ದಾನೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.