ನವದೆಹಲಿ: ನೂತನ ಲೋಕಸಭಾ ಸದಸ್ಯರ ಪ್ರಮಾಣ ವಚನದ ಬಳಿಕ ಎರಡು ದಿನಗಳ ವಾರಾಂತ್ಯದ ರಜೆಯಲ್ಲಿದ್ದ ಸಂಸತ್ತಿನ ಕಲಾಪ ಸೋಮವಾರ ಪುನಾರಂಭವಾಗಲಿದ್ದು, ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಸಮರಕ್ಕೆ ವಿಪಕ್ಷಗಳು ಸಜ್ಜಾಗಿವೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಸರ್ಕಾರ ಪರವಾಗಿ ಕೇಂದ್ರ ಸಚಿವ ಅನುರಾಗ್ ಠಾಕುರ್ ಆರಂಭಿಕ ಮಾತುಗಳನ್ನು ಆಡಲಿದ್ದರೆ, ಮೊದಲ ಬಾರಿಯ ಸಂಸದೆ ಬಾನ್ಸುರಿ ಸ್ವರಾಜ್ ಅದನ್ನು ಅನುಮೋದಿಸಲಿದ್ದಾರೆ. ಚರ್ಚೆಗೆ 16 ಗಂಟೆಗಳನ್ನು ನೀಡಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ತಮ್ಮ ಉತ್ತರದೊಂದಿಗೆ ಚರ್ಚೆ ಮತ್ತು ಕಲಾಪ ಕೊನೆಗೊಳಿಸಲಿದ್ದಾರೆ. ರಾಜ್ಯಸಭೆಗೆ 21 ಗಂಟೆಗಳನ್ನು ನಿಗದಿಪಡಿಸಲಾಗಿದ್ದು, ಪ್ರಧಾನಿ ಬುಧವಾರ ಇಲ್ಲಿ ಉತ್ತರಿಸಲಿದ್ದಾರೆ.
___ರಾಜ್ಯಸಭೆಯಲ್ಲಿ ಈಗಾಗಲೇ ಈ ಕುರಿತ ಚರ್ಚೆ ಆರಂಭಿಸಿರುವ ಬಿಜೆಪಿ ಸದಸ್ಯ ಸುಧಾಂಶು ತ್ರಿವೇದಿ, ಪ್ರಧಾನಿ ಮೋದಿಯವರನ್ನು ಹೋಲಿಕೆಯಿಲ್ಲದ ವ್ಯಕ್ತಿ. ಅವರು ದೇಶದ ಸಮಸ್ಯೆಗಳನ್ನು ಎದುರಿಸುವ ರೀತಿಯು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ವಿಧಾನಗಳಿಗಿಂತ ಭಿನ್ನವಾಗಿವೆ ಎಂದು ಬಣ್ಣಿಸಿದ್ದಾರೆ.