ರಾಮನಿಗೆ ಬೆಳ್ಳಿ ಛತ್ರ, ಕೆಂಪು ವಸ್ತ್ರ ಸಮರ್ಪಿಸಿದ ನರೇಂದ್ರ ಮೋದಿ

KannadaprabhaNewsNetwork | Updated : Jan 23 2024, 11:44 AM IST

ಸಾರಾಂಶ

ಶ್ರೀರಾಮನಿಗೆ ವಸ್ತ್ರವನ್ನು ಪ್ರಧಾನಿ ಮೋದಿ ದೇಣಿಗೆ ನೀಡಿದ್ದಾರೆ. ಸರಯೂ ನದಿಯ ದಡದಲ್ಲಿ 10 ಲಕ್ಷ ದೀಪಗಳನ್ನು ಬೆಳಗಿಸಲಾಗಿದೆ. ಇದರ ಜೊತೆಗೆ ಕಾರ್ಯಕ್ರಮದ ನಂತರ ಮಂದಿರ ಕಟ್ಟಿದ ಕಾರ್ಮಿಕರಿಗೆ ಮೋದಿ ಪುಷ್ಪಾರ್ಚನೆ ಮಾಡಿದರು.

ಅಯೋಧ್ಯೆ: ರಾಮಪ್ರತಿಷ್ಠಾಪನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೆ ಬೆಳ್ಳಿ ಛತ್ರ ಹಾಗೂ ಕೆಂಪು ವಸ್ತ್ರ ಸಮರ್ಪಿಸಿದರು. ಪ್ರತಿಷ್ಠಾಪನೆಗೆಂದು ಮಂದಿರಕ್ಕೆ ಆಗಮಿಸಿದ ಮೋದಿ ಅವರು ತಮ್ಮ ಕೈಯಲ್ಲಿ ಕೆಂಪು ವಸ್ತ್ರ ಹಾಗೂ ಅದರ ಮೇಲೆ ಇಟ್ಟಿದ್ದ ಛತ್ರವನ್ನು ಹಿಡಿದುಕೊಂಡು ಬಂದರು. 

ನಂತರ ಪೂಜೆಯ ವೇಳೆ ಅವನ್ನು ದೇವರಿಗೆ ಸಮರ್ಪಿಸಿದರು. ಈ ಪೂಜ್ಯ ಸ್ಥಳದಲ್ಲಿ ಮೋದಿಯವರು ನಮನ ಸಲ್ಲಿಸುತ್ತಿರುವಾಗ ಈ ದೃಶ್ಯಾವಳಿಯ ಹಿಂದಿನ ಸಾಂಕೇತಿಕತೆಯು ಆಧ್ಯಾತ್ಮಿಕತೆ ಮತ್ತು ನಾಯಕತ್ವದ ಮಿಶ್ರಣವನ್ನು ಪ್ರತಿಧ್ವನಿಸುತ್ತದೆ.

ಮಂದಿರ ಕಾರ್ಮಿಕರಿಗೆ ಮೋದಿ ಪುಷ್ಪಾರ್ಚನೆ
ಉತ್ತರ ಪ್ರದೇಶದಲ್ಲಿನ ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾದ ಕಾರ್ಮಿಕರ ಮೇಲೆ ಹೂವಿನ ದಳಗಳನ್ನು ಎರಚುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು. 

ಪ್ರಾಣಪ್ರತಿಷ್ಠಾಪನೆಯ ಬಳಿಕ ಮಂದಿರ ನಿರ್ಮಾಣ ಮಾಡಿದ ಕಾರ್ಮಿಕರು ಕುಳಿತಿದ್ದೆಡೆಗೆ ಆಗಮಿಸಿದ ಪ್ರಧಾನಿ, ಕಾರ್ಮಿಕರ ಮೇಲೆ ಹೂವಿನ ಪಕಳೆಗಳನ್ನು ಎರಚಿದರು. ಬಳಿಕ ಮಾತನಾಡಿದ ಅವರು ಕಾರ್ಮಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಸರಯೂ ತಟದಲ್ಲಿ 10 ಲಕ್ಷ ದೀಪ ಬೆಳಗಿ ದೀಪೋತ್ಸವ
ಶ್ರೀರಾಮ ಪ್ರತಿಷ್ಠಾಪನೆ ಸಂಭ್ರಮದಿಂದ ಸಂಪನ್ನಗೊಂಡ ನಿಮಿತ್ತ ಸೋಮವಾರ ಸಂಜೆ ಸರಯೂ ನದಿ ದಂಡೆಯಲ್ಲಿ 10 ಲಕ್ಷ ದೀಪಗಳನ್ನು ಬೆಳಗಿ ದೀಪೋತ್ಸವ ಆಚರಿಸಲಾಯಿತು.

ಸರಯೂ ನದಿಯ ರಾಮ್‌ ಕೀ ಪೈಡಿಯಲ್ಲಿ ಆರತಿ ಬೆಳಗುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ನದಿ ದಂಡೆ ಹಾಗೂ ಅಯೋಧ್ಯೆಯ ಆಯಕಟ್ಟಿನ ಸ್ಥಳಗಳಲ್ಲಿ ಇರಿಸಲಾಗಿದ್ದ 10 ಲಕ್ಷ ದೀಪಗಳನ್ನು ಬೆಳಗಲಾಯಿತು. ಇಡೀ ನದಿ ದಂಡೆಯು ದೀಪಗಳಿಂದ ಝಗಮಗಿಸಿ ದೀಪಾವಳಿಯನ್ನು ನೆನಪಿಸಿತು.

Share this article