ದಸರಾ ನಿಮಿತ್ತ ‘ಗರ್ಬಾ’ ಹಾಡು ಬರೆದ ಪ್ರಧಾನಿ ನರೇಂದ್ರ ಮೋದಿ : ದುರ್ಗಾ ದೇವಿಗೆ ಸಮರ್ಪಣೆ

KannadaprabhaNewsNetwork |  
Published : Oct 08, 2024, 01:04 AM ISTUpdated : Oct 08, 2024, 04:47 AM IST
ಗರ್ಬಾ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ದಸರಾ ಪ್ರಯುಕ್ತ ದುರ್ಗಾ ದೇವಿಗೆ ಗೌರವಾರ್ಥವಾಗಿ ಬರೆದ ‘ಗರ್ಬಾ’ ಹಾಡನ್ನು ಸೋಮವಾರ ಟ್ವೀಟ್ ಮಾಡಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದಸರಾ ಪ್ರಯುಕ್ತ ದುರ್ಗಾ ದೇವಿಗೆ ಗೌರವಾರ್ಥವಾಗಿ ಬರೆದ ‘ಗರ್ಬಾ’ ಹಾಡನ್ನು ಸೋಮವಾರ ಟ್ವೀಟ್ ಮಾಡಿದ್ದಾರೆ.

ಈ ‘ಗರ್ಬಾ’ ಹಾಡನ್ನು ಪೂರ್ವಾ ಮಂತ್ರಿ ಎಂಬ ಗಾಯಕಿ ಹಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ‘ಪ್ರತಿಭಾನ್ವಿತ ಉದಯೋನ್ಮುಖ ಗಾಯಕಿ ಕಂಠದಿಂದ ಇದು ಮೂಡಿಬಂದಿದೆ. ಇದು ನವರಾತ್ರಿಯ ಮಂಗಳಕರ ಸಮಯ ಮತ್ತು ಜನರು ದುರ್ಗೆಯ ಮೇಲಿನ ಭಕ್ತಿಯಿಂದ ಒಂದಾಗಿ ವಿವಿಧ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಅದಕ್ಕೆಂದೇ ನಾನು ಗರ್ಬಾ ಹಾಡು ಬರೆದೆ. ದೇವಿಯ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಗರ್ಬಾ ಒಂದು ಸಾಂಪ್ರದಾಯಿಕ ಗುಜರಾತಿ ನೃತ್ಯ. ಇದು ಅಂಬಾ ಗರ್ಬಾ ದೇವಿಯ ಒಂದು ಗೀತೆಯಾಗಿದೆ ಮತ್ತು ವಿಶೇಷವಾಗಿ ನವರಾತ್ರಿ ಉತ್ಸವದಲ್ಲಿ ನೃತ್ಯ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ.

ಮಾಲ್ಡೀವ್ಸ್‌ಗೆ ಭಾರತ ಹಲವು ಕೊಡುಗೆ

 ನವದೆಹಲಿ :  ಕಳೆದ ವರ್ಷ ಪ್ರವಾಸೋದ್ಯಮ ವಿಚಾರವಾಗಿ ಕಿತ್ತಾಡಿಕೊಂಡಿದ್ದ ಮಾಲ್ಡೀವ್ಸ್‌-ಭಾರತ ಸಂಬಂಧ ಈಗ ಸುಧಾರಿಸಿದೆ. ಸೋಮವಾರ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ - ಮಾಲ್ಡೀವ್ಸ್‌ನಲ್ಲಿ ರುಪೇ ಕಾರ್ಡ್‌ ಬಳಕೆಗೆ ಚಾಲನೆ ನೀಡಲಾಯಿತು. ಇದೇ ವೇಳೆ ಭಾರತದ ಸಹಕಾರದಲ್ಲಿ ನಿರ್ಮಿಸಲಾಗಿರುವ ಏರ್‌ಪೋರ್ಟ್‌ ರನ್‌ವೇಯೊಂದನ್ನು ಉಭಯ ನಾಯಕರು ದಿಲ್ಲಿಯಿಂದಲೇ ವರ್ಚುವಲ್ ಆಗಿ ಉದ್ಘಾಟಿಸಿದರು.

