ಶಾಂತಿ ಸ್ಥಾಪನೆಗೆ ನೆರವು: ಪುಟಿನ್‌ಗೆ ಮೋದಿ ಭರವಸೆ

KannadaprabhaNewsNetwork |  
Published : Aug 28, 2024, 12:48 AM IST
ಮೋದಿ | Kannada Prabha

ಸಾರಾಂಶ

ಇತ್ತೀಚೆಗಷ್ಟೇ ಉಕ್ರೇನ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಭೇಟಿಯ ಒಳನೋಟವನ್ನು ಮಂಗಳವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ಕರೆ ಮಾಡಿ ಅವರ ಜೊತೆ ಹಂಚಿಕೊಂಡಿದ್ದಾರೆ.

ನವದೆಹಲಿ: ಇತ್ತೀಚೆಗಷ್ಟೇ ಉಕ್ರೇನ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಭೇಟಿಯ ಒಳನೋಟವನ್ನು ಮಂಗಳವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ಕರೆ ಮಾಡಿ ಅವರ ಜೊತೆ ಹಂಚಿಕೊಂಡಿದ್ದಾರೆ. ಅಲ್ಲದೆ ಉಭಯ ದೇಶಗಳ ನಡುವೆ ಶೀಘ್ರ ಶಾಂತಿ ಪುನರ್‌ಸ್ಥಾಪನೆಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಮತ್ತೊಮ್ಮೆ ಭರವಸೆ ನೀಡಿದ್ದಾರೆ.

ಈ ಕುರಿತು ಟ್ವೀಟರ್‌ನಲ್ಲಿ ಮಾಹಿತಿ ನೀಡಿರುವ ಮೋದಿ, ‘ರಷ್ಯಾ- ಉಕ್ರೇನ್‌ ಸಂಘರ್ಷದ ಕುರಿತ ದೃಷ್ಟಿಕೋನ ಮತ್ತು ನನ್ನ ಇತ್ತೀಚಿನ ಉಕ್ರೇನ್ ಭೇಟಿಯ ಒಳನೋಟದ ಕುರಿತು ರಷ್ಯಾ ಅಧ್ಯಕ್ಷ ಪುಟಿನ್‌ ಜೊತೆಗಿನ ದೂರವಾಣಿ ಮಾತುಕತೆ ವೇಳೆ ಹಂಚಿಕೊಂಡೆ. ಜೊತೆಗೆ, ಸಂಘರ್ಷ ಕೊನೆಗಾಣಿಸಿ ಶಾಂತಿ ಮರುಸ್ಥಾಪನೆಗೆ ಅಗತ್ಯವಾದ ಎಲ್ಲಾ ನೆರವು ನೀಡಲು ಭಾರತ ಬದ್ಧ ಎಂಬ ನಿಲುವನ್ನೂ ಪುನರುಚ್ಚರಿಸಿದ್ದೇನೆ. ಇದೇ ವೇಳೆ ನಾವಿಬ್ಬರೂ ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ಸಂಬಂಧವನ್ನು ಮತ್ತಷ್ಟ ಬಲಗೊಳಿಸುವ ಬಗ್ಗೆಯೂ ಚರ್ಚೆ ನಡೆಸಿದೆವು’ ಎಂದು ಹೇಳಿದ್ದಾರೆ.

ಉಕ್ರೇನ್‌ ಭೇಟಿಯ ವೇಳೆ ಅಲ್ಲಿನ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್ಸ್ಕಿ ಅವರಿಗೂ ಶಾಂತಿ ಸ್ಥಾಪನೆಗೆ ಮೋದಿ ಕರೆ ನೀಡಿದ್ದರು.

==

ಮೋದಿ ಉಕ್ರೇನ್‌ ಶಾಂತಿ ಸಂದೇಶಕ್ಕೆ ಬೈಡೆನ್‌ ಮೆಚ್ಚುಗೆವಾಷಿಂಗ್ಟನ್‌: ಸಂಘರ್ಷ ಕೊನೆಗಾಣಿಸಲು ರಷ್ಯಾ ಮತ್ತು ಉಕ್ರೇನ್‌ ರಾಜತಾಂತ್ರಿಕ ಮಾರ್ಗ ಅನುಸರಿಸಬೇಕು. ಆದಷ್ಟು ಶೀಘ್ರ ಶಾಂತಿ ಮರುಸ್ಥಾಪನೆಗೆ ಉಭಯ ದೇಶಗಳು ಮುಂದಾಗಬೇಕು ಎಂಬ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿ ಸಂದೇಶದ ಬಗ್ಗೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೋಲೆಂಡ್‌, ಉಕ್ರೇನ್‌ ಪ್ರವಾಸ ಮುಗಿದ ಬಂದ ಬೆನ್ನಲ್ಲೇ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖುದ್ದು ದೂರವಾಣಿ ಕರೆ ಮಾಡಿದ್ದ ಅಮೆರಿಕ ಅಧ್ಯಕ್ಷ ಈ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಲ್ಲದೆ ಉಕ್ರೇನ್‌ಗೆ ವೈದ್ಯಕೀಯ ನೆರವು ನೀಡುವ ಮೂಲಕ ಮಾನವೀಯ ಕಾರ್ಯಕೈಗೊಂಡ ಭಾರತದ ಬಗ್ಗೆ ಪ್ರಶಂಸೆಯ ಮಾತುಗಳನ್ನೂ ಆಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಬೈಡೆನ್‌ ‘ ಇತ್ತೀಚಿನ ಪೋಲೆಂಡ್‌, ಉಕ್ರೇನ್‌ ಭೇಟಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿದೆ ಮತ್ತು ಅವರ ಶಾಂತಿಯ ಸಂದೇಶ ಹಾಗೂ ಮಾನವೀಯ ನೆರವಿಗಾಗಿ ಪ್ರಶಂಸೆ ವ್ಯಕ್ತಪಡಿಸಿದೆ. ಇದೇ ವೇಳೆ ಇಂಡೋ- ಪೆಸಿಫಿಕ್‌ ವಲಯದಲ್ಲಿ ಶಾಂತಿಗಾಗಿ ಒಂದಾಗಿ ಶ್ರಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದೆ’ ಎಂದು ಹೇಳಿದ್ದಾರೆ.ಪ್ರಧಾನಿ ಮೋದಿ ಕೆಲ ಸಮಯದ ಹಿಂದೆ ರಷ್ಯಾಕ್ಕೆ ಭೇಟಿ ನೀಡಿದ ವೇಳೆಯೂ ಯುದ್ಧ ಸ್ಥಗಿತಗೊಳಿಸಿ ಶಾಂತಿ ಮರುಸ್ಥಾಪನೆಯ ಮಾತುಗಳನ್ನು ಆಡಿದ್ದರು. ಅದಾದ ಬೆನ್ನಲ್ಲೇ ಉಕ್ರೇನ್‌ಗೂ ಭೇಟಿ ನೀಡಿ ಇದೇ ಮಾತುಗಳನ್ನು ಆಡಿದ್ದರು. ಈ ಎರಡೂ ಭೇಟಿಯ ಬಳಿಕ ಬೈಡೆನ್‌ ಮತ್ತು ಮೋದಿ ನಡುವಿನ ಮೊದಲ ಮಾತುಕತೆ ಇದಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸ್ವಾತಂತ್ರ್ಯ ಬಳಿಕ ಮೊದಲ ಬಾರಿಪಾಕ್‌ ವಿವಿಯಲ್ಲಿ ಸಂಸ್ಕೃತ ಕಲಿಕೆ!
ಅಂಡಮಾನ್‌ ದ್ವೀಪದಲ್ಲಿ ಸಾವರ್ಕರ್ ಪ್ರತಿಮೆ ಅನಾವರಣ