ಭಾರತದ ಪ್ರವಾಸಿಗರನ್ನೇ ಮಾಲ್ಡೀವ್ಸ್‌ ನೆಚ್ಚಿದ್ದು, ಭಾರತದಲ್ಲಿ ನೀಡಲಾಗಿರುವ ರುಪೇ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳನ್ನು ಭಾರತೀಯರು ಮಾಲ್ಡೀವ್ಸ್‌ನಲ್ಲಿ ಇನ್ನು ಬಳಸಿ ನಗದು ರಹಿತ ವಹಿವಾಟು ನಡೆಸಬಹುದಾಗಿದೆ.ಇನ್ನು ಹನಿಮಧೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ರನ್‌ವೇಯನ್ನು ಭಾರತದ ಸಹಕಾರದೊಂದಿಗೆ ನಿರ್ಮಿಸಲಾಗಿದೆ.ಇದೇ ವೇಳೆ, ಎಕ್ಸಿಮ್‌ ಬ್ಯಾಂಕ್‌ ಸಹಕಾರದಲ್ಲಿ ನಿರ್ಮಿಸಲಾದ 700 ಮನೆಗಗಳನ್ನು ಭಾರತವು ಮಾಲ್ಡೀವ್ಸ್‌ಗೆ ಹಸ್ತಾಂತರಿಸಿತು.

ಸೆನ್ಸೆಕ್ಸ್‌ 638 ಅಂಕ ಕುಸಿತ; 6ನೇ ದಿನವೂ ಷೇರುಪೇಟೆ ಇಳಿಕೆ: 27 ಲಕ್ಷ ಕೋಟಿ ನಷ್ಟ

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಸೋಮವಾರ 638 ಅಂಕಗಳ ಭಾರೀ ಕುಸಿತ ಕಂಡು 81050 ಅಂಕಗಳಲ್ಲಿ ಮುಕ್ತಾಯವಾಗಿದೆ. ಮಧ್ಯಂತರದ ಅವಧಿಯಲ್ಲಿ 962 ಅಂಕಗಳವರೆಗೂ ಸೆನ್ಸೆಕ್ಸ್‌ ಕುಸಿದಿತ್ತು. ಇನ್ನೊಂದೆಡೆ ನಿಫ್ಟಿ 218 ಅಂಕ ಇಳಿದು 24795ರಲ್ಲಿ ಅಂತ್ಯವಾಗಿದೆ. ಇದರೊಂದಿಗೆ ಸತತ 6ನೇ ದಿನ ಷೇರುಪೇಟೆ ಇಳಿಕೆ ಹಾದಿಯಲ್ಲಿ ಸಾಗಿದಂತಾಗಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟು, ಹೂಡಿಕೆದಾರರು ಲಾಭಕ್ಕೆ ಮುಂದಾಗಿದ್ದು, ಷೇರುಪೇಟೆ ಓವರ್‌ವೇಟ್‌ ಆಗಿದೆ ಎಂಬ ವರದಿ, ಜಾಗತಿಕ ಷೇರುಪೇಟೆ ಇಳಿಕೆ ಭಾರತದ ಷೇರುಪೇಟೆ ಮೇಲೂ ಪರಿಣಾಮ ಬೀರಿದೆ. ಸೋಮವಾರದ ಷೇರುಪೇಟೆ ಕುಸಿತದ ಪರಿಣಾಮ ಹೂಡಿಕೆದಾರರಿಗೆ ಅಂದಾಜು 9 ಲಕ್ಷ ಕೋಟಿ ರು. ಮತ್ತು 6 ದಿನದಲ್ಲಿ 27 ಲಕ್ಷ ಕೋಟಿ ರು.ನಷ್ಟವಾಗಿದೆ.

ಶತಕ ಬಾರಿಸಿದ ಟೊಮೆಟೋ ಬೆಲೆ

ನವದೆಹಲಿ: ಕಳೆದ ಕೆಲ ವರ್ಷಗಳಂತೆ ಈ ವರ್ಷವೂ ಟೊಮೆಟೋ ದರ ಗ್ರಾಹಕರಲ್ಲಿ ಕಣ್ಣೀರು ತರಿಸುವ ಎಲ್ಲಾ ಸಾಧ್ಯತೆಗಳು ಕಂಡುಬಂದಿವೆ. ಕಾರಣ ಮಳೆಗಾಲ ಮುಗಿಯುವ ಹೊತ್ತಿನಲ್ಲೇ ಹೈದ್ರಾಬಾದ್‌, ನಾಸಿಕ್‌ ಸೇರಿದಂತೆ ದೇಶದ ಕೆಲ ನಗರಗಳಲ್ಲಿ 1 ಕೆಜಿ ಟೊಮೆಟೋ ಬೆಲೆ 100 ರು. ತಲುಪಿದೆ.

ಅತಿ ಹೆಚ್ಚು ಟೊಮೆಟೋ ಬೆಳೆಯುವ ಸ್ಥಳಗಳಲ್ಲೊಂದಾಗಿರುವ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬೆಳೆಗಳಿಗೆ ವೈರಸ್‌ ತಗುಲಿದೆ ಮತ್ತು ಅಕಾಲಿಕ ಮಳೆ ಸಂಭವಿಸಿದೆ. ಇದರಿಂದ ಶೇ.15ರಷ್ಟು ಬೆಳೆ ಮಾತ್ರ ರೈತರಿಗೆ ಸಿಕ್ಕಿರುವುದರಿಂದ ಇಲ್ಲಿ ದರ ಹೆಚ್ಚಾಗಿದೆ. ಮತ್ತೊಂದೆಡೆ ಹೈದರಾಬಾದ್‌ನಲ್ಲಿಯೂ ಟೊಮೆಟೊ ಪ್ರತಿ ಕೇಜಿಗೆ ನೂರರ ಸನಿಹದಲ್ಲಿದೆ. ಇದರ ನಡುವೆ ದೆಹಲಿಯಲ್ಲಿ ಟೊಮೆಟೊ ಬೆಲೆ ನಿಯಂತ್ರಣಕ್ಕೆ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ(ಎನ್‌ಸಿಸಿಎಫ್‌) ಮಧ್ಯಪ್ರವೇಶಿಸಿದ್ದು, 50 ಸ್ಥಳಗಳಲ್ಲಿ ಕೇಜಿಗೆ 65 ರು, ದರದಲ್ಲಿ ಸಬ್ಸಿಡಿ ರೂಪದಲ್ಲಿ ಟೊಮೆಟೊ ಮಾರಾಟ ಮಾಡಲು ಮುಂದಾಗಿದೆ.ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರದಂತಹ ಪ್ರಮುಖ ಉತ್ಪದನಾ ರಾಜ್ಯಗಳಲ್ಲಿ ದೀರ್ಘಕಾಲದ ಮಾನ್ಸೂನ್ ಮಳೆಯಿಂದ ಬೆಲೆ ಹಾಳಾಗಿರುವುದು ದರ ಹೆಚ್ಚಳಕ್ಕೆ ಕಾರಣ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೇಶದ ಸಂಸದೀಯ ಇತಿಹಾಸದಲ್ಲೇ ಕಂಡುಕೇಳರಿಯದ ಸಂಗತಿ : ಪ್ರಧಾನಿ ಮೋದಿ ಮೇಲೆ ಹಲ್ಲೆಗೆ ಯತ್ನ?
3 ತಿಂಗಳ ಹಿಂದೆ ಮದ್ವೆ, ಈಗ ಲವರ್‌ ಜತೆ ಸೇರಿ ಪತಿ ಹತ್ಯೆ!